ದಲಿತರನ್ನು ಭೂಮಿ ಹಕ್ಕಿನಿಂದ ಹೊರಗಟ್ಟಲು ಕುತಂತ್ರ

| Published : Jul 19 2025, 02:00 AM IST

ದಲಿತರನ್ನು ಭೂಮಿ ಹಕ್ಕಿನಿಂದ ಹೊರಗಟ್ಟಲು ಕುತಂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ೪ ದಶಕಗಳಿಂದ ದಲಿತರು ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿ ದರಕಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತರಲಾಗಿದ್ದರೂ, ಸರ್ಕಾರದ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ದಲಿತರು ಕೇವಲ ಶೇ.೧೧ರಷ್ಟು ಭೂಮಿ ಮಾತ್ರ ಹೊಂದಿದ್ದಾರೆ.

ಯಲಬುರ್ಗಾ:

ದಲಿತರ ಭೂಮಿ-ವಸತಿ ಹಕ್ಕು ಹಾಗೂ ಇನ್ನಿತರ ಬೇಡಿಕೆ ಹಕ್ಕೊತ್ತಾಯಗಳಿಗೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ತಾಲೂಕು ಘಟಕದಿಂದ ಪಟ್ಟಣದ ತಹಸೀಲ್ದಾರ್‌ ಕಚೇರಿ ಆವರಣದಲ್ಲಿ ಶುಕ್ರವಾರ ಧರಣಿ ಸತ್ಯಾಗ್ರಹ ನಡೆಸಲಾಯಿತು.

ದಲಿತ ಸಂಘರ್ಷ ಸಮಿತಿ ವಿಭಾಗದ ಸಂಚಾಲಕ ಪುಟ್ಟರಾಜ ಪೂಜಾರ ಮಾತನಾಡಿ, ಕೆಲ ಪಟ್ಟಭದ್ರರು ತಲತಲಾಂತರದಿಂದ ದಲಿತರನ್ನು ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವಂಚಿಸುತ್ತಾ ಬಂದಿದ್ದಾರೆ. ಕಳೆದ ೪ ದಶಕಗಳಿಂದ ದಲಿತರು ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿ ದರಕಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತರಲಾಗಿದ್ದರೂ, ಸರ್ಕಾರದ ಅಂಕಿ-ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ದಲಿತರು ಕೇವಲ ಶೇ.೧೧ರಷ್ಟು ಭೂಮಿ ಮಾತ್ರ ಹೊಂದಿದ್ದಾರೆ ಎಂದರು.

ಪಿಟಿಸಿಎಲ್ ಕಾಯ್ದೆ ಜಾರಿಗೆ ಬಂದಿದ್ದರೂ ಸಹ ಜಾತಿವಾದಿಗಳ ಹಾಗೂ ಅಧಿಕಾರಶಾಹಿಗಳ ಮಸಲತ್ತಿನಿಂದ ಮತ್ತು ಸರ್ಕಾರಗಳ ಕುತಂತ್ರದಿಂದ ಪಿಟಿಸಿಎಲ್ ಜಮೀನುಗಳ ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋರ್ಟ್‌ಗೆ ಅಲೆದಾಡುವ ಜತೆಗೆ ವಂಚನೆಗೆ ಒಳಗಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡ ಶಿವಾನಂದ ಬಣಕಾರ ಮಾತನಾಡಿ, ಬಗರ್‌ಹುಕುಂ ಸಾಗುವಳಿ ಮಾಡುತ್ತಿರುವ ದಲಿತರನ್ನು ಅರಣ್ಯ ಭೂಮಿ, ಸಾಮಾಜಿಕ ಅರಣ್ಯೀಕರಣ, ಗೋಮಾಳಗಳಿಗೆ ಕಾಯ್ದಿರುಸುವ ನೆಪದಲ್ಲಿ ಒಕ್ಕಲೆಬ್ಬಿಸುವುದು ಖಂಡನಾರ್ಹ. ದಲಿತರಿಗೆ ಮಂಜೂರಾದ ಭೂಮಿಯನ್ನು ಸರ್ಕಾರಗಳು ಕೈಗಾರಿಕೆಗಳ ಸ್ಥಾಪನೆಗಾಗಿ ಭೂಸ್ವಾಧೀನ ಮಾಡುವ ಮೂಲಕ ದಲಿತರನ್ನು ಸಂಪೂರ್ಣವಾಗಿ ಭೂಮಿ ಹಕ್ಕಿನಿಂದ ಹೊರಗಟ್ಟಲು ಕುತಂತ್ರ ನಡೆಸಿವೆ ಎಂದು ಆಕ್ರೋಶ ವ್ಯಕ್ತಡಪಸಿದರು.

ತಾಲೂಕಿನ ವಣಗೇರಿ, ತಿಪ್ಪನಾಳ, ಬುಕನಟ್ಟಿ ಗ್ರಾಮದ ಸರ್ವೇ ನಂ.೩೧ರಲ್ಲಿ ಸಾಗುವಳಿ ಮಾಡುತ್ತಾ ಬಂದಿರುವ ರೈತರಿಗೆ ಜಮೀನು ಮಂಜೂರು ಮಾಡಿ, ಪಹಣಿ ವಿತರಿಸಬೇಕು. ದರಕಾಸ್ತು ಅರ್ಜಿ ಪ್ರಕ್ರಿಯೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು. ದಲಿತರಿಗೆ ಸ್ಮಶಾನ ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಈ ವೇಳೆ ಪ್ರಮುಖರಾದ ಸುರೇಶ ನಡುಲಮನಿ, ಶರಣಪ್ಪ ಹಿರೇಅರಳಿಹಳ್ಳಿ, ವಿಶ್ವನಾಥ ನಡುಲಮನಿ, ಮಲ್ಲಿಕಾರ್ಜುನ ಹಣಗಿ, ಶರಣಪ್ಪ ತೊಂಡಿಹಾಳ, ಹುಸೇನಪ್ಪ ಮುತ್ತಾಳ, ನಾಗರಾಜ ಯಡಿಯಾಪುರ, ರಮೇಶ ನಡುಲಮನಿ, ಭೀಮಣ್ಣ ಬೂದಗುಂಪಾ ಸೇರಿದಂತೆ ಇನ್ನಿತರರು ಇದ್ದರು.