ಎರಡು ಧರ್ಮಗಳ ಹಿರಿಯ ಮತ್ತು ಹಿರಿಯ ಮುಖಂಡರನ್ನು ಜೊತೆಗೂಡಿಸಿಕೊಂಡು ಈ ದೇವಾಲಯ ನಿರ್ಮಾಣಕ್ಕೆ ಕಾರಣ ಕರ್ತರಾಗಿದ್ದಾರೆ. ಶ್ರೀಮಾರಮ್ಮ ದೇವಾಲಯ ಉದ್ಘಾಟನೆಗೊಂಡು ಗ್ರಾಮದ ಮುಸ್ಲಿಂ ಸಮುದಾಯದ ಜನತೆ ಇದು ಹಿಂದೂಗಳ ದೇವಾಲಯ ಎಂಬ ಬೇದ ಭಾವವಿಲ್ಲದೆ ಸೌಹಾರ್ದತೆಯಿಂದ ಪಾಲ್ಗೊಂಡು ಮಾದರಿಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪ್ರತಿ ಗ್ರಾಮಗಳು ಭಾವೈಕ್ಯತೆಯ ಕೇಂದ್ರಗಳಾಗಿ ಸರ್ವ ಜನರು ಸಂಭ್ರಮದಿಂದ ಒಗ್ಗೂಡಿ ಹಬ್ಬ ಹರಿದಿನಗಳನ್ನು ಆಚರಿಸಿದಾಗ ಮಾತ್ರ ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಹೇಳಿದರು.ತಾಲೂಕಿನ ಅಲಂಬಾಡಿ ಕಾವಲು ಗ್ರಾಮದ ಶ್ರೀಮಾರಮ್ಮ ತಾಯಿ ದೇವಾಲಯ ಉದ್ಘಾಟನಾ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ದಂಪತಿ ಸಮೇತರಾಗಿ ಪಾಲ್ಗೊಂಡು ದೇವಿಗೆ ಪೂಜೆ ಸಲ್ಲಿಸಿ ಮಾತನಾಡಿ, ಈ ಗ್ರಾಮ ಹಿಂದೂ-ಮುಸ್ಲಿಂ ಭಾವೈಕ್ಯತೆ ಒಳಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆರ್ಟಿಒ ಅಧಿಕಾರಿ ಮಲ್ಲಿಕಾರ್ಜುನ್ ಗ್ರಾಮದ ಎರಡು ಧರ್ಮಗಳ ಹಿರಿಯ ಮತ್ತು ಹಿರಿಯ ಮುಖಂಡರನ್ನು ಜೊತೆಗೂಡಿಸಿಕೊಂಡು ಈ ದೇವಾಲಯ ನಿರ್ಮಾಣಕ್ಕೆ ಕಾರಣ ಕರ್ತರಾಗಿದ್ದಾರೆ. ಶ್ರೀಮಾರಮ್ಮ ದೇವಾಲಯ ಉದ್ಘಾಟನೆಗೊಂಡು ಗ್ರಾಮದ ಮುಸ್ಲಿಂ ಸಮುದಾಯದ ಜನತೆ ಇದು ಹಿಂದೂಗಳ ದೇವಾಲಯ ಎಂಬ ಬೇದ ಭಾವವಿಲ್ಲದೆ ಸೌಹಾರ್ದತೆಯಿಂದ ಪಾಲ್ಗೊಂಡು ಮಾದರಿಯಾಗಿದ್ದಾರೆ ಎಂದರು.ನನ್ನ ಧರ್ಮಪತ್ನಿ ಹುಟ್ಟೂರಿನ ಮೇಲೆ ವಿಶೇಷ ಪ್ರೀತಿಯ ಅಭಿಮಾನವಿದೆ. ಗ್ರಾಮಗಳಲ್ಲಿ ದೇವಾಲಯಗಳಿದ್ದರೆ ಜನರು ಭಯ, ಭಕ್ತಿಯಿಂದ ಜೀವನ ನಡೆಸುತ್ತಾರೆ. ದೇವಾಲಯಗಳು ನಾಡಿನ ಆಚಾರ ಕೇಂದ್ರಗಳಾಗಿ ಪ್ರತಿಯೊಂದು ಗ್ರಾಮಗಳಲ್ಲಿರಬೇಕು ಎಂದರು.
ದೇವಾಲಯ, ವಿಚಾರಕ್ಕೆ ಶಾಲೆ, ಜೀವ ಜಲಕ್ಕೆ ಕೆರೆ ಕಟ್ಟೆಗಳಿದ್ದರೆ, ಗ್ರಾಮೀಣ ಭಾಗವು ಸಮೃದ್ಧಿಯಾಗಿ ಸಮಾತೋಲನದಿಂದ ಕೂಡಿರುತ್ತದೆ. ನಮ್ಮ ಹಿರಿಯರ ಸಂಪ್ರದಾಯವನ್ನು ಇಂದಿನ ಯುವ ಜನತೆ ಪಾಲಿಸಬೇಕು ಎಂದರು.ಇದೇ ವೇಳೆ ನೆರೆದಿದ್ದ ಭಕ್ತರಿಗೆ ಪ್ರಸಾದ ಭೋಜನ ಬಡಿಸಿದರು. ನೂತನ ಶ್ರೀಮಾರಮ್ಮ ದೇವಾಲಯದ ಸಂಪೂರ್ಣ ನಿರ್ಮಾಣ ಕಾರ್ಯವನ್ನು ಸಮಾಜ ಸೇವಕ ಆರ್ಟಿಒ ಮಲ್ಲಿಕಾರ್ಜುನ್ ವಹಿಸಿಕೊಂಡಿದ್ದರು. ದೇವಾಲಯ ಉದ್ಘಾಟನೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ 5 ಸಾವಿರಕ್ಕೂ ಹೆಚ್ಚು ಭಕ್ತರಿಗೆ ಗ್ರಾಮಸ್ಥರ ಸಹಕಾರದಿಂದ ಅನ್ನಸಂತರ್ಪಣೆ ಜರುಗಿತು.
ಕಾರ್ಯಕ್ರಮದಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಐಪನಹಳ್ಳಿ ನಾಗೇಂದ್ರ ಕುಮಾರ್, ಕರ್ನಾಟಕ ನಗರ ಮೂಲಸೌಕರ್ಯ ಮತ್ತು ಹಣಕಾಸು ನಿಗಮದ ಮಾಜಿ ಅಧ್ಯಕ್ಷ ಮತ್ತಿಘಟ್ಟ ಕೃಷ್ಣಮೂರ್ತಿ, ತಾಪಂ ಮಾಜಿ ಅಧ್ಯಕ್ಷ ನಂಜುಂಡೇಗೌಡ, ಗ್ರಾಮದ ಯಜಮಾನರಾದ ತಮ್ಮೆಗೌಡ, ನಾಗರಾಜು, ವಿಜಯ ಕುಮಾರ್, ಬಸವರಾಜ್, ಶಿವರಾಮು, ಚಂದ್ರೆಗೌಡ, ಮಂಜುನಾಥ್, ರಾಜುನಾಯ್ಕ, ವಿಶ್ವನಾಥ್, ಮಸ್ತಿಗೌಡ, ಸುಜೇಂದ್ರ, ಮಹೇಶ್, ಗ್ರಾಪಂ ಅಧ್ಯಕ್ಷ ಮಹಮದ್ ಹತಿಕ್, ಸದಸ್ಯರಾದ ರವಿ, ಎ.ರಾಜು, ಸೊಸೈಟಿ ಅಧ್ಯಕ್ಷ ಮೋಹನ್, ಮಾಜಿ ಅಧ್ಯಕ್ಷ ಕರೀಶೆಟ್ಟಿ, ಮುಸ್ಲಿಂ ಮುಖಂಡ ಸಿದ್ದಿಕ್, ಪಠಾಣ್, ಯುವ ಮುಖಂಡ ಮೂರ್ತಿ, ಪ್ರಮೋದ್, ಆರ್ಟಿಒ ಮಲ್ಲಿಕಾರ್ಜುನ್ ಆಪ್ತ ಸಹಾಯಕ ಗಂಜಿಗೆರೆ ಮಹೇಶ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.