33 ವರ್ಷ ಸೇವೆ ಸಲ್ಲಿಸಿ ವಾಪಸ್ಸಾದ ಯೋಧನಿಗೆ ಅದ್ಧೂರಿ ಸ್ವಾಗತ

| Published : Sep 10 2024, 01:37 AM IST

33 ವರ್ಷ ಸೇವೆ ಸಲ್ಲಿಸಿ ವಾಪಸ್ಸಾದ ಯೋಧನಿಗೆ ಅದ್ಧೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಶಿಗ್ಗಾಂವಿ ತಾಲೂಕಿನ ಮುಗಳಿಯ ಮಲ್ಲನಗೌಡ ಭರಮಗೌಡ್ರ ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್ ಹುದ್ದೆಯಿಂದ ನಿವೃತ್ತರಾಗಿ ಮೊದಲ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದ್ಧೂರಿ ಗೌರವದೊಂದಿಗೆ ಮೆರವಣಿಗೆ ಮೂಲಕ ಬರಮಾಡಿಕೊಂಡರು.

ಶಿಗ್ಗಾಂವಿ: ತಾಲೂಕಿನ ಮುಗಳಿಯ ಮಲ್ಲನಗೌಡ ಭರಮಗೌಡ್ರ ಭಾರತೀಯ ಸೇನೆಯಲ್ಲಿ ಸುಬೇದಾರ್ ಮೇಜರ್ ಹುದ್ದೆಯಿಂದ ನಿವೃತ್ತರಾಗಿ ಮೊದಲ ಬಾರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅದ್ಧೂರಿ ಗೌರವದೊಂದಿಗೆ ಮೆರವಣಿಗೆ ಮೂಲಕ ಬರಮಾಡಿಕೊಂಡರು. ಈ ವೇಳೆ ಮಾತನಾಡಿದ ಮಲ್ಲನಗೌಡ ಭರಮಗೌಡ್ರ, ನನ್ನ ತವರು ನೆಲದಲ್ಲಿ ಸನ್ಮಾನ ಮತ್ತು ಸ್ವಾಗತ ಕಂಡು ಭಾವುಕನಾಗಿರುವೆ. ನಮ್ಮೂರಿನ ಪ್ರತಿಯೊಬ್ಬ ಯುವಕರು ವಿದ್ಯಾರ್ಜನೆಗೆ ಆದ್ಯತೆ ನೀಡಬೇಕು. ಬಳಿಕ ತಮಗಿಷ್ಟವಾದ ಉದ್ಯೋಗ ಹುಡುಕಿಕೊಳ್ಳಬೇಕು. ನಾನು ಭಾರತೀಯ ಸೇನೆಯಲ್ಲಿ ೩೩ ವರ್ಷ ಸೇವೆ ಸಲ್ಲಿಸಿರುವುದಕ್ಕೆ ನನಗೆ ಹೆಮ್ಮೆ ಇದೆ ಎಂದರು. ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಟಿ.ಕೆ. ಪಾಟೀಲ ಮಾತನಾಡಿ, ಸತತ ಪರಿಶ್ರಮ ಮೂಲಕ ಭಾರತೀಯ ಸೇನೆಗೆ ಸೇರಿದ ಮಲ್ಲನಗೌಡ ಭರಮಗೌಡ್ರ ಯುವಪೀಳಿಗೆಗೆ ಮಾದರಿ. ನಿವೃತ್ತಿ ಬಳಿಕ ಅವರನ್ನು ಸ್ವಾಗತಿಸುವ ಪರಂಪರೆ ಅನುಕರಣೀಯ. ಮುಂಬರುವ ದಿನಗಳಲ್ಲಿ ಸೇನೆಗೆ ಸೇರುವ ನಮ್ಮೂರಿನ ಯುವಕರನ್ನು ಬೀಳ್ಕೊಡುವ ಮತ್ತು ನಿವೃತ್ತಿ ಬಳಿಕ ಸ್ವಾಗತಿಸುವ ಪದ್ಧತಿಯನ್ನು ಅಳವಡಿಸಿಕೊಳ್ಳೋಣ ಎಂದರು.ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಗೂಳಪ್ಪ ಅರಳಿಕಟ್ಟಿ ಮಾತನಾಡಿ, ನಮ್ಮೂರಿನ ಮಲ್ಲನಗೌಡ ಭರಮಗೌಡ್ರ ಶೈಕ್ಷಣಿಕ ಕಾಳಜಿ ಉಳ್ಳವರು. ನಮ್ಮ ಪ್ರಾಥಮಿಕ ಶಾಲೆಯ ಮುಂಭಾಗದಲ್ಲಿ ಸರಸ್ವತಿ ಪುತ್ಥಳಿ ಹಾಗೂ ಪಿರಂಗಿ ಮಾದರಿಗಳನ್ನು ತಯಾರಿಸಲು ಮತ್ತು ನಮ್ಮ ಹಳೆಯ ವಿದ್ಯಾರ್ಥಿಗಳ ಸಂಘದ ಶ್ರೇಯಸ್ಸಿಗೂ ಧನಸಹಾಯ ನೀಡಿ ಮಾದರಿ ಆಗಿರುವರು. ಅವರನ್ನು ಅಭಿಮಾನದಿಂದ ಆಹ್ವಾನ ನೀಡುತ್ತಿರುವುದಕ್ಕೆ ನಮಗೆ ಸಂಭ್ರಮದ ಭಾವ ಮೂಡಿಸಿದೆ ಎಂದರು.ಗ್ರಾಮದ ಕೃಷಿ ಪತ್ತಿನ ಸಹಕಾರಿ ಸಂಘದಿಂದ ತೆರೆದ ವಾಹನದಲ್ಲಿ ಮೆರವಣಿಗೆ ಶುರುಗೊಂಡಿತು. ಇದಕ್ಕೂ ಮುನ್ನ ಸುಮಂಗಲೆಯರು ಆರತಿ ಬೆಳಗಿ ಸ್ವಾಗತಿಸಿದರು. ಬಳಿಕ ಪುಷ್ಪವೃಷ್ಟಿ ಸುರಿದು ಝಾಂಜ್ ಮೇಳದ ಯುವಕರು ಹೆಜ್ಜೆ ಹಾಕಿದರು. ಈ ವೇಳೆ ಹುತಾತ್ಮ ಯೋಧ ಚಂದ್ರು ಡವಗಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸುಬೇದಾರ್ ಮೇಜರ್ ತಂದೆ ಉಳವನಗೌಡ, ತಾಯಿ ವಿರೂಪಮ್ಮ, ಪತ್ನಿ ಪಾರ್ವತಿ ಅವರನ್ನು ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘ, ಎಸ್‌ಡಿಎಂಸಿ, ಶ್ರೀ ಮಲ್ಲಿಕಾರ್ಜುನ ಯುವಕ ಸಂಘದ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.ಗ್ರಾಮದ ವಿ.ಜಿ. ದುಂಡಪ್ಪನವರ, ಮಹಾದೇವಪ್ಪ ಕಾಮನಹಳ್ಳಿ, ಶಿವಾನಂದ ಬಿಶೆಟ್ಟಿ, ನಿಂಗಪ್ಪ ದುಂಡಪ್ಪನವರ, ಅಶೋಕ ಬೆಂಗೇರಿ, ಚನ್ನಬಸಪ್ಪ ಹುಲಗೂರ, ಈಶ್ವರಗೌಡ ಪಾಟೀಲ, ನಾಗಪ್ಪ ಗೊಬ್ಬಿ, ರಮೇಶ ಅರಳಿಕಟ್ಟಿ, ಮಹಾದೇವಪ್ಪ ತಳವಾರ, ಶಂಕರ ಗೊಬ್ಬಿ ಉಪಸ್ಥಿತರಿದ್ದರು. ಶಿಕ್ಷಕ ಮಂಜುನಾಥ ಬಿಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.