ಲಕ್ಷ್ಮೇಶ್ವರ: ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದ ಶಿಕ್ಷಕರನ್ನು ಗೌರವಿಸುವುದೇ ಭಾಗ್ಯ ಎನ್ನುವ ನಿಟ್ಟಿನಲ್ಲಿ ಪಟ್ಟಣದ ಶತಮಾನದ ಇತಿಹಾಸ ಹೊಂದಿರುವ ಉಮಾ ವಿದ್ಯಾಲಯದಲ್ಲಿ ೧೯೮೫- ೮೬ನೇ ಸಾಲಿನಲ್ಲಿ ಕಲಿತ ವಿದ್ಯಾರ್ಥಿಗಳ ವತಿಯಿಂದ ಗುರುವಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಒಂದೇ ಶಾಲೆಯಲ್ಲಿ ಕಲಿತು ಇದೀಗ ನೌಕರಿ ಹಾಗೂ ವ್ಯಾಪಾರ ಇತ್ಯಾದಿಗಳಿಂದ ದೂರವಾಗಿ ಸುಮಾರು ೩೮- ೩೯ ವರ್ಷಗಳ ಬಳಿಕ ಸ್ನೇಹಿತರು ಒಂದೆಡೆ ಸೇರಿ ಸಂಭ್ರಮಿಸಿದರು. ನಾಲ್ಕು ದಶಕಗಳ ಹಿಂದಿನ ನೆನಪುಗಳ ಮೆರವಣಿಗೆ ಅಲ್ಲಿ ಸಾಂಗವಾಗಿ ಸಾಗಿತ್ತು. ಪ್ರತಿಯೊಬ್ಬರೂ ತಮ್ಮ ವಿದ್ಯಾರ್ಥಿ ಜೀವನದ ಸುಮಧುರ ಕ್ಷಣ, ನೋವು- ನಲಿವಿನ ಕ್ಷಣಗಳನ್ನು ಹಂಚಿಕೊಂಡರು.ಪಟ್ಟಣದ ಶಂಕರಭಾರತಿ ಸಮುದಾಯ ಭವನದಲ್ಲಿ ಬುಧವಾರ ಸಮ್ಮಿಳಿತರಾದ ೪ ದಶಕಗಳ ಸ್ನೇಹಿತರು ಗುರುವಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬದುಕಿನ ಉನ್ನತಿಗೆ ಕಾರಣರಾದ ತಮ್ಮ ನೆಚ್ಚಿನ ಗುರುವೃಂದಕ್ಕೆ ಗುರುವಂದನಾ ಸಮಾರಂಭ ಅರ್ಥಪೂರ್ಣವಾಗಿ ಸಂಯೋಜಿಸಿ ಗುರುಗಳಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಧನ್ಯತಾಭಾವ ಮೆರೆದರು.

ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿದ ಉಮಾ ವಿದ್ಯಾಲಯ ಹೈಸ್ಕೂಲ್‌ನ ನಿವೃತ್ತ ಮುಖ್ಯೋಪಾಧ್ಯಾಯ ಡಾ. ಎನ್.ವಿ. ಧೂಳಖೇಡ ಮಾತನಾಡಿ, ಸುಮಾರು ೪೦ ವರ್ಷಗಳ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರಿ ಈ ಕಾರ್ಯಕ್ರಮ ನಡೆಸುತ್ತಿರುವುದು ಸಂತೋಷದ ವಿಚಾರ. ಸಮಾಜದಿಂದ ನಾವು ಪಡೆಯುವುದಕ್ಕಿಂತ ಮೊದಲು ಸಮಾಜಕ್ಕೆ ನಾನೇನು ಮಾಡಿದ್ದೇನೆ ಎಂಬುದನ್ನು ಮನದಟ್ಟು ಮಾಡಿಕೊಳ್ಳಬೇಕು ಎಂದರು.

ನಿವೃತ್ತ ಶಿಕ್ಷಕರಾದ ಎಸ್.ಸಿ. ಸಂಶಿ, ಎಸ್.ಎಸ್. ನಾಗಲೋಟಿ, ಎಸ್.ಎಫ್. ಬೂದಿಹಾಳ, ಎಚ್.ಎಫ್. ಮುದಗಲ್, ಎಚ್.ಎಂ. ಮುಳಗುಂದ, ಎಸ್.ಸಿ. ಅಳಗವಾಡಿ, ಐ.ಕೆ. ಹೊನ್ನಪ್ಪನವರ, ಎಸ್.ಬಿ. ಕೊಣ್ಣೂರ, ಎನ್.ಬಿ. ಸೂರಣಗಿ, ಝಡ್.ಎಂ. ಬಾಂದಾರ, ಆರ್.ಎಂ. ಭಾಂಗಿ, ಶಿಕ್ಷಕೇತರ ಸಿಬ್ಬಂದಿ ಜಿ.ಜಿ. ಹಾಲೇವಾಡಿಮಠ, ಮೋಹನ ಸುತಾರ, ಎನ್.ಎಚ್. ಶರಸೂರಿ, ಬಿ.ಎಂ. ಅರಳಿಕಟ್ಟಿ, ಸಾತಪೂತೆ, ಹೆಸರೂರ ಅವರನ್ನು ಗೌರವಿಸಲಾಯಿತು.ಪ್ರಕಾಶ ಮ್ಯಾಗೇರಿ ಸ್ವಾಗತಿಸಿದರು. ಎಸ್.ಎಫ್. ಕೊಡ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಮು ನಾಯಕ್ ವಂದಿಸಿದರು. ಗಿರೀಶ ಅಗಡಿ ನಿರೂಪಿಸಿದರು.