ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ಪ್ರಧಾನಿ ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾದ ಬಳಿಕ ಪ್ರಥಮ ಬಾರಿಗೆ ಮಂಡ್ಯ ಜಿಲ್ಲೆಗೆ ಆಗಮಿಸಿದ ಎಚ್ .ಡಿ. ಕುಮಾರಸ್ವಾಮಿ ಅವರಿಗೆ ತಾಲೂಕಿನ ಗೆಜ್ಜಲಗೆರೆ ಗ್ರಾಮದ ಅವರ ಅಭಿಮಾನಿ ರೋಜ್ ವುಡ್ ಚೇರ್ ಉಡುಗೊರೆ ನೀಡಿ ಅಭಿನಂದಿಸಿದರು. ಮಂಡ್ಯದ ಸಂಸದರ ಕಚೇರಿ ಉದ್ಘಾಟನೆಗೆ ಬೆಂಗಳೂರಿನಿಂದ ತೆರಳುತ್ತಿದ್ದ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರನ್ನು ಗೆಜ್ಜಲಗೆರೆ ಗ್ರಾಮದ ಗ್ರಾಪಂ ಸದಸ್ಯ ಸಾಯಿ ಪ್ರಸನ್ನ ಸುಮಾರು 80 ಸಾವಿರ ಮೌಲ್ಯದ ರೋಸ್ ವುಡ್ ಚೇರನ್ನು ಉಡುಗೊರೆಯಾಗಿ ನೀಡಿ ಅಭಿನಂದಿಸಿದರು.ಮೈಸೂರಿನಲ್ಲಿ ಅತ್ಯುತ್ತಮ ಕೆಲಸಗಾರರಿಂದ ತಯಾರಿಸಲಾಗಿರುವ ಚೇರ್ ನಲ್ಲಿ ಗಂಡಭೇರುಂಡ ಲಾಂಛನ ಹಾಗೂ ಆನೆಯ ಸುಂದರ ಕೆತ್ತನೆಯ ಕೆಲಸ ಮಾಡಲಾಗಿದೆ. ಸಂಜೆ ಮಂಡ್ಯಕ್ಕೆ ತೆರಳುತ್ತಿದ್ದ ಸಚಿವ ಕುಮಾರಸ್ವಾಮಿ ಅವರಿಗೆ ಗೆದ್ದಲು ಗ್ರಾಮದಲ್ಲಿ ಸಾಯಿ ಪ್ರಸನ್ನ ಚೇರ್ ನೀಡಿ ಅಭಿನಂದಿಸಿದರು. ಈ ಹಿಂದೆ ಸಾಯಿ ಪ್ರಸನ್ನ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿ ಎಂದು ದೇವರಲ್ಲಿ ಹರಕೆ ಹೊತ್ತಿದ್ದರು. ಈಗ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದು ಸಂಸದರಾಗಿ ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ.
ಈ ರೋಜ್ ವುಡ್ ಚೇರ್ ನಲ್ಲಿ ಕುಳಿತುಕೊಳ್ಳುವ ಕುಮಾರಸ್ವಾಮಿ ಅವರು ಮುಂದೊಂದು ದಿನ ತಮ್ಮ ತಂದೆ ಎಚ್. ಡಿ. ದೇವೇಗೌಡರ ರೀತಿ ಕುಮಾರಸ್ವಾಮಿ ಈ ದೇಶದ ಪ್ರಧಾನಿಯಾಗಲಿ ಎಂದು ಸಾಯಿ ಪ್ರಸನ್ನ ನಂಬಿಕೆ ವ್ಯಕ್ತಪಡಿಸಿದರು.-------------------
ಬಿಜೆಪಿ ಮುಖಂಡನ ಜೇಬಿನಿಂದ 50 ಸಾವಿರ ಹಣ ಕಳವು:ಮದ್ದೂರು: ಕೇಂದ್ರ ಸಚಿವ ಎಚ್ .ಡಿ.ಕುಮಾರಸ್ವಾಮಿ ಅವರನ್ನು ಜಿಲ್ಲೆಯ ಗಡಿಭಾಗ ನಿಡಘಟ್ಟ ಬಳಿ ಸ್ವಾಗತಿಸುವ ವೇಳೆ ಕಳ್ಳನೋರ್ವ ಕೈಚಳಕ ತೋರಿ ಬಿಜೆಪಿ ಮುಖಂಡನ ಜೇಬಿನಲ್ಲಿದ್ದ ಸುಮಾರು 50 ಸಾವಿರ ರು. ಹಣವನ್ನು ಅಪಹರಿಸಿದ ಘಟನೆ ಶನಿವಾರ ಸಂಜೆ ಜರುಗಿತು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಚನ್ನಪಟ್ಟಣದಿಂದ ಆಗಮಿಸಿದ ವೇಳೆ ನಿಡಘಟ್ಟ ಬಳಿ ಸ್ವಾಗತಿಸುವಾಗ ಜೆಡಿಎಸ್ - ಬಿಜೆಪಿ ಮುಖಂಡರು, ಕಾರ್ಯಕರ್ತರಲ್ಲಿ ನೂಕು ನುಗ್ಗಲು ಉಂಟಾಯಿತು. ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡ ಕಳ್ಳ ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ.ಜೆ. ಮಧುಕುಮಾರ್ ಜೇಬಿನಲ್ಲಿದ್ದ 50 ಸಾವಿರ ರು. ಗಳನ್ನು ಅಪಹರಿಸಿದ್ದಾನೆ. ಅಲ್ಲದೆ, ಕೆಲವು ಕಾರ್ಯಕರ್ತರ ಜೇಬಿಗೂ ಕಳ್ಳರು ಕೈ ಹಾಕಿ ಹಣ ಎಗರಿಸಿದ ಪ್ರಕರಣ ಜರುಗಿದೆ.