ಸಾರಾಂಶ
ಹಾಸನ: ಮುಂದಿನ ದಿನಗಳಲ್ಲಿ ಒಬ್ಬ ಸನ್ಯಾಸಿಗೆ ಪ್ರಧಾನಮಂತ್ರಿಯಾಗುವ ಯೋಗವಿದೆ. ದೇಶಕ್ಕೆ ಬ್ರಹ್ಮಚಾರಿ ನಾಯಕನ ಆವಶ್ಯಕತೆ ಇದೆ. ಇಲ್ಲದಿದ್ದರೆ ಜಗತ್ತಿನ ಮೇಲೆ ಶನಿಯ ಪ್ರಭಾವ ಹೆಚ್ಚಾಗುತ್ತದೆ ಬ್ರಹ್ಮಾಂಡ ಗುರೂಜಿ ಹೇಳಿರು.
ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ಆಧ್ಯಾತ್ಮಿಕ ವ್ಯಕ್ತಿ ಬ್ರಹ್ಮಾಂಡ ಗುರೂಜಿ ಅವರು ಶುಕ್ರವಾರ ಆಗಮಿಸಿ ದೇವಿಯ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಇದು ಕೊನೆಯ ಹಂತ, ಮುಂದಿನ ದಿನಗಳಲ್ಲಿ ಪ್ರಳಯದ ಕಾಲ ಬರುವ ಸೂಚನೆ ಇದೆ. ಉತ್ತರ ಭಾರತ ಹಾಗೂ ಉತ್ತರ ಕರ್ನಾಟಕ ಭಾಗಗಳಲ್ಲಿ ಮುಳುಗಡೆಯಂತಹ ಸ್ಥಿತಿ ಉಂಟಾಗಲಿದೆ. ಕರ್ನಾಟಕ ಮೂರು ಭಾಗವಾಗುವ ಸಾಧ್ಯತೆ ಇದೆ. ಭಾರತ ದೇಶವೂ ಎರಡು ಭಾಗವಾಗಲಿದೆ. ಇದು ತಾಯಿ ಹಾಸನಾಂಬೆಯ ಮುನ್ಸೂಚನೆ ಎಂದು ಭವಿಷ್ಯ ನುಡಿದರು. ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಲಿವೆ. ಎಲ್ಲ ನಾಯಕರು ಗೊಂದಲಕ್ಕೆ ಸಿಲುಕುತ್ತಾರೆ. ಪಕ್ಷಾಂತರಗಳು ನಡೆಯುತ್ತವೆ. ಕುರ್ಚಿ ರಾಜಕಾರಣ ತೀವ್ರವಾಗುತ್ತದೆ. ಸಂಕ್ರಾಂತಿ ವೇಳೆಗೆ ಕೇತು, ಸೂರ್ಯ, ರಾಹು ಸಂಚಾರದಿಂದ ದೊಡ್ಡ ರಾಜಕೀಯ ಗಲಾಟೆಗಳು ಉಂಟಾಗುತ್ತವೆ ಎಂದು ಹೇಳಿದರು.ನರೇಂದ್ರ ಮೋದಿ ಅವರು ದೇಶದ ರಕ್ಷಾ ಕವಚ. ಅವರಿಗೆ ಆರೋಗ್ಯ, ಐಶ್ವರ್ಯ ಲಭಿಸಲಿ. ಗುರೂಜಿ ತಮ್ಮ ನುಡಿಯಲ್ಲಿ, ಮುಂದಿನ ಮಂತ್ರಿ ಸ್ಥಾನಕ್ಕಾಗಿ ಇಬ್ಬರಿಗೆ ಅವಕಾಶ ಇದೆ. ನವೆಂಬರ್ನಿಂದ ಸಂಕ್ರಾಂತಿಯೊಳಗೆ ಯೋಗ ಸಾಧ್ಯ. ಆಗದಿದ್ದರೆ ಮತ್ತೆ ಹತ್ತು ವರ್ಷಗಳ ನಂತರ ಯೋಗ ಬರುವುದು. ಆದರೆ ಆ ವೇಳೆಗೆ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ಸಿಗುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಕೊನೆಯ ಅವಧಿ ಎಂದು ಹೇಳಿದರು. ಜನರು ತಮ್ಮ ಆರೋಗ್ಯದತ್ತ ಗಮನಹರಿಸಬೇಕು. ಘಟಪ್ರಭಾ, ಮಲಪ್ರಭಾ ಮತ್ತು ಗೋದಾವರಿ ನದಿಗಳು ಉಕ್ಕಿ ಹರಿದು ದೇಶವನ್ನು ಎರಡು ಭಾಗ ಮಾಡುವ ಮಟ್ಟಿಗೆ ನೀರು ಉಕ್ಕಲಿವೆ. ಅಮ್ಮನವರು ಈ ಬಾರಿ ಹಾಸನಾಂಬೆಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವುದು ಕೊನೆಯ ವರ್ಷ. ಮುಂದಿನ ವರ್ಷದಿಂದ ಇದೆಲ್ಲ ಇರೋದಿಲ್ಲ ಎಂದು ಭವಿಷ್ಯ ನುಡಿದರು.