- ಆನೆಕೊಂಡ ಬಡಾವಣೆ, ಮಟ್ಟಿಕಲ್ಲು ಪ್ರದೇಶದಲ್ಲಿ 2 ಕಾರು, 11ಕ್ಕೂ ಹೆಚ್ಚು ಬೈಕ್‌, ಸ್ಕೂಟರ್‌ಗಳು ಜಖಂ

- ಬೇತೂರು ರಸ್ತೆಯ ಕಲ್ಲು ತೂರಾಟ ಪ್ರಕರಣಗಳಡಿ ಎರಡೂ ಕೋಮಿನ 18 ಜನರಿಗೆ ನ್ಯಾಯಾಂಗ ಬಂಧನ

- - - - ಮನೆ, ವಾಹನಗಳೆನ್ನದೇ ಕಲ್ಲು ತೂರುತ್ತಾ, ಕೇಕೆ ಹಾಕಿ ಅಬ್ಬರಿಸಿದ ದುಷ್ಕರ್ಮಿಗಳ ಬಗ್ಗೆ ನಾಗರಿಕರ ಕಿಡಿ

- ರಾತ್ರಿಯಿಡೀ ಆನೆಕೊಂಡ ಬಡಾವಣೆ, ಮಟ್ಟಿಕಲ್ಲು ಭಾಗದ ಮಹಿಳೆ, ಮಕ್ಕಳು, ವಯೋವೃದ್ಧರಲ್ಲಿ ಆತಂಕ

- ಹೋಟೆಲ್ ನಾಮಫಲಕವನ್ನೇ ರಕ್ಷಣೆಯಾಗಿಸಿಕೊಂಡು ಗುಂಪು ಚದುರಿಸಿದ ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ - - - ಕನ್ನಡಪ್ರಭ ವಾರ್ತೆ ದಾವಣಗೆರೆ


ಗಣೇಶೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟಕ್ಕಷ್ಟೇ ಮುಗಿಯದ ಕಿಡಿಗೇಡಿಗಳ ಉಪಟಳ ಇಲ್ಲಿನ ಆನೆಕೊಂಡ ಬಡಾವಣೆ, ಮಟ್ಟಿಕಲ್ಲು ಪ್ರದೇಶದಲ್ಲಿ ತಡರಾತ್ರಿವರೆಗೂ ಮುಂದುವರಿದಿದ್ದು, 70-80 ಜನರ ಅನ್ಯಕೋಮಿನ ಗುಂಪು ಕೈಯಲ್ಲಿ ಕಾರದಪುಡಿ, ದೊಣ್ಣೆ, ಮಚ್ಚು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಸುತ್ತಾಡುವ ಮೂಲಕ ಜನರಲ್ಲಿ ಭಯ ಹುಟ್ಟುಹಾಕಿದೆ.

ನಗರದ ಆನೆಕೊಂಡ ಬಡಾವಣೆ, ಮಟ್ಟಿಕಲ್ಲು ಪ್ರದೇಶಗಳಲ್ಲಿ ಮನೆಗಳ ಮುಂಭಾಗ ನಿಲ್ಲಿಸಿದ್ದ ಕಾರು, ಬೈಕ್‌ಗಳು, ಇತರೆ ವಾಹನಗಳನ್ನು ಜಖಂಗೊಳಿಸಲಾಗಿದೆ. ಮನೆಗಳ ಮೇಲೆ, ಕಿಟಕಿ, ಬಾಗಿಲುಗಳಿಗೆ ಕಲ್ಲುಗಳನ್ನು ಬೀಸಲಾಗಿದ್ದು, ಮಹಿಳೆಯರು, ಮಕ್ಕಳು, ವಯೋವೃದ್ಧರಲ್ಲಿ ಆತಂಕ ಸೃಷ್ಟಿಸಿದ್ದರಿಂದ ಮನೆ ಮಂದಿ ಇಡೀ ರಾತ್ರಿ ಆತಂಕ ಎದುರಿಸಿದ್ದಾರೆ.

ಅರಳೀಮರದ ಬಳಿ ಗಣೇಶ ಮೆರವಣಿಗೆ ಮೇಲೆ ಕಲ್ಲು ಎಸೆಯುವುದರೊಂದಿಗೆ ಶುರುವಾದ ಗಲಾಟೆ ನೂರಾನಿ ಶಾದಿ ಮಹಲ್, ಆನೆಕೊಂಡ, ಚಿಗಟೇರಿ ಮಿಲ್ ಖಾಲಿ ಜಾಗ ಸೇರಿದಂತೆ ಎಲ್ಲ ಕಡೆಗಳಿಗೂ ಹರಡಿತ್ತು. ಕಿಡಿಗೇಡಿಗಳು ಬೈಕ್‌ಗಳಲ್ಲಿ ಸುತ್ತಾಡುತ್ತ ಕಲ್ಲುಗಳನ್ನು ತೂರುತ್ತಾ, ಭಯದ ವಾತಾವರಣ ಸೃಷ್ಟಿಸಿದ್ದರು. ವಿಷಯ ತಿಳಿದು ಪೊಲೀಸ್ ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುತ್ತಿದ್ದಂತೆ ಗುಂಪು ಚದುರಿಹೋಗುತ್ತಿತ್ತು. ಒಂದು ಹಂತದಲ್ಲಂತೂ ಸಹನೆ, ತಾಳ್ಮೆ ಕಳೆದುಕೊಂಡ ಮಟ್ಟಿಕಲ್ಲು ಪ್ರದೇಶದ ಮಹಿಳೆಯರು ತಾವೇ ಮನೆಯ ಹೊರಗೆ ಬಂದು, ತಿರುಗೇಟು ನೀಡಲು ಮುಂದಾದ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.

ಹಿಂದುಗಳ ಮನೆ, ವಾಹನಗಳೇ ಟಾರ್ಗೆಟ್:

ಇತ್ತ ಆನೆಕೊಂಡ ಬಡಾವಣೆ, ಮಟ್ಟಿಕಲ್ಲು ಪ್ರದೇಶದಲ್ಲಿ ಸಾರ್ವಜನಿಕರ ವಸತಿ ಪ್ರದೇಶಕ್ಕೆ ಕಿಡಿಗೇಡಿಗಳು ದಾಂಗುಡಿ ಇಟ್ಟು, ದಾಂಧಲೆ ಮಾಡಿದ್ದರಿಂದ ಮಹಿಳೆಯರೂ ಆಕ್ರೋಶಗೊಂಡಿದ್ದರು. ಇಲ್ಲಿ 2 ಕಾರುಗಳು, ಮನೆ ಮುಂದೆ ನಿಲ್ಲಿಸಿದ್ದ 11ಕ್ಕೂ ಹೆಚ್ಚು ಬೈಕ್‌, ಸ್ಕೂಟರ್‌ಗಳು ಜಖಂಗೊಂಡಿವೆ. ಬೈಕ್‌ಗಳನ್ನು ಬೀಳಿಸಿ, ಕೇಕೆ ಹಾಕುತ್ತಾ ಗುಂಪು ಮನೆಗಳು, ಬಾಗಿಲು, ಕಿಟಕಿಗಳತ್ತ ಕಲ್ಲು ಎಸೆಯುತ್ತಿತ್ತು. ಹಿಂದುಗಳ ಮನೆಗಳು, ವಾಹನಗಳನ್ನೇ ಗುರಿಯಾಗಿಸಿಕೊಂಡು ಅನ್ಯಕೋಮಿನ ಪುಂಡರ ಗುಂಪು ದಾಂಧಲೆ ಮಾಡಿದ್ದಾರೆ. ಘಟನೆ ಹಿನ್ನೆಲೆ ಆನೆಕೊಂಡದ ಶಿವ ಪೆಟ್ರೋಲ್ ಬಂಕ್ ಸಮೀಪದ ನಿವಾಸಿಯೊಬ್ಬರು ಆರ್‌ಎಂಸಿ ಯಾರ್ಡ್‌ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.

15-20 ಜನರ ವಿರುದ್ಧ ದೂರು:

ಸುಮಾರು 15-20 ಪುಂಡರು ಅಕ್ರಮ ಗುಂಪು ಕಟ್ಟಿಕೊಂಡು, ಕೈಯಲ್ಲಿ ಕಣಗಿ, ಕೋಲು, ಕಲ್ಲು ಇತರೆ ವಸ್ತುಗಳನ್ನು ಹಿಡಿದುಕೊಂಡು, ಬಂದು ಹಲ್ಲೆ ಮಾಡಿದ್ದಾರೆ. ಮನೆ ಮುಂದೆ ಇದ್ದ ಸ್ವಿಫ್ಟ್ ಕಾರು ಜಖಂಗೊಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಬೂಬ್ ಖಾನ್‌, ಮೊಹಮ್ಮದ್ ಸೈಯದ್ ರಫೀಕ್, ನಬೀವುಲ್ಲಾ, ಮಹಮ್ಮದ್‌, ಇಲಿಯಾಸ್‌, ಸೈಯದ್‌, ಸಿಕಂದರ್‌, ಮಲ್ಲಿಕಾ, ರಿಯಾನ್, ಮೆಹಬೂಬ್ ಬಾಷಾ ಸೇರಿದಂತೆ 15-20 ಜನರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

2 ಕೋಮುಗಳ 18 ಜನರ ಬಂಧನ:

ಬೇತೂರು ರಸ್ತೆಯ ಕಲ್ಲು ತೂರಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡೂ ಕೋಮಿನ ಒಟ್ಟು 18 ಜನರನ್ನು ಪೊಲೀಸರು ಬಂಧಿಸಿ, ಇಲ್ಲಿನ ಎಂಸಿಸಿ ಎ ಬ್ಲಾಕ್‌ನಲ್ಲಿರುವ ನ್ಯಾಯಾಧೀಶ ಪ್ರಶಾಂತ್‌ರ ನಿವಾಸಕ್ಕೆ ಕರೆ ಭಾರೀ ಬಂದೋಬಸ್ತ್‌ನಲ್ಲಿ ಕರೆ ತಂದು, ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು. ಬಂಧಿತ 18 ಜನರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಸವ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗಲಭೆಗೆ ಸಂಬಂಧಿಸಿದ 2 ಪ್ರಕರಣ, ಬೇತೂರು ರಸ್ತೆಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ 7 ಜನರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.

- - - ಬಾಕ್ಸ್‌ * ನಾಮಫಲಕ ಕೈಯಲ್ಲಿಡಿದು, ನುಗ್ಗಿದ ಡಿವೈಎಸ್ಪಿ! ಕಲ್ಲು ತೂರಾಟದ ವೇಳೆ ಗಣೇಶ ದೇವಸ್ಥಾನ ಪಕ್ಕದ ರಸ್ತೆಯಲ್ಲಿ ಕಳೆದ ರಾತ್ರಿ ನಗರ ಡಿವೈಎಸ್‌ಪಿ ಮಲ್ಲೇಶ ದೊಡ್ಮನಿ ಪ್ರಾಣದ ಹಂಗು ತೊರೆದು, ಗಲಭೆ ನಿಯಂತ್ರಿಸಲು ಮಾಡಿದ ಹರಸಾಹಸ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ನಗರ ಡಿವೈಎಸ್‌ಪಿ ಮಲ್ಲೇಶ ದೊಡ್ಮನೆ ಕಲ್ಲು ತೂರಾಟವನ್ನೂ ಲೆಕ್ಕಿಸದೇ, ರಸ್ತೆಯ ಬದಿ ಹೋಟೆಲ್ ಮುಂದೆ ಇಟ್ಟಿದ್ದ ನಾಮಫಲಕವನ್ನೇ ತಮ್ಮ ರಕ್ಷಣೆಗೆ ಹಿಡಿದುಕೊಂಡು, ಕೈಯಲ್ಲಿ ಲಾಠಿ ಹಿಡಿದು, ಕಲ್ಲು ತೂರಾಟ ಮಾಡುತ್ತಿದ್ದವರ ಕಡೆಗೆ ನುಗ್ಗಿ, ಗುಂಪು ಚೆದುರಿವಲ್ಲಿ ಸಫಲರಾದರು. ಸದ್ಯ ಡಿವೈಎಸ್‌ಪಿ ದೊಡ್ಮನಿ ಸಾಹಸದ ದೃಶ್ಯಗಳು ಈಗ ವೈರಲ್ ಆಗಿ, ಜನರ ಪ್ರಶಂಸೆಗೆ ಪಾತ್ರವಾಗಿದೆ.

- - - - (ಫೋಟೋ ಬರಲಿವೆ)