ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಒಳಮೀಸಲಾತಿ ಜಾರಿ ಮಾಡದೆ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಡಿ.16ರಂದು ಬೆಳಗಾವಿಯಲ್ಲಿ ಬೃಹತ್ ಹಕ್ಕೊತ್ತಾಯ ಸಮಾವೇಶ ನಡೆಸಲಾಗುವುದು ಎಂದು ಮಾದಿಗ- ಸಮಗಾರ-ಮಚಗಾರ-ಡೋಹರ- ಡಕ್ಕಲಿಗ ಜಾತಿ, ಉಪಜಾತಿ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕ ಮುತ್ತಣ್ಣ ಬೆಣ್ಣೂರ ಹೇಳಿದರು.ಇಲ್ಲಿನ ಪತ್ರಿಕಾಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ಆ.1ರಂದು ಸುಪ್ರೀಂ ಕೋರ್ಟ್ ಸಂವಿಧಾನ ಪೀಠ ಒಳಮೀಸಲಾತಿ ಜಾರಿ ಮಾಡುವ ಅಧಿಕಾರವನ್ನು ರಾಜ್ಯಗಳಿಗೆ ಕೊಡುವ ಐತಿಹಾಸಿಕ ತೀರ್ಪು ಪ್ರಕಟಿಸಿದೆ. ತೀರ್ಪು ಬಂದು ನಾಲ್ಕು ತಿಂಗಳಾದರೂ ರಾಜ್ಯ ಸರ್ಕಾರದ ಆಮೆಗತಿಯಲ್ಲಿ ಸಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕಾಟಾಚಾರಕ್ಕೆ ನ್ಯಾ.ನಾಗಮೋಹನದಾಸ್ ಆಯೋಗ ರಚಿಸಿದ್ದು, ಬಿಟ್ಟರೆ ಏನೂ ಮಾಡಿಲ್ಲ. 2 ತಿಂಗಳಲ್ಲಿ ಆಯೋಗ ವರದಿ ಕೊಡುತ್ತದೆ ಎಂದು ಸರ್ಕಾರ ಹೇಳಿತ್ತು. ಆದರೆ, 45 ದಿನವಾದರೂ ಆಯೋಗ ಕೆಲಸ ಆರಂಭಿಸಿಲ್ಲ. ಆದಕ್ಕೆ ಬೇಕಾದ ಕಚೇರಿ, ಸಿಬ್ಬಂದಿ, ಹಣಕಾಸಿನ ನೆರವು ನೀಡದೆ ಕಾಲಹರಣ ಮಾಡುತ್ತಿದೆ ಎಂದು ದೂರಿದರು.ಹರಿಯಾಣದ ಬಿಜೆಪಿ ಸರ್ಕಾರ ತೀರ್ಪು ಬಂದ ವಾರದಲ್ಲೇ ಒಳ ಮೀಸಲಾತಿ ಜಾರಿ ಮಾಡಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಬದ್ಧತೆ ತೊರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅಧಿಕಾರಕ್ಕೆ ಬಂದ ಮೊದಲ ವಾರದಲ್ಲೆ ಒಳ ಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹಸಿ ಸುಳ್ಳು ಹೇಳಿದ ಕಾಂಗ್ರೆಸ್ ನಾಯಕರು ಮಾದಿಗ ಜನತೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು. ಜಿಲ್ಲಾ ಸಂಚಾಲಕ ಶಿವಾನಂದ ಟವಳಿ, ಜಿಲ್ಲಾ ಸಹ ಸಂಚಾಲಕ ಸತೀಶ ಮಾದರ, ಹನಮಂತ ಚಿಮ್ಮಲಗಿ, ಹನಮಂತ ಮುತ್ತತ್ತಿ, ಯುವರಾಜ ಬಾರಸ್ಕಳೇ ಮಾತನಾಡಿದರು.
ಶಾಸಕರ ಮನೆ ಎದುರು ತಮಟೆ ಚಳವಳಿ:ಒಳಮೀಸಲಾತಿ ಜಾರಿ ಮಾಡದೇ ಕಾಲಹರಣ ಮಾಡುತ್ತಿರುವ ರಾಜ್ಯ ಸರ್ಕಾರ ಮಾದಿಗ ಜನತೆ ವಿಶ್ವಾಸ ಕಳೆದುಕೊಂಡಿದೆ. ಆದ್ದರಿಂದ, ವಿಧಾನಸೌಧದಲ್ಲಿ ಒಳಮೀಸಲಾತಿ ಪರವಾಗಿ ಧ್ವನಿ ಎತ್ತುವಂತೆ ಒತ್ತಾಯಿಸಲು ಡಿ.14ರಂದು ರಾಜ್ಯದ ಎಲ್ಲ ಶಾಸಕರ ಮನೆ ಎದುರು ತಮಟೆ ಚಳವಳಿ ನಡೆಸಿ ಆಗ್ರಹಿಸಲಾಗುವುದು ಎಂದು ವಕೀಲ ವೈ.ಸಿ.ಕಾಂಬಳೆ ತಿಳಿಸಿದರು.