ಕನ್ನಡಪ್ರಭ ವಾರ್ತೆ, ತುಮಕೂರುಮನುಷ್ಯನಿಗೆ ಗುರಿ ಮತ್ತು ಛಲ ಇದ್ದರೆ ಸಮಾಜದಲ್ಲಿ ಮೇಲೆ ಬರಲು ಸಾಧ್ಯ ಎಂದು ಮಧುಗಿರಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಕೆ.ಎನ್. ರಾಜಣ್ಣ ಅಭಿಪ್ರಾಯಪಟ್ಟಿದ್ದಾರೆ.ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ತುಮಕೂರು ಜಿಲ್ಲಾ ವಾಲ್ಮೀಕಿ ನಾಯಕರ ಕ್ಷೇಮಾಭಿವೃದ್ದಿ ಸಂಘ, ಶಬರಿ ಮಹಿಳಾ ಪತ್ತಿನ ಸಹಕಾರ ಸಂಘ, ತುಮಕೂರು ವಾಲ್ಮೀಕಿ ಸಹಕಾರ ಸಂಘ, ಶ್ರೀವಾಲ್ಮೀಕಿ ವಿದ್ಯಾವರ್ಧಕ ಸಂಘ, ಮತ್ತು ಜಿಲ್ಲಾ ನಾಯಕ ಮಹಿಳಾ ಸಮಾಜ ಆಯೋಜಿಸಿದ್ದ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ.,ಪಿಯುಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ 4 ನೇ ವರ್ಷದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸಮುದಾಯದ ಸಂಘಟನೆಗೆ ಪ್ರತಿಭಾ ಪುರಸ್ಕಾರವೆಂಬುದು ಒಂದು ಕಾರಣ. ಪ್ರತಿಭೆ ಪ್ರೋತ್ಸಾಯಿಸುವುದು ಒಂದು ಕಡೆಗೆ ಹೆಮ್ಮೆ ಮತ್ತು ಮತ್ತೊಂದು ಕಡೆಗೆ ಜವಾಬ್ದಾರಿ ಕೂಡ ಆಗಿದೆ.ಇಂತಹ ಕಾರ್ಯಕ್ರಮಗಳು ಪ್ರತಿತಾಲೂಕು ಹಂತದಲ್ಲಿಯೂ ನಡೆದರೆ ಸಮುದಾಯದ ಸಂಘಟನೆಗೆ ಹೆಚ್ಚು ಪೂರಕವಾಗಲಿದೆ.ಎಂದರು.ಮೀಸಲಾತಿ ಇದೆ ಎಂಬ ಕಾರಣಕ್ಕೆ ಸಮುದಾಯದ ಯುವಜನರು, ರಾಜಕಾರಣಿಗಳು ನಿರ್ಲಕ್ಷ್ಯ ತಾಳಬಾರದು. ಒಂದೇ ಸಮುದಾಯದ ಜನರಿಗೆ ಗೆಲುವು ಸಾಧ್ಯವಿಲ್ಲ. ಹಾಗಾಗಿ ಎಲ್ಲ ಸಮುದಾಯದಜನರ ವಿಶ್ವಾಸ ಗಳಿಸಬೇಕು. ತುಮಕೂರು ಕ್ಷೇತ್ರದಲ್ಲಿ ಪಕ್ಷೇತರರು ಗೆಲ್ಲುವುದು ಹೋಗಲಿ, ನಾಲ್ಕು ಅಂಕಿ ದಾಟಿದ ಉದಾಹರಣೆಯಿಲ್ಲ. ಆದರೆ 1994 ರಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸಿದಾಗ ನನ್ನ ನಿರೀಕ್ಷೆಗೂ ಮೀರಿ 26 ಸಾವಿರ ಮತ ನೀಡಿದರು. ಹಾಗಾಗಿ ನಾನು ಸಾಮಾನ್ಯ ಕ್ಷೇತ್ರಗಳಲ್ಲಿ ಸ್ಪರ್ಧಿಸಬಹುದು ಎಂಬ ನಂಬಿಕೆ ಮೂಡಲು ಕಾರಣವಾಯಿತು. ಆದೇ ನಂಬಿಕೆಯಲ್ಲಿ ಸಾಮಾನ್ಯ ಕ್ಷೇತ್ರಗಳಲ್ಲಿಯೇ ಸ್ಪರ್ಧಿಸಿ ಮೂರು ಬಾರಿ ಶಾಸಕನಾಗಿ ಮಂತ್ರಿಯೂ ಆದೆ. ಮೀಸಲು ಕ್ಷೇತ್ರವೆಂದು ನಂಬಿ ಕುಳಿತಿದ್ದರೇ, ಶಾಸಕರು ಆಗುತ್ತಿರಲಿಲ್ಲ ಎಂದು ಇಂದಿನ ರಾಜಕೀಯ ವ್ಯವಸ್ಥೆಯನ್ನು ಜನರ ಮುಂದಿಟ್ಟರು.

ನಿವೃತ್ತ ಐಎಎಸ್ ಅಧಿಕಾರಿ ಪಾಲಯ್ಯ ಮಾತನಾಡಿ, ಪೋಷಕರು ಸಹ ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ಇರಿಸಿ, ಅವರುತಪ್ಪುದಾರಿ ತುಳಿಯದಂತೆ ಎಚ್ಚರಿಕೆ ವಹಿಸಬೇಕು. ಅವಕಾಶಗಳ ಮಹಾಪೂರವೇ ನಿಮ್ಮ ಮುಂದಿದೆ. ಅದನ್ನು ತಮ್ಮದಾಗಿಸಿಕೊಳ್ಳುವ ಛಲವಂತರು ನೀವಾಗಬೇಕೆಂದರು. ತುಮಕೂರುಜಿಲ್ಲಾ ವಾಲ್ಮೀಕಿ ನಾಯಕರಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷರಾದ ಶಾಂತಲಾರಾಜಣ್ಣ ಮಾತನಾಡಿ, ಇಂದು ಪ್ರತಿಭಾ ಪುರಸ್ಕಾರ ಸ್ವೀಕರಿಸುತ್ತಿರುವ ಮಕ್ಕಳು ಮುಂದೆ ವೇದಿಕೆಯ ಮೇಲೆ ಕೂರುವಂತಹಉನ್ನತ ಸ್ಥಾನಕ್ಕೆ ಬರಬೇಕೆಂಬುದು ನಮ್ಮೆಲ್ಲರ ಹಾರೈಕೆ ಎಂದರು.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ರಾಜಕುಮಾರ್, ವೈದ್ಯ ಡಾ.ಅನಿಲ್‌ಕುಮಾರ್ , ಕೂಡ್ಲಿಗಿ ಶಾಸಕ ಹಾಗೂ ಕಣ್ಣಿನತಜ್ಞ ವೈದ್ಯ ಡಾ.ಶ್ರೀನಿವಾಸ್ ಮಾತನಾಡಿದರು. ಅಧ್ಯಕ್ಷತೆಯನ್ನು ಶ್ರೀ ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಚ್.ಜಿ.ಪುರುಷೋತ್ತಮ್ ವಹಿಸಿದ್ದರು. ಬಿ.ಜಿ.ಕೃಷ್ಣಪ್ಪ, ಟೂಡಾಆಯುಕ್ತಉಮೇಶ್‌ಚಂದ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್ ಜಿ.ಆರ್, ಎಇಇ ಹನುಮಂತರಾಯಪ್ಪ, ಎಚ್. ಎಬಳೇಶ್, ಇಇ ಎನ್.ಅನಿಲ್‌ಕುಮಾರ್, ಕೆ.ರಂಗನಾಥ್, ದೊಡ್ಡರಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.