ಜಗತ್ತಿನಲ್ಲಿ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ: ಸಿದ್ದರಾಮೇಶ್ವರ ಸ್ವಾಮೀಜಿ

| Published : Jun 11 2024, 01:36 AM IST

ಜಗತ್ತಿನಲ್ಲಿ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ: ಸಿದ್ದರಾಮೇಶ್ವರ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಯಿ ಎನ್ನುವ ಎರಡು ಅಕ್ಷರಕ್ಕಿಂತಹ ದೊಡ್ಡದು ಯಾವುದೂ ಇಲ್ಲ. ಅಂತಹ ಗುಣವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮೆಲ್ಲರ ಬದುಕು ಸಾರ್ಥಕವಾಗುತ್ತದೆ.

ಕನ್ನಡಪ್ರಭ ವಾರ್ತೆ ಯಲಬುರ್ಗಾ

ತಾಯಿ ಎನ್ನುವ ಎರಡು ಅಕ್ಷರಕ್ಕಿಂತಹ ದೊಡ್ಡದು ಯಾವುದೂ ಇಲ್ಲ. ಅಂತಹ ಗುಣವನ್ನು ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಂಡರೆ ನಮ್ಮೆಲ್ಲರ ಬದುಕು ಸಾರ್ಥಕವಾಗುತ್ತದೆ ಎಂದು ಸಂಸ್ಥಾನ ಹಿರೇಮಠದ ಪೀಠಾಧಿಪತಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಏಳನೇ ವಾರ್ಡಿನಲ್ಲಿ ಭಾನುವಾರ ಲಿಂ.ಶರಣೆ ಸಿದ್ದಮ್ಮ ಕಳಕನಗೌಡ ಮಾಲಿಪಾಟೀಲ ಅವರ ಪುಣ್ಯಸ್ಮರಣೆ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ತಾಯಿ ನುಡಿನಮನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ತಾಯಿಯ ಋಣವನ್ನು ನಾವುಗಳು ಅದೆಷ್ಟು ಜನ್ಮ ಎತ್ತಿ ಬಂದರೂ ತೀರಿಸಲಾಗದು. ಅಂತಹ ತಾಯಿ ನಮಗೆಲ್ಲ ಮಹಾನ್ ದೇವತೆಯಾಗಿದ್ದಾಳೆ ಎಂದರು.

ತಾಯಿಯ ಸ್ಥಾನ ಅಮೂಲ್ಯವಾದದ್ದು, ಆಕೆಯ ಮಮತೆ, ಅಂತಃಕರಣ, ವಾತ್ಸಲ್ಯ, ಪ್ರೀತಿ ಅತ್ಯಂತ ಮಹತ್ವದ ಗುಣಗಳು. ಹೆತ್ತ ಮಕ್ಕಳು ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳಿಸುವ ಕೆಟ್ಟ ವ್ಯವಸ್ಥೆ ದೂರಾಗಿ ಅವರ ಪಾಲನೆ ಪೋಷಣೆ ಮಾಡುವ ಮೂಲಕ ಹಿರಿಯ ಜೀವಿಗಳು ಬದುಕಿರುವವರೆಗೊ ಕಾಪಾಡುವ ಹೊಣೆ ಮಕ್ಕಳದ್ದಾಗಿರಬೇಕು ಎಂದು ಹೇಳಿದರು.

ನಿವೃತ್ತ ಉಪನಿರ್ದೇಶಕ ಎಸ್.ಡಿ. ಗಾಂಜಿ ಮಾತನಾಡಿ, ಹೆತ್ತ ತಂದೆ-ತಾಯಿಗಳು ಹೇಗೆ ಶಿಕ್ಷಣ ಕೊಡಿಸಿ, ಬೆಳೆಸಿ ನಮ್ಮನ್ನು ದೊಡ್ಡವರನ್ನಾಗಿ ಮಾಡಿದ್ದಾರೋ, ಅದರಂತೆ ಮಕ್ಕಳಾದ ನಾವುಗಳು ನಮ್ಮ ವೃದ್ಧ ತಂದೆ-ತಾಯಿಗಳನ್ನು ಸಂರಕ್ಷಣೆ ಮಾಡುವ ಜತೆಗೆ ಸಮಾಜದಲ್ಲಿ ಆದರ್ಶ ಮಕ್ಕಳಾಗಬೇಕೆಂದರು.

ಹಾಸ್ಯ ಕಲಾವಿದ ಪ್ರಾಣೇಶ ಜೋಶಿ ಹಾಗೂ ನರಸಿಂಹ ಜೋಶಿ ತಾಯಿ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿ, ಇಡೀ ಜಗತ್ತಿನಲ್ಲಿ ತಾಯಿಗಿಂತಲೂ ಯಾವುದು ದೊಡ್ಡದಿಲ್ಲ. ನಮಗೆಲ್ಲ ತಾಯಿ ಸ್ಪೂರ್ತಿಯಾಗಿದ್ದಾಳೆ. ಆಕೆ ಇಲ್ಲದ ಜಗತ್ತು ಬರೀ ಶೂನ್ಯ ಎನ್ನುವ ಅರ್ಥದಲ್ಲಿ ಎಲ್ಲರ ಮನಸೆಳೆದರು.

ಸಂಗೀತ ಕಾರ್ಯಕ್ರಮ:ಹಾಸ್ಯ ಕಲಾವಿದ ಪ್ರಾಣೇಶ ಜೋಶಿ, ನರಸಿಂಹ ಜೋಶಿ, ಬಾಲ ಗಾಯಕ ಅರ್ಜುನ ಇಟಗಿ, ಕೇಂದ್ರ ಸಾಹಿತ್ಯ ಜನಪದ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಮಾರೆಪ್ಪ ದಾಸರ ಅವರಿಂದ ಸಂಗೀತ ಮತ್ತು ಹಾಸ್ಯ ಕಾರ್ಯಕ್ರಮ ಜರುಗಿತು.

ಈ ಸಂದರ್ಭ ಹುಬ್ಬಳ್ಳಿ ಎಂಜಿನಿಯರ್‌ಗಳಾದ ಚಂದ್ರಶೇಖರ ಹರ್ತಿ, ಸೂಗಪ್ಪ ಎಮ್ಮಿ, ಸಾಹಿತಿ ಕೆ. ಶಾಂತಾ, ಡಾ. ಶಿವಕುಮಾರ ದಿವಟರ್, ಸಾಹಿತಿ ಡಾ. ಶಿವಕುಮಾರ ಮಾಲಿಪಾಟೀಲ, ಸುರೇಶಗೌಡ ಶಿವನಗೌಡ್ರ, ಸಿದ್ದರಾಮಗೌಡ ಮಾಲಿಪಾಟೀಲ, ಮಲ್ಲೇಶಗೌಡ ಮಾಲಿಪಾಟೀಲ, ಪಂಪನಗೌಡ ಮಾಲಿಪಾಟೀಲ ಮತ್ತಿತರರು ಇದ್ದರು.