ವಿಜ್ಞಾನವಿಲ್ಲದ ಸಮಾಜ ನಿಷ್ಪ್ರಯೋಜಕ: ದಳವಿ

| Published : May 25 2025, 01:08 AM IST / Updated: May 25 2025, 01:09 AM IST

ಸಾರಾಂಶ

ವಿಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ತಿಳಿವಳಿಕೆಯಿಲ್ಲದ ಸಮಾಜ ಅಭಿವೃದ್ಧಿಯನ್ನು ಹೊಂದಲಾರದು. ವಿಜ್ಞಾನವಿಲ್ಲದ ಸಮಾಜ ನಿಷ್ಪ್ರಯೋಜಕ, ವಿಜ್ಞಾನದ ಅನ್ವಯದಿಂದ ಅಭಿವೃದ್ಧಿ ಹೊಂದಿದ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಪುಣೆಯ ಭಾರತ ಸರ್ಕಾರದ ಸಸ್ಯಗಳ ಸರ್ವೇಕ್ಷಣಾಲಯದ ವಿಜ್ಞಾನಿ ಡಾ. ಜಗದೀಶ ವಿಷ್ಣು ದಳವಿ ಹೇಳಿದರು.

ಗದಗ: ವಿಜ್ಞಾನ ಹಾಗೂ ಕೃತಕ ಬುದ್ಧಿಮತ್ತೆಯ ಬಳಕೆ ಮತ್ತು ತಿಳಿವಳಿಕೆಯಿಲ್ಲದ ಸಮಾಜ ಅಭಿವೃದ್ಧಿಯನ್ನು ಹೊಂದಲಾರದು. ವಿಜ್ಞಾನವಿಲ್ಲದ ಸಮಾಜ ನಿಷ್ಪ್ರಯೋಜಕ, ವಿಜ್ಞಾನದ ಅನ್ವಯದಿಂದ ಅಭಿವೃದ್ಧಿ ಹೊಂದಿದ ಸಮಾಜವನ್ನು ನಿರ್ಮಿಸಲು ಸಾಧ್ಯವಾಗುತ್ತದೆ ಎಂದು ಪುಣೆಯ ಭಾರತ ಸರ್ಕಾರದ ಸಸ್ಯಗಳ ಸರ್ವೇಕ್ಷಣಾಲಯದ ವಿಜ್ಞಾನಿ ಡಾ. ಜಗದೀಶ ವಿಷ್ಣು ದಳವಿ ಹೇಳಿದರು.

ನಗರದ ಕೆ.ಎಲ್.ಇ ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ಸಸ್ಯಶಾಸ್ತ್ರ ವಿಭಾಗವು ಔಷಧೀಯ ಸಸ್ಯಗಳ ಸಾಂಪ್ರದಾಯಿಕ ಬಳಕೆಯ ಇತ್ತೀಚಿನ ಪ್ರವೃತ್ತಿಗಳು ಎಂಬ ವಿಷಯದ ಮೇಲೆ ಆಯೋಜಿಸಿದ್ದ ಒಂದು ದಿನದ ರಾಜ್ಯ ಮಟ್ಟದ ವಿದ್ಯಾರ್ಥಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

ಸಸ್ಯಗಳಿಂದ ಸಿದ್ಧಪಡಿಸಿದ ಔಷಧಿಗಳನ್ನು ಬಳಸುವುದರಿಂದ ಯಾವ ಅಡ್ಡ ಪರಿಣಾಮಗಳು ಉಂಟಾಗದೆ ಇರುವ ಕಾರಣಗಳಿಂದ ಇತ್ತೀಚಿನ ದಿನಮಾನಗಳಲ್ಲಿ ಪ್ರಪಂಚದ್ಯಂತ ಸಾಂಪ್ರದಾಯಿಕ ಸಸ್ಯಗಳ ಔಷಧಿ ಮಹತ್ವ ಪಡೆದಿದೆ. ಈ ಹಿನ್ನೆಲೆಯಲ್ಲಿ ಸರಕಾರ ಜನರಲ್ಲಿ ಜಾಗೃತಿ ಉಂಟು ಮಾಡಲು ಮೇಳಗಳನ್ನು ಆಯೋಜಿಸುತ್ತಿದೆ. ಗದಗ ಜಿಲ್ಲೆಯೊಂದರಲ್ಲಿ ಸುಮಾರು 850ಕ್ಕೂ ಹೆಚ್ಚು ಸಸ್ಯ ವರ್ಗಗಳನ್ನು ಗುರುತಿಸಲಾಗಿದೆ. ಹೀಗಾಗಿ ಇಂತ ವಿಚಾರ ಸಂಕಿರಣಗಳನ್ನು ಆಯೋಜಿಸುವದರಿಂದ ವಿದ್ಯಾಥಿಗಳಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪ್ರಾ. ಪಿ.ಜಿ. ಪಾಟೀಲ ಮಾತನಾಡಿ, ಸಸ್ಯಗಳ ಜೀವನ ಕ್ರಮ ಹಾಗೂ ಅವುಗಳ ಉಪಯೋಗದ ಮಹತ್ವ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಔಷಧೀಯ ಸಸ್ಯಗಳ ಸಂರಕ್ಷಣೆ, ಸಂಶೋಧನೆ ಬಹಳ ಮುಖ್ಯವಾಗಿದೆ ಎಂದರು.ವಿಚಾರ ಸಂಕಿರಣದ ಸಂಯೋಜಕ ಪ್ರೊ. ಎಚ್.ಎಸ್. ಕೌಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಿ.ಜಿ.ಎಂ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಕುಮಾರ, ಹುಬ್ಬಳ್ಳಿಯ ಪಿ.ಸಿ. ಜಾಬಿನ್ ಮಹಾವಿದ್ಯಾಲಯದ ಡಾ. ಎಲ್.ಸಿ. ಕುಲಕರ್ಣಿ, ಬಾಗಲಕೋಟೆಯ ಬಸವೇಶ್ವರ ಮಹಾವಿದ್ಯಾಲಯದ ಸಸ್ಯಶಾಸ್ತ್ರ ಸ್ನಾತಕೋತ್ತರ ಕೇಂದ್ರದ ಸಂಚಾಲಕ ಡಾ. ಅವಿತಾ.ಎಂ., ಪ್ರೊ. ಪಲ್ಲೇದ, ಡಾ. ಈ.ಬಿ.ಸೇಡಂಕರ್‌ ಅವರು, ಸಂಶೋಧನಾ ಪ್ರಬಂಧಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಒಟ್ಟು 36 ವಿದ್ಯಾರ್ಥಿಗಳು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ರಾಜ್ಯದ ವಿವಿಧ ಮಹಾವಿದ್ಯಾಲಯಗಳಿಂದ ಒಟ್ಟು 118 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಗದಗ ಜೆ.ಟಿ.ಕಾಲೇಜಿನ ಶಿವಾನಿ ಹಿರೇಗೌಡರ, ಹಾವೇರಿಯ ಜಿ.ಎಚ್.ಕಾಲೇಜಿನ ಐಶ್ವರ್ಯ ಜಿ.ಸಿ., ಬೆಳಗಾವಿಯ ಆರ್‌.ಎಲ್.ಎಸ್ ಕಾಲೇಜಿನ ತೇಜಸ್ವಿನಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಇವರುಗಳಿಗೆ ಸಮಾರೋಪ ಸಮಾರಂಭದಲ್ಲಿ ಪ್ರಾಚಾರ್ಯರು ಹಾಗೂ ಗಣ್ಯಮಾನ್ಯರಿಂದ ಪ್ರಶಸ್ತಿ ಪತ್ರ, ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಈ ವೇಳೆ ಐ.ಕ್ಯೂ.ಎ.ಸಿ ಸಂಚಾಲಕ ಡಾ. ಜಿ.ಕೆ. ರಮೇಶ, ಸಸ್ಯಶಾಸ್ತ್ರ ವಿಭಾಗದ ಡಾ. ಕೃಷ್ಣ ವಡ್ಡರ, ರಮ್ಯಾ ಕಲ್ಲೋಳಿಕರ ಸೇರಿದಂತೆ ಮಹಾವಿದ್ಯಾಲಯದ ಬೋಧಕ ವರ್ಗ, ವಿದ್ಯಾರ್ಥಿಗಳು ಇದ್ದರು. ಸಾನಿಯಾ ದೊಡ್ಡಮನಿ ಸ್ವಾಗತಿಸಿದರು. ಸಿಂಚನಾ ಸೆಟವಾಜಿ ಪ್ರಾರ್ಥಿಸಿದರು. ಪವಿತ್ರ ರಗಟಿ ಹಾಗೂ ಶ್ರೇಯಾ ಕಾಟ್ವಾ ನಿರೂಪಿಸಿದರು. ಬಿ.ಬಿ. ಹಜೀರಾ ಪರಿಚಯಿಸಿದರು. ದೀಕ್ಷಾ ತಳಕಲ್ಲಮಠದ ವಂದಿಸಿದರು.