ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಜ್ಞಾನ, ಅಹಂಕಾರ, ಅಂಧಕಾರ ಅಳಿಸಿ ಸುಜ್ಞಾನ ಜ್ಯೋತಿಯಾಗಿ ಬಾಳು ಬೆಳಗಿಸುವಾತನೇ ಗುರು ಎಂದು ಶಾರದ ಪೈ ಕಲ್ಯಾಣ ಮಂಟಪ ಟ್ರಸ್ಟ್ನ ಅಧ್ಯಕ್ಷ ಜಯಂತ್ ಪೈ ಹೇಳಿದರು.ಶಾರದ ಪೈ ಕಲ್ಯಾಣ ಮಂಟಪದಲ್ಲಿ ಗುರುವಾರ ಕಾಶಿ ಮಠದ ವಾರಣಾಸಿ ಅಧೀನ ಸಂಸ್ಥೆ ಯಿಂದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಅವರು, ಗುರುವನ್ನು ಅರಿವಿನ ಸಾಗರ ಎಂದು ಕರೆಯುತ್ತಾರೆ. ಸರ್ವರ ಹಿತ ಬಯಸುವ ಗುರುಗಳನ್ನು ಭಕ್ತಿ ಕೃತಜ್ಞತೆಯಿಂದ ಸ್ಮರಿಸಿ ಪೂಜಿಸುವ ಕಾರ್ಯಕ್ರಮವೇ ಗುರುಪೂರ್ಣಿಮೆ ಎಂದು ಹೇಳಿದರು.ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನ. ಗುರುಗಳು ಜೀವನದ ಕತ್ತಲನ್ನು ದೂರ ಮಾಡಿ ಬೆಳಕಿನೆಡೆಗೆ ಉತ್ತಮ ಮಾರ್ಗದರ್ಶನ ನೀಡುತ್ತಾರೆ ಎಂದರು.ವಿದ್ಯಾರ್ಥಿಗಳು ಗುರುಗಳ ಮತ್ತು ಪೋಷಕರ ಮಾರ್ಗದರ್ಶನದಲ್ಲಿ ಉನ್ನತ ವ್ಯಾಸಂಗ ಮಾಡಿ ಸಮಾಜಸೇವೆ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಿ ಸಾರ್ಥಕ ಬದುಕನ್ನು ನಿಮ್ಮದಾಗಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸುರೇಶ್ ಪೈ, ಬಾಬು ಕಾಮತ್, ವ್ಯವಸ್ಥಾಪಕ ಲಕ್ಮಣ್ ಕಾಮತ್ ಉಪಸ್ಥಿತರಿದ್ದರು. ಗುರುಪೂರ್ಣಿಮೆ ಕುರಿತು ನಾರಾಯಣ ಮಲ್ಯ ಮಾತನಾಡಿದರು. ಅರ್ಚಕ ಕೃಷ್ಣಭಟ್ ನೇತೃತ್ವದಲ್ಲಿ ಗಣಪತಿ ಹೋಮ, ಪೂರ್ಣಾಹುತಿ, ಸತ್ಯನಾರಾಯಣ ವ್ರತ ಮತ್ತು ಕಥಾಶ್ರವಣ ನಡೆದ ಬಳಿಕ ಗುರು ಪೂಜೆ, ಪಾದುಕ ಪೂಜೆ, ಗುರುಕಾಣಿಕೆಯೊಂದಿಗೆ ಮಹಾ ಮಂಗಳಾರತಿಯೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವಿನಿಯೋಗಿಸಿದರು.
10 ಕೆಸಿಕೆಎಂ 4ಚಿಕ್ಕಮಗಳೂರಿನ ಶಾರದ ಪೈ ಕಲ್ಯಾಣ ಮಂಟಪದಲ್ಲಿ ಗುರುವಾರ ಕಾಶಿ ಮಠದ ವಾರಣಾಸಿ ಅಧೀನ ಸಂಸ್ಥೆ ವತಿಯಿಂದ ಗುರುಪೂರ್ಣಿಮ ಕಾರ್ಯಕ್ರಮದಲ್ಲಿ ಜಯಂತ್ ಪೈ ಅವರು ವಿದ್ಯಾರ್ಥಿ ವೇತನ ವಿತರಿಸಿದರು.