ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು ಪಟ್ಟಣದ ಜನವಸತಿ ಸ್ಥಳದಲ್ಲಿರುವ ಎಲ್ಲಾ ಕೋಳಿ ಅಂಗಡಿಗಳನ್ನು ಜನವಸತಿ ಇಲ್ಲದ ಸ್ಥಳದಲ್ಲಿ ಒಂದೇ ಕಡೆ ಇರುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಪುರಸಭಾ ಅಧ್ಯಕ್ಷ ಎ.ಆರ್.ಅಶೋಕ್ ತಿಳಿಸಿದರು.ಪಟ್ಟಣದ ಹೊಳೆಬೀದಿಯಲ್ಲಿ ಕೋಳಿ ಅಂಗಡಿಗಳ ಸಂಖ್ಯೆ ಮಿತಿ ಮೀರುತ್ತಿದ್ದು ವಾಸ ಮಾಡಲು ತೊಂದರೆಯಾಗುತ್ತಿದೆ, ಕೋಳಿ ಅಂಗಡಿಗಳ ತೆರವುಗೊಳಿಸಬೇಕೆಂದು ನಿವಾಸಿಗಳು ನೀಡಿದ ಮನವಿ ಪತ್ರ ಸ್ವೀಕರಿಸಿ ಮಾತನಾಡಿ, ಈಗ ಇರುವ ಅಂಗಡಿಗಳ ಮಾಲೀಕರಿಗೆ ಶುಚಿತ್ವ ಕಾಪಾಡುವಂತೆ ಸೂಚಿಸಲಾಗುವುದು, ಇನ್ನುಮುಂದೆ ಯಾವುದೇ ಅಂಗಡಿಗೆ ಪರವಾನಗಿ ನೀಡುವುದಿಲ್ಲ, ಯಗಚಿ ಸೇತುವೆ ಅಕ್ಕಪಕ್ಕದಲ್ಲಿ ಪುರಸಭೆಯ ಸ್ಥಳ ಇರುವ ಬಗ್ಗೆ ಮಾಹಿತಿ ಇದ್ದು, ಅಲ್ಲಿ ಮಳಿಗೆಗಳ ನಿರ್ಮಿಸಬಹುದೆ ಅಥವಾ ಬಾಡಿಗೆ ಪಡೆದು ನೀಡಬಹುದೆ ಎಂಬುದನ್ನು ಸದಸ್ಯರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಒಟ್ಟಾರೆ ಎಲ್ಲಾ ಕೋಳಿ ಅಂಗಡಿಗಳನ್ನು ಒಂದು ಕಡೆಗೆ ಸ್ಥಳಾಂತರಿಸಲಾಗುವುದು ಎಂದರು.೬ನೇ ವಾರ್ಡಿನ ನಿವಾಸಿಗಳ ಮನವಿ ಆಧಾರದ ಮೇಲೆ ಅಂಬೇಡ್ಕರ್ ಭವನದ ಹತ್ತಿರ ಕೋಳಿ ಅಂಗಡಿ ಇತ್ತೆಂಬ ಕಾರಣಕ್ಕೆ ಅಲ್ಲಿದ್ದ ೨೦ ಕೋಳಿ ಅಂಗಡಿಗಳ ತೆಗೆಸಲಾಯಿತು. ನಂತರ ಹೊಳೇಬೀದಿಯಲ್ಲಿ ಖಾಸಗಿ ವ್ಯಕ್ತಿಗಳ ಸ್ಥಳದಲ್ಲಿ ಕೋಳಿ ಅಂಗಡಿ ಆರಂಭಕ್ಕೆ ಅನುಮತಿ ನೀಡಲಾಗುತ್ತಿದ್ದು , ಈಗಾಗಲೇ ಹಲವು ಕೋಳಿ ಅಂಗಡಿಗಳು ತಲೆ ಎತ್ತಿವೆ. ಇದರಿಂದ ಗಲೀಜು ಹೆಚ್ಚಾಗಿ ಸಾಂಕ್ರಾಮಿಕ ರೋಗಗಳಿಗೆ ಅವಕಾಶವಾಗಿದೆ. ಕಿರಿದಾದ ರಸ್ತೆಯಲ್ಲಿ ಇರುವ ನಾಲ್ಕು ಶಾಲಾ ಕಾಲೇಜು ಮಕ್ಕಳು ಇದೆ ರಸ್ತೆಯಲ್ಲಿ ಓಡಾಡಬೇಕಿದೆ, ಇದು ಜನವಸತಿ ಸ್ಥಳವಾಗಿದೆ. ಆದ್ದರಿಂದ ಕೋಳಿ ಅಂಗಡಿಗಳನ್ನು ತೆಗೆಸಬೇಕೆಂದು ಒತ್ತಾಯಿಸಿದರು.ಈ ಸಂದರ್ಭ ಮುಖ್ಯಾಧಿಕಾರಿ ಸುಜಯಕುಮಾರ್, ನಿವಾಸಿಗಳಾದ ಮೀನಾಕ್ಷಿ, ರಂಗಮ್ಮ, ಸುಬ್ರಹ್ಮಣ್ಯ, ಭವ್ಯ, ಸಂಧ್ಯಾ, ನಟರಾಜ್, ದೀಪು ಕೆಂಪದೇವಮ್ಮ, ರತ್ನಮ್ಮ, ಗುರುಬಸವೇಗೌಡ, ಮುಕ್ತಾರ್ ಅಹ್ಮದ್, ಯೋಗೇಶ್, ಹರೀಶ್ ಇತರರು ಇದ್ದರು.