ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುತುಮಕೂರಿನಲ್ಲಿ ಚಿರತೆ ಹಾವಳಿ ಮತ್ತೆ ಹೆಚ್ಚಾಗಿದ್ದು ಗುರುವಾರ ಬೆಳಗಿನ ಜಾವ ತಾಲೂಕಿನ ಅರಕೆರೆ ಗ್ರಾಮದ ಸಿದ್ದರಾಜು ಎಂಬ ರೈತನ ಮನೆ ಆವರಣದಲ್ಲಿ ಚಿರತೆಯೊಂದು ಓಡಾಡಿದ್ದು ಆತಂಕ ಮನೆ ಮಾಡಿದೆ. ಗುರುವಾರ ಬೆಳಗಿನ ಜಾವ 4 ಗಂಟೆ ಸಮಯದಲ್ಲಿ ಕಾಂಪೌಂಡ್ ದಾಟಿ ಮನೆಯ ಆವರಣದಲ್ಲಿ ಓಡಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಎರಡೂವರೆ ತಿಂಗಳ ಹಿಂದೆ ಇದೆ ರೀತಿಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಇಲಾಖೆಯವರು ಬೋನನ್ನು ಇಟ್ಟು ಚಿರತೆ ಸೆರೆ ಹಿಡಿದಿದ್ದರು. ಕಳೆದ ಮೂರು ದಿನಗಳಿಂದ ನಿರಂತರವಾಗಿ ಚಿರತೆ ಕಾಣಿಸಿಕೊಳ್ಳುತ್ತಿತ್ತು. ಮೂರು ದಿನಗಳ ಹಿಂದೆಯಷ್ಟೆ ಸಿದ್ದರಾಜು ಮನೆಯ ಸಾಕು ನಾಯಿಯನ್ನು ಚಿರತೆ ತಿಂದು ಹಾಕಿತ್ತು. ಚಿರತೆ ಓಡಾಟದಿಂದ ಭಯಭೀತರಾಗಿರುವ ಸಿದ್ದರಾಜು ಕುಟುಂಬ. ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಮನವಿ ಮಾಡಿದ್ದಾರೆ. ಮನವಿ ಸ್ಪಂದಿಸಿದ ಪರಮೇಶ್ವರ್ ಅವರು ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಡಿಎಫ್ಓ ಗೆ ಸೂಚಿಸಿದ್ದಾರೆ.