ಅಳಿದರೂ ಬಹುಕಾಲ ಉಳಿಯುವ ಛಾಯಾಚಿತ್ರ

| Published : Oct 23 2024, 12:43 AM IST

ಸಾರಾಂಶ

ಧಾರವಾಡ ಬರಿ ಸಾಹಿತಿಗಳ ನಾಡಲ್ಲ, ಕಲಾವಿದರ ಬೀಡೂ ಹೌದು. ಜೀವನಯಾನ ಒಂದು ಪ್ರಯೋಗಶೀಲ ಕವನ ಸಂಕಲನ. ಅಂತಾರಾಷ್ಟ್ರೀಯ ಖ್ಯಾತಿಯ ಟ.ಎಸ್. ಸತ್ಯನ್‌ರ ಛಾಯಾಚಿತ್ರಗಳಿಗೆ ಕಿರಣ ಕವಿತೆಗಳನ್ನು ಬರೆಯುವ ಸಾಹಸ ಕೆಲಸ ಮಾಡಿದ್ದಾರೆ.

ಧಾರವಾಡ:

ಛಾಯಾಚಿತ್ರಗಳು ಯಾರು ಅಳಿದರೂ ನಿರಂತವಾಗಿ ಉಳಿಯುವ ಕಾಲದ ಕುರುಹುಗಳು ಎಂದು ಬಂಡಾಯ ಕವಿ ಸತೀಶ ಕುಲಕರ್ಣಿ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕವಿ, ಶಿಕ್ಷಕ ಕಿರಣ ಜತ್ತಿ ಅವರ ಜೀವನಯಾನ ಚಿತ್ರ ಕಾವ್ಯ ಸಂಕಲನ ಬಿಡುಗಡೆ ಮಾಡಿದ ಅವರು, ವಿದ್ಯಾವರ್ಧಕ ಸಂಘದ ಆವರಣದಲ್ಲಿರುವ ನೂರಾರು ಭಾವಚಿತ್ರಗಳು ಈ ಮಾತಿಗೆ ಸಾಕ್ಷಿ. ಕಾಲದ ಒಂದೊಂದು ಜೀವನ ವಿಧಾನವನ್ನು ಸಾಧನಾ ಪಥಗಳನ್ನು ಸಾರುವಂತಿವೆ. ಕಲಾವಿದನ ಒಂದು ಚಿತ್ರ, ಒಂದು ಕಲಾಕೃತಿ ನೂರಾರು ನೆನಪುಗಳನ್ನು ಹುಟ್ಟು ಹಾಕಬಲ್ಲವು ಎಂದರು.

ಕಲಾವಿದ ಬಿ. ಮಾರುತಿ ಮಾತನಾಡಿ, ಕಲಾ ಪ್ರದರ್ಶನಗಳು ನಡೆದಾಗ ಮಾತ್ರ ಒಬ್ಬ ಕಲಾವಿದನ ಚಿಂತನೆಗಳು ಸಮಾಜಕ್ಕೆ ತಲುಪಿಸಲು ಸಾಧ್ಯ. ಕಲಾ ಕ್ಷೇತ್ರ ಬೆಳೆಯಬೇಕೆಂದರೆ ಪ್ರದರ್ಶನಗಳು ಹೆಚ್ಚಾಗಬೇಕು. ಅಂದಾಗಲೇ ಕಲೆಯ ಭಿನ್ನ ಶೈಲಿಗಳ ಆಸ್ವಾದಿಸಿ, ಅಂಥ ಕಲೆಗೆ ಪ್ರೋತ್ಸಾಹ ಸಿಗಲು ಸಾಧ್ಯ. ಫೋಟೊಗ್ರಾಫಿಗೆ ಚಿತ್ರಕಲೆಗೆ ಅವಿನಾಭಾವ ಸಂಬಂಧ ಇದೆ. ಫೋಟೊಗ್ರಾಪಿ ಬಂದಾಗ ಕಲಾವಿದರ ಅಸ್ತಿತ್ವ ಹೋಗುತ್ತದೆ ಎನ್ನಲಾಗಿತ್ತು. ಆದರೆ ಫೋಟೊಗ್ರಾಫಿ ಬಂದದ್ದರಿಂದಲೇ ಹಲವು ಕಲಾ ಮ್ಯೂಸಿಯಂ ಸೃಷ್ಟಿಯಾದವು ಎಂದು ಹೇಳಿದರು.

ಪುಸ್ತಕ ಪರಿಚಯಿಸಿದ ಹಾವೇರಿಯ ಡಾ. ಅಂಬಿಕಾ ಹಂಚಾಟೆ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಧಾರವಾಡ ಬರಿ ಸಾಹಿತಿಗಳ ನಾಡಲ್ಲ, ಕಲಾವಿದರ ಬೀಡೂ ಹೌದು. ಜೀವನಯಾನ ಒಂದು ಪ್ರಯೋಗಶೀಲ ಕವನ ಸಂಕಲನ. ಅಂತಾರಾಷ್ಟ್ರೀಯ ಖ್ಯಾತಿಯ ಟ.ಎಸ್. ಸತ್ಯನ್‌ರ ಛಾಯಾಚಿತ್ರಗಳಿಗೆ ಕಿರಣ ಕವಿತೆಗಳನ್ನು ಬರೆಯುವ ಸಾಹಸ ಕೆಲಸ ಮಾಡಿದ್ದಾರೆ. ಚಿತ್ರಗಳು ಭಾರತದ ನಿಜ ದರ್ಶನ ಮಾಡಿಸುತ್ತವೆ. ಕವಿತೆಗಳು ಇಲ್ಲಿ ಬೀಜಭಾವಗಳಾಗಿವೆ. ವಾಸ್ತವತೆ ಇದೆ. ತಾಯಿ ಮಗುವಿನ ಪ್ರೀತಿಯ ಅನೇಕ ಛಾಯಾಚಿತ್ರಗಳು, ಕವಿತೆಗಳು ಓದುಗರನ್ನು ಬಹಳ ಕಾಲ ಕಾಡುತ್ತವೆ ಎಂದರು.ಖ್ಯಾತ ಕಲಾವಿದ, ಲಲಿತ ಕಲಾ ಅಕಾಡೆಮಿ ಸದಸ್ಯ ಕರಿಯಪ್ಪ ಹಂಚಿನಮನಿ, ಹಾವೇರಿ ಸಾಹಿತಿ ಕಲಾ ಬಳಗದ ಎಸ್. ಆರ್. ಹಿರೇಮಠ ಮಾತನಾಡಿದರು. ಕವಿ ಕಿರಣ ಜತ್ತಿ ಮತ್ತು ಅವರ ಪತ್ನಿ ಪ್ರತಿಭಾ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು.