ಸಾರಾಂಶ
ತಾಲೂಕಿನಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಹಲವಾರು ವಾಸದಮನೆ ಮತ್ತು ಜಾನುವಾರು ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ತಾಲೂಕಿನಾದ್ಯಂತ ಭಾರೀ ಗಾಳಿ ಮಳೆಯಾಗುತ್ತಿದ್ದು, ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಹಲವಾರು ವಾಸದಮನೆ ಮತ್ತು ಜಾನುವಾರು ಕೊಟ್ಟಿಗೆಗಳಿಗೆ ಹಾನಿ ಸಂಭವಿಸಿದೆ.ಹಾನಿ ಸಂಭವಿಸಿರುವ ಪ್ರದೇಶಗಳಿಗೆ ಭೇಟಿ ನೀಡಿರುವ ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆಯೊಂದಿಗೆ ವರದಿ ಸಿದ್ದಪಡಿಸಿದ್ದಾರೆ.
ಮುತ್ತೂರು ಹೋಬಳಿ ಹಾರೋಗುಳಿಗೆ ಗ್ರಾಪಂ ವೃತ್ತದ ಅಂದಗೆರೆ ಗ್ರಾಮದ ಮೂರ್ತಿ ಆಚಾರ್ ವಾಸದ ಮನೆ ಮತ್ತು ಕೊಟ್ಟಿಗೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ನಾಲೂರು ಗ್ರಾಪಂ ವ್ಯಾಪ್ತಿಯ ಕೊಳಗಿ ದುಗ್ಗಮ್ಮ ಮನೆಯ ಗೋಡೆ ಕುಸಿದು ಹಾನಿ ಸಂಭವಿಸಿದೆ. ಅರಳಸುರುಳಿ ಸಮೀಪದ ಶಂಕರಪುರ ಗ್ರಾಮದ ಸವಿತಾ ವಿಜಯಕುಮಾರ್ ಕುಟುಂಬಕ್ಕೆ ಸೇರಿದ ಜಾನುವಾರು ಕೊಟ್ಟಿಗೆ ಮಳೆಯಿಂದ ಕುಸಿದಿದೆ. ಇದೇ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಂಕರಪುರ ಗ್ರಾಮದ ರಾಘವೇಂದ್ರ ಮನೆಯ ಛಾವಣಿ ಮತ್ತು ಗೋಡೆ ಕುಸಿದಿದೆ.ಮಂಡಗದ್ದೆ ಹೋಬಳಿ ಸಿಂಗನಬಿದಿರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸ್ವಸ್ತಿಗದ್ದೆ ಗ್ರಾಮದ ಶೋಭಾ ಚಂದ್ರ ಎಂಬುವವರ ವಾಸದ ಮನೆ ಮೇಲೆ ಮರ ಬಿದ್ದು ಮನೆಯ ಛಾವಣಿ ಕುಸಿದಿದೆ. ಇದೇ ಹೋಬಳಿಯ ಶೇಡ್ಗಾರು ಗ್ರಾಮದ ನಾಗೇಶ ಎಂಬುವವರ ಮನೆಯ ಗೋಡೆ ಕುಸಿದಿದೆ. ಭಾನುವಾರ ಸಂಜೆಯವರೆಗೆ ತಾಲೂಕಿನಾದ್ಯಂತ ಮಳೆಯ ಬಿರುಸು ಕೊಂಚ ತಗ್ಗಿತ್ತು.