ಏಡ್ಸ್‌ ಸೋಂಕಿತರ ಪ್ರಮಾಣದಲ್ಲಿ ಗಣನೀಯ ಇಳಿಕೆ!

| Published : Dec 01 2023, 12:45 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಧಾರವಾಡಸುಮಾರು ಮೂರುವರೆ ದಶಕಗಳಿಂದ ಮಾನವ ಜನಾಂಗವನ್ನು ಕಾಡುತ್ತಿರುವ ಎಚ್‌ಐವಿ ಏಡ್ಸ್‌ ಸೋಂಕಿತರ ಪ್ರಮಾಣ ಹಲವು ನಿಯಂತ್ರಣ ಕ್ರಮಗಳಿಂದ ವರ್ಷದಿಂದ ವರ್ಷಕ್ಕೆ ಕುಂಠಿತಗೊಂಡಿದೆ. ಧಾರವಾಡ ಜಿಲ್ಲೆಯ ಮಟ್ಟಿಗೆ ಆಶಾದಾಯಕ ಎಂಬಂತೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಫ್ರಿವೆನಷನ್‌ ಸೊಸೈಟಿ ಹಾಗೂ ಸ್ಥಳೀಯವಾಗಿ ಎಲ್ಲ ಜಿಲ್ಲೆಗಳಲ್ಲೂ ನಿರಂತರ ಜಾಗೃತಿ ಕಾರ್ಯಕ್ರಮಗಳಿಂದಾಗಿ ಎಚ್‌ಐವಿ ಸೋಂಕಿತರ ಪ್ರಮಾಣ ಇಳಿಮುಖಗೊಂಡಿದೆ. ರೋಗವನ್ನು ಪೂರ್ತಿಯಾಗಿ ನಿರ್ಮೂಲನೆಗೊಳಿಸಲು ಸಾಕಷ್ಟು ಪ್ರಯತ್ನಗಳೂ ನಡೆದಿವೆ.

ಬಸವರಾಜ ಹಿರೇಮಠ

ಕನ್ನಡಪ್ರಭ ವಾರ್ತೆ ಧಾರವಾಡ

ಸುಮಾರು ಮೂರುವರೆ ದಶಕಗಳಿಂದ ಮಾನವ ಜನಾಂಗವನ್ನು ಕಾಡುತ್ತಿರುವ ಎಚ್‌ಐವಿ ಏಡ್ಸ್‌ ಸೋಂಕಿತರ ಪ್ರಮಾಣ ಹಲವು ನಿಯಂತ್ರಣ ಕ್ರಮಗಳಿಂದ ವರ್ಷದಿಂದ ವರ್ಷಕ್ಕೆ ಕುಂಠಿತಗೊಂಡಿದೆ. ಧಾರವಾಡ ಜಿಲ್ಲೆಯ ಮಟ್ಟಿಗೆ ಆಶಾದಾಯಕ ಎಂಬಂತೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ.

ರಾಷ್ಟ್ರೀಯ ಏಡ್ಸ್‌ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಫ್ರಿವೆನಷನ್‌ ಸೊಸೈಟಿ ಹಾಗೂ ಸ್ಥಳೀಯವಾಗಿ ಎಲ್ಲ ಜಿಲ್ಲೆಗಳಲ್ಲೂ ನಿರಂತರ ಜಾಗೃತಿ ಕಾರ್ಯಕ್ರಮಗಳಿಂದಾಗಿ ಎಚ್‌ಐವಿ ಸೋಂಕಿತರ ಪ್ರಮಾಣ ಇಳಿಮುಖಗೊಂಡಿದೆ. ರೋಗವನ್ನು ಪೂರ್ತಿಯಾಗಿ ನಿರ್ಮೂಲನೆಗೊಳಿಸಲು ಸಾಕಷ್ಟು ಪ್ರಯತ್ನಗಳೂ ನಡೆದಿವೆ.

ಎಚ್‌ಐವಿ ವೈರಸ್‌ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹಾಗೂ ಅಪಾಯದ ಸಮುದಾಯಗಳಿಂದ ಸಾಮಾನ್ಯ ಜನರೆಡೆಗೆ ವಿಸ್ತರಿಸಿದೆ. ಈ ಕಾರಣಗಳಿಂದ ರೋಗ ನಿಯಂತ್ರಣದ ಕಾರ್ಯಕ್ರಮಗಳನ್ನು ಪ್ರತಿ ಜಿಲ್ಲಾ ಮಟ್ಟದಿಂದ ತಾಲೂಕು ಹಾಗೂ ಗ್ರಾಮೀಣ ಮಟ್ಟದ ವರೆಗೂ ವಿಸ್ತರಿಸಲಾಗಿದೆ. ಈ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕೆ ಬರುತ್ತಿದೆ ಎಂದು ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡುತ್ತಾರೆ.

ಶೇ.0.47ಕ್ಕೆ ಇಳಿಕೆ:

ಅಂಕಿ ಸಂಖ್ಯೆ ಪ್ರಕಾರ ಕಳೆದ ಐದು ವರ್ಷಗಳ ಹಿಂದೆ 2017-18ರಲ್ಲಿ ಶೇ.1.12 ರಷ್ಟಿದ್ದ ರೋಗವು 2023ರ ಇಲ್ಲಿಯವರೆಗೆ ಶೇ.0.47ಕ್ಕೆ ಇಳಿಕೆಯಾಗಿರುವುದು ಸಮಾಧಾನಕರ ಸಂಗತಿ. 2022-23ರಲ್ಲಿ ಲೈಂಗಿಕ ಚಿಕಿತ್ಸಾ ಕೇಂದ್ರದಲ್ಲಿ 6625 ಸೋಂಕಿತರು ಚಿಕಿತ್ಸೆ ಪಡೆದಿದ್ದರೆ, 2023-24ರ ಇಲ್ಲಿಯವರೆಗೆ 2465 ಸೋಂಕಿತರು ಚಿಕಿತ್ಸೆ ಪಡೆದಿದ್ದಾರೆ.

ರೋಗದ ಮೂಲಕ್ಕೆ ಕೈ ಹಾಕುವ ಮೂಲಕ ಸೋಂಕಿತರ ಪ್ರಮಾಣ ಕಡಿಮೆ ಮಾಡಲು ಪ್ರಯತ್ನ ಮಾಡಲಾಯಿತು. ಅನೈತಿಕ ಲೈಂಗಿಕ ಕ್ರಿಯೆಯಿಂದಾಗ ಬರುವ ಈ ರೋಗವನ್ನು ಬಹುವಾಗಿ ಜಾಗೃತಿ ಹಾಗೂ ಅರಿವಿನ ಮೂಲಕ ನಿಯಂತ್ರಿಸಲಾಗುತ್ತಿದೆ. ಜಾನಪದ ಕಲಾ ತಂಡಗಳ ಮೂಲಕ ಜನರಿಗೆ ಅರಿವು ಮೂಡಿಸುವುದು, ದಿನಾಚರಣೆ ನಿಮಿತ್ತ ಜಾಥಾ ಹಾಗೂ ಅರಿವು ಕಾರ್ಯಕ್ರಮ, ಕರಪತ್ರ, ಪೋಸ್ಟರ, ಬ್ಯಾನರ್‌, ಗೋಡೆ ಬರಹ, ಜಾಹಿರಾತು ಮೂಲಕ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಬಹುತೇಕ ಆಸ್ಪತ್ರೆಯ ಸಂಪರ್ಕ ಬಂದವರಿಗೆಲ್ಲ ರಕ್ತ ತಪಾಸಣೆ ಮೂಲಕ ರೋಗ ಪತ್ತೆ ಹಚ್ಚಿ ಚಿಕಿತ್ಸೆ ಕೊಡುವ ಪ್ರಯತ್ನ ಮಾಡಲಾಗಿದ್ದು ನಿಯಂತ್ರಣದ ಒಂದು ಭಾಗ.

ಏನೇನು ಸೌಲಭ್ಯಗಳು:

ಈ ಮೊದಲು ಏಡ್ಸ್‌ ರೋಗಿ ಎಂದರೆ ಜನರು ಕೀಳಾಗಿ ನೋಡುತ್ತಿದ್ದರು. ಹೀಗಾಗಿ ರೋಗಿಗಳು ಮಾನಸಿಕ ಖಿನ್ನರಾಗಿಯೇ ಮೃತರಾಗುತ್ತಿದ್ದರು. ಈ ಕುರಿತು ತಿಳಿವಳಿಕೆ ಮೂಡಿಸಿದ್ದು ಹಾಗೂ ಆಪ್ತ ಸಮಾಲೋಚನೆ ಮೂಲಕ ಧೈರ್ಯ ತುಂಬುವ ಕೆಲಸ ಮಾಡಲಾಗಿದೆ. ಧಾರವಾಡ ಜಿಲ್ಲೆಯಲ್ಲಿ 12 ಸಮಗ್ರ ಆಪ್ತಸಮಾಲೋಚನಾ ಮತ್ತು ಪರೀಕ್ಷಾ ಕೇಂದ್ರಗಳಿವೆ. ಎರಡು ಪೂರ್ಣ ಪ್ರಮಾಣದ ಎಆರ್‌ಟಿ ಕೇಂದ್ರಗಳಿದ್ದು ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಲೈಂಗಿಕ ಸಂಪರ್ಕದ ರೋಗಗಳ ಚಿಕಿತ್ಸಾ ಕೇಂದ್ರಗಳು ಕೆಲಸ ಮಾಡುತ್ತಿವೆ. ಹುಬ್ಬಳ್ಳಿಯ ಕಿಮ್ಸ್, ಧಾರವಾಡ ಜಿಲ್ಲಾಸ್ಪತ್ರೆ, ನವಲಗುಂದ, ಕಲಘಟಗಿ, ಕುಂದಗೋಳ ತಾಲೂಕಾಸ್ಪತ್ರೆಗಳಲ್ಲಿ ಔಷದೋಪಚಾರ ನಡೆಯುತ್ತಿದೆ. ಜತೆಗೆ ರೋಗಿಗಳಿಗೆ ಮಾನಸಿಕ ಮಾತ್ರವಲ್ಲದೇ ಆರ್ಥಿಕವಾಗಿ ಸದೃಢರಾಗಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾಹಿತಿ ನೀಡಿದರು.

ಅಂತ್ಯೋದಯ ಕಾರ್ಡ್‌ ನೀಡಲಾಗಿದೆ. ರಾಜೀವ ಗಾಂಧಿ ಗ್ರಾಮೀಣ ವಸತಿ ಯೋಜನೆ ಅಡಿ 476 ಜನರ ಆಯ್ಕೆ ಮಾಡಲಾಗಿದೆ. ಆಧಾರ ಕಾರ್ಡ್‌, ಬ್ಯಾಂಕ್ ಖಾತೆ, ರೈಲು ಪ್ರಮಾಣದ ಸೌಲಭ್ಯ ಒದಗಿಸಲಿದೆ. ಶಿಕ್ಷಣ ಹಾಗೂ ವಸತಿ ನಿಲಯ ಸೌಲಭ್ಯ ಹಾಗೂ ರೋಗಿಗಳಿಗೆ ಕೌಶಲ್ಯ ತರಬೇತಿ ಸಹ ನೀಡಲಾಗುತ್ತಿದೆ. ಏಡ್ಸ್‌ ದಿನಾಚರಣೆ ಅಂಗವಾಗಿ ಡಿ. 1ರಂದು ಆರೋಗ್ಯ ಇಲಾಖೆಯಿಂದ ಧಾರವಾಡದಲ್ಲಿ ಜಾಗೃತಿ ಜಾಥಾ ಸಹ ಹಮ್ಮಿಕೊಳ್ಳಲಾಗಿದೆ ಎಂದರು.

ಬಾಕ್ಸ್..

ವರ್ಷ ಪರೀಕ್ಷಿಸಿದ್ದು ರೋಗ ಕಂಡಿದ್ದು ಶೇ.

2017-18 59219 664 1.12

2018-19 65903 666 1.01

2019-20 76474 580 0.75

2020-21 15203 335 0.98

2021-22 59757 405 0.67

2022-23 79096 412 0.52

2023- 58397 276 0.47