ಸಾರಾಂಶ
ಮೊಬೈಲ್, ಟಿವಿಗಳಿಂದ ವಿದ್ಯಾರ್ಥಿಗಳು ಹಾಳಾಗಿಲ್ಲ, ಅದರಿಂದ ಇನ್ನಷ್ಟು ಕಲಿಯುವ ಅವಕಾಶಗಳು ಸಿಕ್ಕಿದೆ. ಅದನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು ಅಷ್ಟೇ. ಯಾವ ಮೊಬೈಲ್, ಟಿವಿ ನನ್ನನ್ನು ನೋಡಿ ಹಾಳಾಗಿ ಅಂತ ಹೇಳುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸುವ ಕೆಲಸ ಮನೆಗಳಿಂದಲೇ ಆರಂಭ ಆಗಬೇಕು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಪೋಷಕರು ಆಸ್ತಿ, ಹಣ ಗಳಿಕೆಗಿಂತ ಮಕ್ಕಳನ್ನೆ ಆಸ್ತಿ ಮಾಡಿ ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಉತ್ತಮ ಭವಿಷ್ಯ ರೂಪಿಸಬೇಕೆಂದು ಚಿಕ್ಕಬಳ್ಳಾಪುರದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಮಂಗಳಾನಂದನಾಥ ಸ್ವಾಮೀಜಿ ತಿಳಿಸಿದರು.ನಗರದ ಹೊರ ವಲಯದ ಹನುಮಂತಪುರ ಕ್ರಾಸ್ನಲ್ಲಿರುವ ಬಿಜಿಎಸ್ ಪಿಯು ಕಾಲೇಜಿನಲ್ಲಿ ಶನಿವಾರ ಆಯೋಜಿಸಲಾಗಿದ್ದ ಸ್ವಸ್ತಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ವಿದ್ಯಾವಂತನಾದರೆ ಮನುಷ್ಯ ಕೆಡಬಹುದು. ಆದರೆ ಸಂಸ್ಕಾರವಂತನಾದರೆ ಮನುಷ್ಯ ಕೆಡುವುದಿಲ್ಲ ಎಂದರು. ಮಕ್ಕಳಿಗೆ ಸಂಸ್ಕಾರ ಕಲಿಸಿ
ಮೊಬೈಲ್, ಟಿವಿಗಳಿಂದ ವಿದ್ಯಾರ್ಥಿಗಳು ಹಾಳಾಗಿಲ್ಲ, ಅದರಿಂದ ಇನ್ನಷ್ಟು ಕಲಿಯುವ ಅವಕಾಶಗಳು ಸಿಕ್ಕಿದೆ. ಅದನ್ನು ನಾವು ಸದ್ಬಳಕೆ ಮಾಡಿಕೊಳ್ಳಬೇಕು ಅಷ್ಟೇ. ಯಾವ ಮೊಬೈಲ್, ಟಿವಿ ನನ್ನನ್ನು ನೋಡಿ ಹಾಳಾಗಿ ಅಂತ ಹೇಳುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸುವ ಕೆಲಸ ಮನೆಗಳಿಂದಲೇ ಆರಂಭ ಆಗಬೇಕು. ಆಗ ಮಾತ್ರ ವಿದ್ಯಾರ್ಥಿಗಳು ಉತ್ತಮ ಪ್ರಜೆಗಳಾಗಿ ಸಮಾಜಕ್ಕೆ ಹೊರೆಯಾಗದ ರೀತಿಯಲ್ಲಿ ತಮ್ಮ ಬದುಕು ರೂಪಿಸಿಕೊಳ್ಳಲು ಸಾಧ್ಯವೆಂದರು.ತಂದೆ ತಾಯಿಗಳು ಮನೆಗಳಲ್ಲಿ ಸಂಸ್ಕಾರವಂತರಾಗಿ ಒಳ್ಳೆಯ ನಡೆ, ನುಡಿಯಿಂದ ಇದ್ದರೆ ಅದು ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಆಗ ಮಕ್ಕಳು ಹಾಗೂ ಸನ್ಮಾರ್ಗದಲ್ಲಿ ನಡೆಯುತ್ತಾರೆಂದರು. ಮಕ್ಕಳಿಗೆ ಸಂಭ್ರಮದಿಂದ ಕಲಿಸುವ ಕೆಲಸವನ್ನು ನಮ್ಮ ವಿದ್ಯಾಸಂಸ್ಥೆಗಳು ಮೊದಲಿನಿಂದಲೂ ಮಾಡುತ್ತಿವೆ. ದಿನದ 24 ಗಂಟೆ ಕಾಲ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸುವ ಕೆಲಸವನ್ನು ನಮ್ಮ ಬಿಜಿಎಸ್ ಶಿಕ್ಷಣ ಸಂಸ್ಥೆಗಳು ಮಾಡುತ್ತಿವೆ ಎಂದರು. ಮೌಲ್ಯಾಧಾರಿತ ಶಿಕ್ಷಣ
ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯ ಆಡಳಿತಾಧಿಕಾರಿ ಡಾ ಎನ್.ಶಿವರಾಮರೆಡ್ಡಿ ಮಾತನಾಡಿ , ನಮ್ಮ ವಿದ್ಯಾ ಸಂಸ್ಥೆಯಲ್ಲಿ ಮೌಲ್ಯಾಧಾರಿತ ಶಿಕ್ಷಣವನ್ನು ನೀಡುತ್ತಿದ್ದು , ಅದರಂತೆ ಸಮಾಜದಲ್ಲಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣವನ್ನು ನೀಡಲಾಗುತ್ತಿದೆ ಎಂದರು ಹಾಗೂ ಹದಿಹರೆಯದವನ್ನೂ ಬೆಳೆಸುವಲ್ಲಿ ಪೋಷಕರ ಪಾತ್ರ ಏನೆಂದು ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಕೆ.ಮಹದೇವ್ ಶಾಲೆಯ ಹಳೆ ವಿದ್ಯಾರ್ಥಿಗಳಾದ ಡಾ.ಗಿರೀಶ್, ಕುಮಾರಿ ಲಹರಿ ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತಿತರರು ಇದ್ದರು.