ಸಾರಾಂಶ
ಪಟ್ಟಣದ ಲಾಲ್ ಬಹುದ್ದೂರ್ ಶಾಸ್ತ್ರೀ ಕ್ರೀಡಾಂಗಣ ಗಣರಾಜ್ಯೋತ್ಸವದಲ್ಲಿ ಮಂಜುಳಾ ಬಿ. ಹೆಗಡಾಳ
ಕನ್ನಡಪ್ರಭ ವಾರ್ತೆ, ಕೊಪ್ಪಭಾರತೀಯ ಪ್ರಜೆಗಳಿಗೆ ತಮ್ಮನ್ನು ತಾವೇ ಆಳಿಕೊಳ್ಳುವ ಅವಕಾಶ ದೊರೆತ ಪವಿತ್ರ ದಿನ ಗಣರಾಜ್ಯೋತ್ಸವ ಎಂದು ಕೊಪ್ಪ ತಾಲೂಕು ತಹಸೀಲ್ದಾರ್ ಮಂಜುಳಾ ಬಿ. ಹೆಗಡಾಳ ಹೇಳಿದರು.
ಪಟ್ಟಣದ ಲಾಲ್ ಬಹುದ್ದೂರ್ ಶಾಸ್ತ್ರೀ ಕ್ರೀಡಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಆಡಳಿತ, ತಾಪಂ, ಪಪಂ, ಸಹಯೋಗದಲ್ಲಿ ಶುಕ್ರವಾರ ಆಯೋಜನೆಗೊಂಡ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನಡೆಸಿ, ಸಂದೇಶ ಸಾರಿದ ಅವರು ಬ್ರಿಟೀಷರ ದಾಸ್ಯದಿಂದ ಮುಕ್ತಗೊಂಡ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಎರಡೂವರೆ ವರ್ಷಗಳ ಬಳಿಕ ಮಹಾ ಸಂವಿಧಾನ ಅರ್ಪಿತವಾಯಿತು. ಭಾರತದ ಪ್ರಜೆಗಳು ತಮಗೆ ತಾವೇ ಪ್ರಭುಗಳಾದರು. 1950ರ ಜ.26ರ ದಿನವನ್ನು ಗಣರಾಜ್ಯ ದಿನ ಎಂದು ಘೋಷಿಸಲಾಯಿತು.ಭಾರತದೇಶದಲ್ಲಿ ಸಂವಿಧಾನ ಜಾರಿಯಾಗಿ ಬಂದ ಮೇಲೆ ಪ್ರಜೆಗಳದ್ದೇ ಸರ್ಕಾರ ಅಸ್ತಿತ್ವಕ್ಕೆ ಬಂತು. ದೇಶದಲ್ಲಿ ತಮಗೆ ಸ್ವಾತಂತ್ರ್ಯವಿದೆ. ತಮ್ಮನ್ನಾಳುವವರನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಅವಕಾಶವಿದೆ ಎನ್ನುವ ಸಂತಸ ಇಡೀ ದೇಶದ ಜನರಲ್ಲಿ ಪ್ರತಿಫಲಿಸಿತು. ಜನರಲ್ಲಿ ನಿಧಾನವಾಗಿ ಸಂವಿಧಾನದ ಮೇಲೆ ವಿಶ್ವಾಸ ಬೆಳೆಯಲು ಪ್ರಾರಂಭವಾಯಿತು. ಸಾಲು ಸಾಲಾಗಿ ಬಂದ ಪಂಚವಾರ್ಷಿಕ ಯೋಜನೆಗಳು ನಮ್ಮ ದೇಶವನ್ನು ಅಭಿವೃದ್ಧಿಪಡಿಸುತ್ತಾ ಸಾಗಿದವು. ಸಾಕ್ಷರತಾ ಪ್ರಮಾಣ ಹೆಚ್ಚಾಯಿತು. ಕೃಷಿಯಲ್ಲಿ ಸಾಕಷ್ಟು ಅಭಿವೃದ್ಧಿ ಆಯಿತು. ಹಸಿರುಕ್ರಾಂತಿ, ಕ್ಷೀರಕ್ರಾಂತಿಗಳು ನಡೆದವು. ಗ್ರಾಮ, ಹಳ್ಳಿ, ನಗರಗಳು ಬೆಳೆದವು. ವಿದೇಶಿ ಕಂಪನಿಗಳು ನಮ್ಮ ದೇಶದಲ್ಲಿ ಬಂಡವಾಳ ಹೂಡಿದವು. ಜನರ ಆದಾಯದಲ್ಲಿ ಹೆಚ್ಚಳವಾಗಿ ಜೀವನಶೈಲಿಯಲ್ಲಿಯೂ ಅಭಿವೃದ್ಧಿಯಾಯಿತು. ದೇಶ ವೈಜ್ಞಾನಿಕ, ಶೈಕ್ಷಣಿಕ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಪಡೆದು ಕೊಂಡಿತು. ಇದೆಲ್ಲವೂ ಸಾಧ್ಯವಾಗಿದ್ದು ಪ್ರಜಾಪ್ರಭುತ್ವದಿಂದ ಎಂದರು.
ಕಾರ್ಯಕ್ರಮದಲ್ಲಿ ಪೊಲೀಸ್, ಗೃಹರಕ್ಷಕ ದಳ, ಎನ್.ಸಿ.ಸಿ, ಸ್ಕೌಟ್ಸ್, ಗೈಡ್ಸ್, ಮುಂತಾದ ತಂಡಗಳಿಂದ ಪಥಸಂಚಲನ ನಡೆಯಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.ಪಪಂ ಮುಖ್ಯಾಧಿಕಾರಿ ಚಂದ್ರಕಾಂತ್, ಬಿಇಒ ಜ್ಯೋತಿ, ಅಕ್ಷರ ದಾಸೋಹದ ಸಹ ನಿರ್ದೇಶಕ ಎಲ್.ಅಂಜನಪ್ಪ, ಕೆಡಿಪಿ ಸದಸ್ಯರಾದ ಚಿಂತನ್ ಬೆಳಗೊಳ, ಸಾಧಿಕ್ ನಾರ್ವೆ, ರಾಜಾಶಂಕರ್, ಕರವೇ ಫ್ರಾನ್ಸಿಸ್ ಕರ್ಡೋಜ, ಪಪಂಯ ಎಲ್ಲಾ ಚುನಾಯಿತ ಸದಸ್ಯರು, ವಿವಿಧ ಸಂಘಸಂಸ್ಥೆಗಳ ಮುಖಂಡರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಇದ್ದರು.