ಸಾರಾಂಶ
ಧಾರವಾಡ: ಜಿಲ್ಲೆಯ ನವಲಗುಂದ ಪಟ್ಟಣದ ನೀಲಮ್ಮನ ಕೆರೆಯಲ್ಲಿ ಪ್ರವಾಹದ ಮುನ್ನಚ್ಚರಿಕೆ ಕುರಿತು ನೀರಿನಲ್ಲಿ ಮುಳುಗಿದವರವನ್ನು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಅಣುಕ ಪ್ರದರ್ಶನದ ಮೂಲಕ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾಗರಿಕರ ರಕ್ಷಣೆಯ ತಾಲೀಮನ್ನು ಬುಧವಾರ ನಡೆಸಲಾಯಿತು.
ನೀರಿನಲ್ಲಿ ಮುಳುಗಿರುವ ಹಾಗೆ ಸಂದರ್ಭವನ್ನು ಸೃಷ್ಟಿಸುವ ಮೂಲಕ ಕಾಲ್ಪನಿಕ ತುರ್ತು ಪರಿಸ್ಥಿತಿ ಸೃಷ್ಟಿಸಿ, ಅಗ್ನಿಶಾಮಕ ದಳದ ಎಲ್ಲ ಸಿಬ್ಬಂದಿಗಳು ಸೇರಿ ತಾಲೀಮು ನಡೆಸಿದರು. ಕೆರೆಯಲ್ಲಿ ಇಬ್ಬರು ವ್ಯಕ್ತಿಗಳು ಬಿದ್ದಿರುವ ಹಾಗೆ ಸನ್ನಿವೇಶ ಸೃಷ್ಟಿಮಾಡಲಾಗಿತ್ತು. ಬಿದ್ದವರನ್ನು ತಕ್ಷಣ ರಕ್ಷಿಸಲು ಅಗ್ನಿಶಾಮಕ ದಳದವರು ಹಡಗಿನ ಮುಖಾಂತರ ಹೋಗಿ ಲೈವ್ ಜಾಕೆಟ್ನ್ನು ಆ ವ್ಯಕ್ತಿಗಳಿಗೆ ಎಸೆದು ನಂತರ ಅಗ್ನಿಶಾಮಕ ಸಿಬ್ಬಂದಿಯವರು ನೀರಿನಲ್ಲಿ ಇಳಿದು ಅವರನ್ನು ಹಡಗಿನಲ್ಲಿ ಹಾಕಿಕೊಂಡು ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಬಂದರು.ವೈದ್ಯರು ತಕ್ಷಣ ಅವರನ್ನು ಮಲಗಿಸಿ, ಉಸಿರಾಡುತ್ತಿದ್ದಾರೋ ಇಲ್ಲವೋ ಎಂದು ಪರಿಶೀಲಿಸಿ, ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಜನರಿಗೂ ಸಹ ಇಂತಹ ಸಂದರ್ಭದಲ್ಲಿ ಯಾವ ರೀತಿ ರಕ್ಷಣೆ, ಚಿಕಿತ್ಸೆ ಮಾಡಬೇಕೆಂದು ತಿಳಿಸಿದರು. ನಂತರ ಆ ವ್ಯಕ್ತಿಯಗಳನ್ನು ಸ್ಟ್ರಚರ್ ಮೂಲಕ ಆಸ್ಪತ್ರೆಗೆ ಸಾಗಿಸಿದರು.
ನವಲಗುಂದ ಕ್ಷೇತ್ರ ವ್ಯಾಪ್ತಿಯಲ್ಲಿನ ಬೆಣ್ಣಿಹಳ್ಳ ಬದಿಯ ಹಳ್ಳಿಗಳ ಜನರಿಗೆ ಮಳೆಗಾಲದಲ್ಲಿ ಅನಾನುಕೂಲ ಆಗಬಹುದು ಎಂದು ಮುಂಜಾಗ್ರತಾ ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ನಾವು, ಜಿಲ್ಲಾಡಳಿತ, ಶಾಸಕರು ಸೇರಿ ಜನರಿಗೆ ಜಾಗೃತಿ ಮೂಡಿಸಲು ಅಗ್ನಿಶಾಮಕ ಇಲಾಖೆಯಿಂದ ಅಣುಕು ಪ್ರದರ್ಶನ ನಡೆಸಲಾಗಿದೆ ಎಂದು ಅಣಕು ಪ್ರದರ್ಶನದ ಸಿಬ್ಬಂದಿ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಅಧೀಕ್ಷಕ ಡಾ. ಗೋಪಾಲ ಬ್ಯಾಕೋಡ್, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಪಂ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಬೃಹತ್ ನೀರಾವರಿ ಇಲಾಖೆಯ ಎಇಇ ರವೀಂದ್ರ ಜಾಲಗಾರ, ನವಲಗುಂದ ತಹಸೀಲ್ದಾರ್ ಸುಧೀರ ಸಾವುಕಾರ, ಪುರಸಭೆ ಮುಖ್ಯಾಧಿಕಾರಿ ಶರಣು ಪೂಜಾರ, ಅಗ್ನಿಶಾಮಕ ದಳದ ಅಧಿಕಾರಿ ಅಮೃತ ಸೇರಿದಂತೆ ಸಾರ್ವಜನಿಕರು ಇದ್ದರು.