ಸಾರಾಂಶ
ಗಂಗಾವತಿ:
ತಾಲೂಕಿನ ಎಚ್.ಜಿ. ರಾಮುಲು ನಗರದ ಬಳಿಯ ಕತ್ತೆಕಲ್ಲು ಗುಡ್ಡದಲ್ಲಿ ಶಿಲಾಯುಗದ ಗವಿಚಿತ್ರ ಮತ್ತು ಒಂದು ಶಿಲಾಶಾಸನ ಪತ್ತೆಯಾಗಿವೆ.ಇತಿಹಾಸ ಸಂಶೋಧಕ ಡಾ. ಶರಣಬಸಪ್ಪ ಕೋಲ್ಕಾರ್ ನೇತೃತ್ವದಲ್ಲಿ ಮಂಜುನಾಥ ದೊಡ್ಡಮನಿ, ಚಂದ್ರಶೇಖರ್ ಕುಂಬಾರ ಹಾಗೂ ನಾಗರಾಜ ಶಿವಪುರ ತಂಡ ಶೋಧಿಸಿದೆ.
ಕತ್ತೆ ಗುಡ್ಡದ ಬುಡದಲ್ಲಿ ದಕ್ಷಿಣಾಭಿಮುಖವಾಗಿರುವ ಒಂದು ಕಲ್ಲಾಸರೆಯಲ್ಲಿ 17ನೇ ಶತಮಾನದ ಕನ್ನಡ ಶಾಸನವಿದೆ ಮತ್ತು ಬೆಟ್ಟದ ತುದಿಯಲ್ಲಿರುವ ಮತ್ತೊಂದು ಕಲ್ಲಾಸರೆಯಲ್ಲಿ ಆದಿ ಮಾನವರು ಬಿಡಿಸಿರುವ ವರ್ಣಚಿತ್ರಗಳಿವೆ. ಶಾಸನವು 5 ಸಾಲಿನಲ್ಲಿದ್ದು ಸೂರ್ಯ, ಚಂದ್ರ, ದ್ವಿ ನಾಮ ಮತ್ತು ಬಿಲ್ಲು ಬಾಣದ ಚಿತ್ರಗಳ ಜತೆ ಬರೆಯಲ್ಪಟ್ಟಿದೆ. ಶಾಸನವು ರಾಮನಾಥ ದೇವರ ಆರಾಧನೆಗಾಗಿ ಚಿನ್ನಾಯಕನು 22 ಖಂಡುಗ ಹೊಲವನ್ನು ದಾನವಾಗಿ ನೀಡಿದ ಬಗ್ಗೆ ತಿಳಿಸುತ್ತದೆ. ಶಾಸನ ಜಯತು ಮಸ್ತು ಎಂದು ಕೊನೆಗೊಳ್ಳುತ್ತದೆ. ಶಾಸನದಲ್ಲಿ ಹಲವು ಬರಹ ದೋಷಗಳಿವೆ. ಶಾಸನೊಕ್ತ ರಾಮನಾಥ ದೇವರು ಮತ್ತು ಚಿನ್ನ ನಾಯಕರು ಯಾರು ಎನ್ನುವುದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುವುದೆಂದು ಡಾ. ಕೋಲ್ಕಾರ್ ತಿಳಿಸಿದ್ದಾರೆ..ಬೆಟ್ಟದ ತುದಿಯಲ್ಲಿರುವ ವಿಶಾಲವಾದ ಗವಿಯು ಆದಿಮಾನವನ ತಾತ್ಕಾಲಿಕ ವಾಸದ ತಾಣವಾಗಿತ್ತು, ಅದರ ಚಾವಣಿಯಲ್ಲಿ ಕೆಂಪುವರ್ಣದಲ್ಲಿ ಹಲವಾರು ಚಿತ್ರಗಳನ್ನು ಬಿಡಿಸಲಾಗಿದೆ. ಪರಸ್ಪರ ಕೈ ಹಿಡಿದು ನಿಂತಿರುವ ದಂಪತಿ ಚಿತ್ರ, ಹಲವು ಸಂಕೇತಗಳ ಚಿತ್ರ, ಮತ್ತೊಂದು ಕಡೆ ನಿಂತ ಮನುಷ್ಯನ ಚಿತ್ರಗಳಿವೆ. ಚಿತ್ರಗಳ ಶೈಲಿಯಿಂದ 3000 ವರ್ಷಗಳ ಹಿಂದಿನ ಶಿಲಾ ತಾಮ್ರಯುಗಕ್ಕೆ ಸೇರುತ್ತವೆ. ಈ ಕಲ್ಲಾಸರೆಗೆ ಹೊಂದಿಕೊಂಡಿರುವ ಸೀಳು ಬಂಡೆಯ ಮೇಲೆ ಸಾಲಾಗಿ ಸತತ ಕುಟ್ಟಿ ಮೂಡಿಸಿರುವ ಕಲ್ಲುಗುಳಿಗಳು ಕಂಡುಬರುತ್ತವೆ . ಇವುಗಳನ್ನು ಕಲ್ಲಿನ ತುಂಡಿನಿಂದ ಬಾರಿಸಿದರೆ ಒಂದು ರೀತಿಯ ನಾದ ಹೊರಡುತ್ತದೆ. ಇದರಿಂದ ಈ ಗವಿಯು ಶಿಲಾ ತಾಮ್ರಯುಗದ ಪಶುಪಾಲಕ ಜನರು ತಮ್ಮ ದನಗಳನ್ನು ಗುಡ್ಡದ ಎದುರಿನ ಹುಲ್ಲುಗಾವಲಿನಲ್ಲಿ ಮೇಯಲು ಬಿಟ್ಟು ತಾವು ಗವಿಯ ಮೂಲಕ ವೀಕ್ಷಿಸುತ್ತ ತಮ್ಮ ಮನೋರಂಜನೆಗಾಗಿ ಕಲ್ಲುಗಳಿಂದ ನಾದಗಳನ್ನು ಹೊರಡಿಸುವ, ಚಿತ್ರಗಳನ್ನು ಬಿಡಿಸುವುದನ್ನು ಮಾಡುತ್ತಿದ್ದರೆಂದು ಹೇಳಲಾಗುತ್ತಿದೆ.
ಈಗಾಗಲೇ ಹಿರೇಬೆಣಕಲ್ ಸಹಿತ ಏಳು ಗುಡ್ಡಗಳಲ್ಲಿ ನೂರಾರು ಗವಿ ಚಿತ್ರಗಳು ಕಂಡು ಬಂದಿದ್ದು ಅವುಗಳಿಂದ ಕರ್ನಾಟಕದ ಆದಿಮಾನವನ ಜೀವನ ಸಂಸ್ಕೃತಿಯನ್ನು ತಿಳಿಯಲು ಸಾಧ್ಯವಾಗಿದೆ. ಅದಕ್ಕೆ ಪೂರಕವಾಗಿ ಈ ಚಿತ್ರಗಳು ಕೂಡ ಸಹಾಯಕವಾಗಿದೆ ಎಂದು ಡಾ. ಕೋಲ್ಕಾರ್ ತಿಳಿಸಿರುವರು.