ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಿದರೆ ಕುಷ್ಠರೋಗ ಮುಕ್ತ ಭಾರತ

| Published : Jul 22 2024, 01:18 AM IST

ಸಾರಾಂಶ

ಬೀದರ್‌ನಲ್ಲಿ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮದಡಿಯಲ್ಲಿ ಜು.29ರಿಂದ ಆ.14ರವರೆಗೆ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನದ ತರಬೇತಿ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್

ಕುಷ್ಠರೋಗ ಒಂದು ಸಾಂಕ್ರಮಿಕ ಕಾಯಿಲೆಯಾಗಿದ್ದು, ಸಮಾಜದಲ್ಲಿ ರೋಗದ ಬಗ್ಗೆ ಸೂಕ್ತ ತಿಳುವಳಿಕೆ ನೀಡಿ ಪ್ರಾರಂಭದ ಹಂತದಲ್ಲೆ ರೋಗ ಪತ್ತೆ ಮಾಡಿ ಬಹು ಔಷದಿ ಚಿಕಿತ್ಸೆ ಪಡೆಯುವುದರಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ.ಕಿರಣ ಪಾಟಿಲ ತಿಳಿಸಿದರು.

ಅವರು ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನೆ ಕಾರ್ಯಕ್ರಮದಡಿಯಲ್ಲಿ ಜು.29ರಿಂದ ಆ.14ರವರೆಗೆ ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದ ನಿಮಿತ್ತ ಬೀದರ್‌ ತಾಲೂಕಿನ ಆರೋಗ್ಯ ಸಿಬ್ಬಂದಿಗೆ ಹಮ್ಮಿಕೊಂಡಿರುವ ತರಬೇತಿಯಲ್ಲಿ ಮಾತನಾಡಿ, ಕುಷ್ಠರೋಗದಿಂದ ಉಂಟಾಗುವ ಅಂಗವಿಕಲತೆಗಳ ಬಗ್ಗೆ ನೆರೆ-ಹೊರೆ ವ್ಯಕ್ತಿಗಳಿಗೆ ಸೂಕ್ತ ತಿಳುವಳಿಕೆ ನೀಡಿ, ಅವಶ್ಯಕ ಚಿಕಿತ್ಸೆ ನೀಡುವಾಗ ಬೇಧ-ಭಾವ ಮಾಡದೇ ಗೌರವಯುಕ್ತವಾಗಿ ಉಪಚರಿಸಿ, ರೋಗಿ ಗುಣಮುಖಹೊಂದಲು ಸಹಕರಿಸಿ ಇದಕ್ಕೆಲ್ಲಾ ಮಿಗಿಲಾಗಿ ಸಮಾಜದಲ್ಲಿರುವ ನಾವೆಲ್ಲರು ಒಗ್ಗಟ್ಟಾಗಿ ಈ ದಿಸೆಯಲ್ಲಿ ಕೆಲಸ ಮಾಡಿದರೆ ಗಾಂಧೀಜಿಯವರ ಕನಸು ಕುಷ್ಠರೋಗ ಮುಕ್ತ ಭಾರತವನ್ನು ಭವಿಷ್ಯದಲ್ಲಿ ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.

ಬೀದರ್‌ ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಗಾರಡ್ಡಿ ಮಾತನಾಡಿ, ಕುಷ್ಠರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮದ ಸಮೀಕ್ಷೆ ಪ್ರತಿ ತಂಡದಲ್ಲಿ ಒಬ್ಬರು ಮಹಿಳೆ ತಪಾಸಣೆಗಾರರು ಮತ್ತು ಒಬ್ಬರು ಪುರುಷ ತಪಾಸಣೆಗಾರರು ಇರುವಂತೆ ನೋಡಿಕೊಳ್ಳುವುದು. ಮನೆ ಮನೆಗೆ ಚರ್ಮರೋಗ ಪರಿಕ್ಷೆಗೆ ಹೋದಾಗ ಮನೆಯಲ್ಲಿನ ಎಲ್ಲಾ ಸದ್ಯರಿಗೆ ಸಂಪೂರ್ಣ ತಪಾಸಣೆ ಮಾಡಬೇಕು ಎಂದರು.

ತಾಲೂಕಿನ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಓಂಕಾರ ಮಲ್ಲಿಗೆ ಮಾತನಾಡಿ, ಕುಷ್ಠರೋಗವು ಮೈಕೋ ಬ್ಯಾಕ್ಟೀರಿಯಾ ಲೆಪ್ರೆ ಎಂಬ ರೋಗಾಣುವಿನಿಂದ ಬರುತ್ತದೆ ಈ ಬ್ಯಾಕ್ಟೀರಿಯಾಗಳು ಬಹು ಔಷಧ ಚಿಕಿತ್ಸೆ ಪಡೆಯದೆ ಇರುವಂತಹ ಸೋಂಕಿತ ವ್ಯಕ್ತಿ ಸೀನು ಹಾಗೂ ಕೆಮ್ಮುವ ಮೂಲಕ ತುಂತುರು ಮುಖಾಂತರ ಹೊರಬಂದು ಗಾಳಿಯಲ್ಲಿ ಸೆರಿಕೋಂಡು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂದು ತಿಳಿಸಿದರು.

ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೇಟ್ಟಿ ಚನಶೇಟ್ಟಿ, ಆರೋಗ್ಯ ನಿರೀಕ್ಷಣಾಧಿಕಾರಿ ಮೊಹಮ್ಮದ್ ಅಬ್ದುಲ್ ಹೈ, ಅಫ್ಜಲ್ ಆಳಂದಕರ್ ಇದ್ದರು.