ಸಾರಾಂಶ
ಲಕ್ಷ್ಮೇಶ್ವರ: ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಪಟ್ಟಣದ ಯೋಗ ಸಾಧಕರ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಹೋಮ ಹವನ ನಡೆಯುತ್ತಿದ್ದ ಸ್ಥಳಕ್ಕೆ ಶ್ರೀರಾಮನ ಭಂಟ ಹನಮಂತನು (ಮಂಗನು) ಆಗಮಿಸಿ ಹೋಮ ಕುಂಡಕ್ಕೆ ನಮಸ್ಕಾರ ಮಾಡಿರುವುದು ಅಚ್ಚರಿಗೆ ಕಾರಣವಾಯಿತು.
ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ಅಂಗವಾಗಿ ಸೋಮವಾರ ಬೆಳಗ್ಗೆ 7 ಗಂಟೆಗೆ ಪಟ್ಟಣದ ಯೋಗ ಸಾಧಕರ ಸಮಿತಿಯು ಸೋಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿ ದೇವಸ್ಥಾನದ ಆವರಣದಲ್ಲಿ ಶ್ರೀರಾಮನಾಮ ಜಪ ಹಾಗೂ ಹೋಮ ಹವನ ಮಾಡುತ್ತಿದ್ದರು.
ಈ ವೇಳೆ ಹೋಮ ಹವನ ನಡೆಯುತ್ತಿದ್ದ ಸ್ಥಳಕ್ಕೆ ಆಗಮಿಸಿದ ಹನಮಂತನು ಹವನ ಕುಂಡಕ್ಕೆ ನಮಸ್ಕರಿಸಿ ತನ್ನ ಸ್ವಾಮಿ ನಿಷ್ಠೆಯನ್ನು ಪ್ರದರ್ಶನ ಮಾಡಿತು. ಇದು ಹೋಮ ಹವನ ಮಾಡುತ್ತಿದ್ದವರಲ್ಲಿ ಅಚ್ಚರಿ ಮೂಡಿಸಿದೆ ಎನ್ನುತ್ತಾರೆ ಯೋಗ ಸಾಧಕರ ಸಮಿತಿಯ ಸದಸ್ಯರು.
ಈ ವೇಳೆ ಹೋಮ ಹವನ ಮಾಡುತ್ತಿದ್ದವರು ಮಂಗನಿಗೆ ಬಾಳೆ ಹಣ್ಣನ್ನು ನೀಡಿದರು ಅದನ್ನು ತೆಗೆದುಕೊಂಡ ಹನಮಂತನು ಯಾರಿಗೂ ತೊಂದರೆ ಕೊಡದೆ ಹೋದ ದೃಶ್ಯ ನೋಡುಗರನ್ನು ಮಂತ್ರ ಮುಗ್ಧರನ್ನಾಗಿ ಮಾಡಿತು ಎನ್ನುತ್ತಾರೆ ಸೋಮೇಶ್ವರ ದೇವಸ್ಥಾನದ ಅರ್ಚಕರು.
ಪಟ್ಟಣದ ಸೋಮೇಶ್ವರ ದೇವಸ್ಥಾನದಲ್ಲಿ ಶ್ರೀರಾಮನ ಮೂರ್ತಿ ಪ್ರಾಣ ಪತ್ರಿಷ್ಠಾಪನೆ ಅಂಗವಾಗಿ ಶಾಸಕ ಡಾ. ಚಂದ್ರು ಲಮಾಣಿ ಆಗಮಿಸಿ ಸೋಮನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಟ್ಟಣ ಪ್ರಮುಖ ದೇವಾಲಯಗಳಿಗೆ ಶಾಸಕ ಡಾ. ಚಂದ್ರು ಲಮಾಣಿ ಅವರು ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ಕಂಡು ಬಂದಿತು.ಈ ವೇಳೆ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ, ಡಿ.ಬಿ. ಬಳಿಗಾರ, ಚಂಬಣ್ಣ ಬಾಳಿಕಾಯಿ, ದುಂಡೇಶ ಕೊಟಗಿ, ಗಂಗಾಧರ ಮೆಣಸಿನಕಾಯಿ, ಕುಬೇರಪ್ಪ ಮಹಾಂತಶೆಟ್ಟರ, ನಿಂಗಪ್ಪ ಬನ್ನಿ, ಮೀಲಪ್ಪಕರ್ಜಕಣ್ಣವರ, ರಮೇಶ ಹಾಳತೋಟದ, ಆಶ್ವಿನಿ ಅಂಕಲಕೋಟಿ, ಸಿದ್ದನಗೌಡ ಬೊಳ್ಳೊಳ್ಳಿ, ಸುನೀಲ ಮಹಾಂತಶೆಟ್ಟರ, ಬಸವರಾಜ ಚಕ್ರಸಾಲಿ, ನವೀನ ಹಿರೇಮಠ, ವಿಜಯ ಕುಂಬಾರ, ವಿಶಾಲ್ ಬಟಗುರ್ಕಿ, ಸಂತೋಷ ಜಾವೂರ ಸೇರಿದಂತೆ ಅನೇಕರು ಇದ್ದರು.