ಸಾಧಕರು, ಶ್ರದ್ಧಾ-ಭಕ್ತಿ ಹಾಗೂ ಸತತ ಪ್ರಯತ್ನದಿಂದ ಮಾತ್ರ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಸಾಧ್ಯ.

ಧಾರವಾಡ:

ಭಾರತೀಯ ಪರಂಪರೆಯಲ್ಲಿ ಗುರುವಿಗೆ ಅಗ್ರಸ್ಥಾನ ನೀಡಲಾಗಿದೆ. ಗುರು ಕೇವಲ ವ್ಯಕ್ತಿಯಲ್ಲ. ವ್ಯಕ್ತಿಯಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಿ, ಅವರ ವ್ಯಕ್ತಿತ್ವ ರೂಪಿಸುವ ಶಕ್ತಿಯಾಗಿದ್ದಾರೆ ಎಂದು ಆಕಾಶವಾಣಿ ಕಾರ್ಯಕ್ರಮ ಅಧಿಕಾರಿ ಕುಮಾರ ಅಗಡಿ ಹೇಳಿದರು.

ವರಕವಿ ಡಾ. ದ.ರಾ. ಬೇಂದ್ರೆ ಭವನದಲ್ಲಿ ನಾವೀಕಾ ರಂಗಭೂಮಿ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಗುರು ನಮನ ಸಂಗೀತ್ಯೋತ್ಸವ ಉದ್ಘಾಟಿಸಿದ ಅವರು, ಸಾಧಕರು, ಶ್ರದ್ಧಾ-ಭಕ್ತಿ ಹಾಗೂ ಸತತ ಪ್ರಯತ್ನದಿಂದ ಮಾತ್ರ ತಮ್ಮ ಕ್ಷೇತ್ರದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.

ಹುಬ್ಬಳ್ಳಿ ಶಹರ ಉತ್ತರ ವಲಯದ ಸಹಾಯಕ ಪೊಲೀಸ್‌ ಆಯುಕ್ತ ಡಾ. ಶಿವಾನಂದ ಚಲವಾದಿ, ಪ್ರತಿಯೊಂದು ಕ್ಷೇತ್ರದ ಕಲಿಕೆಯಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಷ್ಯರಲ್ಲಿರುವ ಲೋಪ-ದೋಷ ತಿದ್ದುವ ಮೂಲಕ ಅವರು ಆಯ್ಕೆ ಮಾಡಿಕೊಂಡ ಕ್ಷೇತ್ರದಲ್ಲಿ ಮುನ್ನಡೆಯಲು ಗುರುಗಳು ಕಾರಣಿಕರ್ತರಾಗಿರುತ್ತಾರೆ. ಎಲ್ಲರನ್ನೂ ಆಕರ್ಷಿಸುವ ಶಕ್ತಿ ಸಂಗೀತಕ್ಕಿದೆ. ಇಂದಿನ ಒತ್ತಡಮಯ ಜೀವನದಲ್ಲಿ ಸಂಗೀತ ಮನಸ್ಸಿಗೆ ನೆಮ್ಮದಿ ನೀಡುವ ಹಿನ್ನೆಲೆ, ಎಲ್ಲರೂ ಸಂಗೀತಕ್ಕೆ ಮೊರೆ ಹೋಗುತ್ತಿದ್ದಾರೆ. ಆದ್ದರಿಂದ ನಾವೆಲ್ಲರೂ ಸಂಗೀತವನ್ನು ಅಳವಡಿಸಿಕೊಳ್ಳುವ ಮೂಲಕ ಜೀವನವನ್ನು ಅರ್ಥಪೂರ್ಣಗೊಳಿಸಿಕೊಳ್ಳುವಂತೆ ಮನವಿ ಮಾಡಿದರು.

ಉಪನ್ಯಾಸಕ ಡಾ. ವಿಶ್ವನಾಥ ಚಿಂತಾಮಣಿ ಮಾತನಾಡಿ, ತಂದೆ, ತಾಯಿ ಹಾಗೂ ಗುರು ಭವಿಷ್ಯದಲ್ಲಿ ವಿಶಿಷ್ಟ ಸ್ಥಾನ ಅಲಂಕರಿಸಿದ್ದಾರೆ. ಗುರು ಮಕ್ಕಳಿಗೆ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯ ಹಾಗೂ ಯಶಸ್ಸಿಗೆ ಅಗತ್ಯವಿರುವ ಎಲ್ಲ ಕೌಶಲ್ಯಗಳನ್ನು ಕಲಿಸಿಕೊಡುತ್ತಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲಾವಿದ ಸದಾಶಿವ ಪಾಟೀಲ, ನಾಡಿನ ಸಂಸ್ಕೃತಿ ವಿಶ್ವದಾದ್ಯಂತ ಪಸರಿಸುವ ಆಸ್ತಿಯಾಗಬೇಕು. ಪಂ. ಅರ್ಜುನಸಾ ನಾಕೋಡ. ಪಂ. ಭೀಮಸೇನ ಜೋಶಿ, ಡಾ. ಗಂಗೂಬಾಯಿ ಹಾನಗಲ್‌, ಪಂ. ಬಸವರಾಜ ರಾಜಗುರು ಅಂತಹ ಹಿರಿಯ ಸಂಗೀತಗಾರರ ಗುರು ಪರಂಪರೆ ಇಂದಿನ ಯುವಪೀಳಿಗೆಗೆ ದಾರಿದೀಪವಾಗಬೇಕು ಎಂದು ಹೇಳಿದರು.

ಕಲಾವಿದ ಸದಾಶಿವ ಐಹೊಳಿ, ಸುಜಾತ ಐಹೊಳಿ, ಮಧುಕರ ಗುಳೇದಗುಡ್ಡ, ಪದ್ಮಾವತಿ ದೇವಶಿಖಾಮಣಿ ಅವರನ್ನು ಸನ್ಮಾನಿಸಲಾಯಿತು. ಬಸವರಾಜ ಚಿಕ್ಕೂರ ನಿರೂಪಿಸಿದರು. ನಂತರ ಸದಾಶಿವ ಐಹೊಳಿ ಅವರ ಶಿಷ್ಯ ವೃಂದದಿಂದ ಗುರು ನಮನ ಸಂಗೀತ ನೆರವೇರಿತು.