21 ದಿನದಲ್ಲಿ ಆಗುವ ಕೆಲಸವನ್ನು 21 ನಿಮಿಷದಲ್ಲಿ ಮಾಡಲು ಪ್ರಜಾಸೇವಾ ಕಾರ್ಯಕ್ರಮದಿಂದ ಸಾಧ್ಯ
ಹೋಬಳಿ ಮಟ್ಟದ ಪ್ರಜಾಸೇವಾ ಸಮಾವೇಶಕ್ಕೆ ಉಪಸಭಾಧ್ಯಕ್ಷ ಹೇಳಿಕೆ
ಕನ್ನಡಪ್ರಭ ವಾರ್ತೆ ಹೊನ್ನಾವರ21 ದಿನದಲ್ಲಿ ಆಗುವ ಕೆಲಸವನ್ನು 21 ನಿಮಿಷದಲ್ಲಿ ಮಾಡಲು ಪ್ರಜಾಸೇವಾ ಕಾರ್ಯಕ್ರಮದಿಂದ ಸಾಧ್ಯ ಎಂದು ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳ ವೈದ್ಯ ತಿಳಿಸಿದರು.
ತಾಲೂಕಿನ ಮಾವಿನಕುರ್ವಾ ನವದುರ್ಗಾ ಸಭಾಭಾವನದಲ್ಲಿ ನಡೆದ ಹೋಬಳಿ ಮಟ್ಟದ ಪ್ರಜಾಸೇವಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಲ್ಲಿಕೆಯಾದ ಎಲ್ಲ ಇಲಾಖೆಯ ಅರ್ಜಿಯನ್ನು 21 ದಿನದಲ್ಲಿ ಅರ್ಜಿ ವಿಲೇವಾರಿ ಮಾಡಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳಿಂದ ಆಗದೆ ಇರುವ ಕೆಲಸ ಯಾವುದು ಇಲ್ಲ. ಸಚಿವರು, ಶಾಸಕರು, ಅಧಿಕಾರಿಗಳ ಕಚೇರಿ ಅಲೆಯುವುದನ್ನು ತಪ್ಪಿಸುವುದು ಇಂತಹ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಸ್ವಾತಂತ್ರ್ಯ ಬಂದು 80 ವರ್ಷ ಕಳೆದರೂ ತಾವು ವಾಸಿಸುವ ಮನೆಗೆ ಹಕ್ಕುಪತ್ರ ಇರಲಿಲ್ಲ. ಬಗರ್ ಹುಕ್ಂ ಯೋಜನೆಯಡಿ ಈ ದಿನ 7 ಮನೆಗಳಿಗೆ ಹಕ್ಕುಪತ್ರ ವಿತರಣೆಯ ಕಾರ್ಯವಾಗಲಿದೆ ಎಂದರು.ಕ್ಷೇತ್ರದ ಎಲ್ಲ ಶಾಲೆ, ಅಂಗನವಾಡಿಗೆ ಅರಣ್ಯ ಇಲಾಖೆಯ ಸುಪರ್ದಿಯಿಂದ ಆಯಾ ಶಾಲೆಯ ಹೆಸರಿಗೆ ಆರ್ಟಿಸಿ ಮಾಡಲಾಗಿದೆ ಎಂದ ಅವರು, ಒಳ್ಳೆಯ ಕೆಲಸ ಮಾಡಿದ ಅಧಿಕಾರಿಯನ್ನು ಅಭಿನಂದಿಸುವ ಜೊತೆ ಕೆಲಸ ಮಾಡದ ಅಧಿಕಾರಿಯನ್ನು ವರ್ಗಾಯಿಸುದಾಗಿ ತಿಳಿಸಿದರು.
ಮೂರು ತಿಂಗಳಿನೊಳಗೆ ಎಲ್ಲ ಗ್ರಾಪಂ ಮಟ್ಟದಲ್ಲಿಯೂ ಸಭೆ ನಡೆಸಿ, ಮೇಲ್ವಿಚಾರಣಾ ಸಭೆಯನ್ನು ತಾಲೂಕು ಕೇಂದ್ರದಲ್ಲಿ ನಡೆಸುತ್ತೇವೆ. ಇಲ್ಲಿ ಸಲ್ಲಿಕೆಯಾದ ಅರ್ಜಿಯು ಅದರೊಳಗೆ ಇತ್ಯರ್ಥವಾಗಲಿದೆ. ಮುಖ್ಯಮಂತ್ರಿ ಹಾಗೂ ಸರ್ಕಾರದ ಕಾರ್ಯದರ್ಶಿಗೆ ಇಲ್ಲಿ ಸಲ್ಲಿಕಯಾದ ಅರ್ಜಿ ತಲುಪಲಿದ್ದು, ಅರ್ಜಿದಾರರ ಮನೆಗೇ ಅಧಿಕೃತ ಕಾಗದಪತ್ರ ಬರಲಿದೆ. ಇದು ಯಾವುದೇ ಕಾರಣಕ್ಕೂ ಕಾಟಾಚಾರದ ಕಾರ್ಯಕ್ರಮವಲ್ಲ, ಬದಲಾಗಿ ಬಡವರಿಗೆ ನ್ಯಾಯ ಒದಗಿಸುವ ಪ್ರಾಮಾಣಿಕ ಪ್ರಯತ್ನ ಎಂದರು.7 ಜನರಿಗೆ ಬಗರಹುಕುಂ ಹಕ್ಕುಪತ್ರ, ಪಿಂಚಣೆ, ಸುಕನ್ಯಾ ಸಮೃದ್ಧಿ ಆದೇಶ ಪ್ರತಿ, ಅರಣ್ಯ ಇಲಾಖೆಯ ಪರಿಹಾರ ಧನದ ಚೆಕ್ ವಿತರಿಸಲಾಯಿತು. ವಿವಿಧ ಇಲಾಖೆಯ ಅರ್ಜಿ ಸ್ವೀಕರಿಸಿ ಚರ್ಚಿಸಿ ಸಂಬಂಧಿಸಿದ ಇಲಾಖೆಗೆ ಸ್ಥಳ ಭೇಟಿ ಮಾಡಿ ಸಮಸ್ಯೆ ಬಗೆಹರಿಸುವಂತೆ ಉಪಸಭಾಪತಿ ಸೂಚಿಸಿದರು.
ತಹಸೀಲ್ದಾರ್ ಪ್ರವೀಣ ಕರಾಂಡೆ ಮಾತನಾಡಿದರು. ಸಹಾಯಕ ಆಯುಕ್ತ ಜಿ. ಮಹೇಶ, ತಾಪಂ ಇಒ ಪುಟ್ಟೆಗೌಡ, ಗ್ಯಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಅಣ್ಣಪ್ಪ ನಾಯ್ಕ, ಜಿಪಂ ಮಾಜಿ ಸದಸ್ಯ ಕೃಷ್ಣಗೌಡ, ಗೋವಿಂದ ನಾಯ್ಕ, ಉಲ್ಲಾಸ ನಾಯ್ಕ, ತಿಲಕ ಗೌಡ, ಯೊಗೀಶ ರಾಯ್ಕರ್, ವಿ.ಕೆ. ವಿಶಾಲ, ಅಣ್ಣಯ್ಯ ನಾಯ್ಕ, ಪೀಟರ್ ಮೆಂಡೆಸ್ಸಾ ಮತ್ತಿತರಿದ್ದರು.