ಸಾರಾಂಶ
ಚನ್ನಪಟ್ಟಣ: ರತ್ನನ ಪದಗಳ ಮೂಲಕ ಜೆ.ಪಿ.ರಾಜರತ್ನಂ ಕರುನಾಡಿನಲ್ಲಿ ಮನೆಮಾತಾಗಿದ್ದಾರೆ. ಅವರ ಜೀವನ ದೃಷ್ಟಿ, ವಿಡಂಬನಾತ್ಮಕ ಧೋರಣೆ, ಮಾತೃಭಾಷಾ ಪ್ರೇಮ, ಅಲ್ಪ ತೃಪ್ತಿ, ಇವುಗಳನ್ನು ಗಣನೆಗೆ ತೆಗೆದುಕೊಂಡರೆ ರತ್ನನಲ್ಲೊಬ್ಬ ಮಹಾ ದಾರ್ಶನಿಕ ಕಂಡು ಬರುತ್ತಾನೆ ಎಂದು ಸಾಹಿತಿ ವಿಜಯ್ ರಾಂಪುರ ತಿಳಿಸಿದರು.
ಪಟ್ಟಣದ ಮಂಜುನಾಥ ಬಡಾವಣೆಯಲ್ಲಿ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಏರ್ಪಡಿಸಿದ್ದ ಸಾಹಿತಿ ಜಿ.ಪಿ.ರಾಜರತ್ನಂ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, 200ಕ್ಕೂ ಹೆಚ್ಚು ಅಮೂಲ್ಯ ಕೃತಿಗಳನ್ನು ರಚಿಸಿ, ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕೀರ್ತಿ ರಾಜರತ್ನಂಗೆ ಸಲ್ಲುತ್ತದೆ ಎಂದರು.ರಾಜರತ್ನಂ ತುತ್ತೂರಿ, ಕಡಲೆಪುರಿ, ಗುಲಗಂಜಿ ಪ್ರಮುಖ ಕೃತಿಗಳನ್ನು ರಚಿಸಿ ಮಕ್ಕಳ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಕನ್ನಡ ಭಾಷಾ ಪ್ರೇಮ ಮರೆಯುವ ಹಾಗೂ ಇಂದಿಗೂ ಹಸಿರಾಗಿರುವ "ರತ್ನನ ಪದಗಳು’ ಅವರ ಮಾತೃಭಾಷಾ ಪ್ರೇಮಕ್ಕೊಂದು ಅತ್ಯುತ್ತಮ ನಿರ್ದಶನವಾಗಿದೆ. ರಾಮನಗರ ಜಿಲ್ಲೆಯವರಾದ ಗುಂಡ್ಲುಪಂಡಿತ ರಾಜರತ್ನಂ ಅವರು ತಮ್ಮ ಬದುಕಿನುದ್ದಕ್ಕೂ ಕನ್ನಡ ಪ್ರೇಮ ಮೆರೆದು ಕನ್ನಡಿಗರ ಹೃದಯದಲ್ಲಿ ಅಮರರಾಗಿದ್ದಾರೆ. ಜಿಲ್ಲೆಯಲ್ಲಿ ಅವರ ಹೆಸರಿನಲ್ಲಿ ಸಾಹಿತ್ಯ ಭವನ ನಿರ್ಮಿಸುವ ಜಿಲ್ಲಾಡಳಿತ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಯುವ ಕವಿ ಅಬ್ಬೂರು ಶ್ರೀನಿವಾಸ್, ಉಪನ್ಯಾಸಕ ಗುರುಪ್ರಸಾದ್, ಎಚ್.ಸಿ. ರಮೇಶ್, ಎಂ.ವಿ.ರಾಘವೇಂದ್ರ ಪ್ರಸಾದ್, ಅಚಲ ಆರ್.ವಿ., ಅನಿತಾ ಆರ್.ಜಿ, ಎಂ.ಸಿ. ಮೀನಾಕ್ಷಿ ಇದ್ದರು. ಪೊಟೋ೭ಸಿಪಿಟಿ೧:ಚನ್ನಪಟ್ಟಣದಲ್ಲಿ ನೇಗಿಲಯೋಗಿ ಸಾಂಸ್ಕೃತಿಕ ಟ್ರಸ್ಟ್ ಆಯೋಜಿಸಿದ್ದ ಸಾಹಿತಿ ಜಿ.ಪಿ.ರಾಜರತ್ನಂ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ರಾಜರತ್ನಂ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.