ಕೆಜಿಎಫ್‌ ನಗರದಲ್ಲಿ ಸಮಸ್ಯೆಗಳ ಸರಮಾಲೆ

| Published : Feb 21 2024, 02:02 AM IST

ಸಾರಾಂಶ

ಕೆಜಿಎಫ್‌ ನಗರದಲ್ಲಿ ಸಮಸ್ಯೆಗಳ ಸರಮಾಲೆ

ಕನ್ನಡಪ್ರಭ ವಾರ್ತೆ ಕೆಜಿಎಫ್‌

ನಗರಸಭೆಯ ಮೊದಲನೇ ಅವಧಿ ಮುಗಿದು ಒಂದು ವರ್ಷ ಕಳೆದರೂ ಇದುವರೆಗೂ ಎರಡನೇ ಅವಧಿಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯ ಮೀಸಲು ದಿನಾಂಕವನ್ನು ಸರ್ಕಾರ ಪ್ರಕಟಿಸದೆ ಚುನಾಯಿತ ಜನಪ್ರತಿನಿಧಿಗಳನ್ನು ಕತ್ತಲಲ್ಲಿ ಇಟ್ಟು ಅಧಿಕಾರಿಗಳ ವರ್ಗ ಆಡಳಿತ ನಡೆಸುತ್ತಿದ್ದು, ನಗರದ ಜ್ವಲಂತ ಸಮಸ್ಯೆಗಳಿಗೆ ಪರಿಹಾರವಿಲ್ಲದೆ ನಾಗರಿಕರು ಅತಂತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದಾರೆ.ಒಂದು ವರ್ಷದಿಂದ ಸಭೆಯನ್ನೇ ನಡೆಸಿಲ್ಲ:

ಜನರಿಂದ ಅಯ್ಕೆಯಾಗಿರುವ ಸದಸ್ಯರ ಸಭೆಯನ್ನು ಕರೆದು ಒಂದು ವರ್ಷವಾಗಿದ್ದು, ನಗರಸಭೆಯ ಆಡಳಿತಾಧಿಕರಿಯಾಗಿರುವ ಜಿಲ್ಲಾಧಿಕಾರಿ ನಗರಸಭೆ ಸದಸ್ಯರ ಸಭೆ ಕರೆದು ನಗರದ ಜಲ್ವಂತ ಸಮಸ್ಯೆಗಳ ಬಗ್ಗೆ ಅಹವಾಲು ಕೇಳಬಹುದಿತ್ತು? ಆದರೆ ಜಿಲ್ಲಾಧಿಕಾರಿ ಇದುವರೆಗೂ ಯಾವುದೇ ಸಭೆ ಕರೆಯದೇ ಜನರಿಂದ ಆಯ್ಕೆಯಾಗಿರುವ ಸದಸ್ಯರನ್ನು ಕತ್ತಲಲ್ಲಿ ಇಟ್ಟು ಆಡಳಿತ ನಡೆಸುವುದು ಎಷ್ಟು ಸರಿ ಎಂದು ಹಿರಿಯ ನಾಗರಿಕ ನಾಗರಾಜ್ ಜಿಲ್ಲಾಧಿಕಾರಿ ಅವರನ್ನು ಪ್ರಶ್ನಿಸಿದ್ದಾರೆ. ಅಧಿಕಾರಿಗಳೇ ಸಮಸ್ಯೆ ತಿಳಿಯುವುದು ಹೇಗೆ:

ಜನರಿಂದ ಆಯ್ಕೆಯಾಗಿರುವ ಸದಸ್ಯರ ಸಭೆ ಕರೆದು ಆಯಾ ವಾರ್ಡ್‌ನ ಸಮಸ್ಯೆಗಳ ಬಗ್ಗೆ ತಿಳಿಯಬೇಕು, ಆದರೆ ಒಂದು ವರ್ಷದಿಂದ ಸದಸ್ಯರ ಸಭೆ ಕರೆಯದೇ ನಗರದ ಸಾರ್ವಜನಿಕರ ಸಮಸ್ಯೆಗಳನ್ನು ತಿಳಿದುಕೊಳ್ಳದೆ ಅಧಿಕಾರಿಗಳು ಎಂತಹ ಆಡಳಿತ ನಡೆಸಲು ಸಾಧ್ಯ, ಸಾರ್ವಜನಿಕರಿಂದ ಪ್ರತಿ ವರ್ಷ ನಗರಸಭೆ ತೆರಿಗೆ ವಸೂಲಿ ಮಾಡುತ್ತಿರುವುದು ಸರಿಯಷ್ಟೇ, ವಸೂಲಿಯಾಗುವ ತೆರೆಗೆಯಿಂದ ನಗರದ ಜನತೆಗೆ ಮೂಲಭೂತ ಸೌಕರ್ಯಗಳನ್ನು ನೀಡಲಾಗಿದೆಯೇ ಎಂದರೆ ಎಲ್ಲವ ಶೂನ್ಯವಾಗಿದೆ ಎಂದು ೧೯ನೇ ವಾರ್ಡ್‌ನ ನಗರಸಭೆ ಸದಸ್ಯೆ ಜೀವನತಿಯ ರಾಜೇಶ್ ತಮ್ಮ ನೋವನ್ನು ತೋಡಿಕೊಂಡರು.

ನಗರದಲ್ಲಿ ಸಮಸ್ಯೆಗಳ ಸರಮಾಲೆ:

ಬಹುಮುಖ್ಯವಾಗಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ, ಕಳೆದ ೧೫ ವರ್ಷದಿಂದ ಸಾರ್ವಜನಿಕ ಆಸ್ಪತ್ರೆಯ ಲೆಕ್ಕಾಚಾರದಂತೆ ಪ್ರತಿ ತಿಂಗಳು ೬೦೦ ಜನರಿಗೆ ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ, ನಗರದಲ್ಲಿ ಅಂದಾಜು 6000 ನಾಯಿಗಳು ಇದ್ದು, ಪ್ರತಿ ದಿನ ಸಾರ್ವಜನಿಕರು ರಸ್ತೆಗಳಲ್ಲಿ ಓಡಾಡಲು ಕಿರಿಕಿರಿ ಅನುಭವಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳನ್ನು ಪ್ರಶ್ನೆ ಮಾಡಿದರೆ ಎಬಿಸಿ ಮಾಡಿಸಲು ಟೆಂಡರ್ ಕರೆಯಲಾಗಿದೆ ಎಂಬ ಸಿದ್ಧ ಉತ್ತರ ಸಿಗುತ್ತದೆ, ಟೆಂಡರ್ ಕರೆದು ನಾಯಿಗಳಿಗೆ ಎಬಿಸಿ ಮಾಡಿಸಲು ೧೫ ವರ್ಷ ಬೇಕೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ಕುಡಿವ ನೀರಿನ ಸಮಸ್ಯೆ:

ಕೆಜಿಎಫ್ ನಗರದ ೩೫ ವಾರ್ಡ್‌ಗಳಲ್ಲಿ ಜನರು ಕುಡಿಯುವ ಸಿಹಿ ನೀರಿಗೆ ಖಾಸಗಿ ಟ್ಯಾಂಕರ್ ಮಾಲೀಕರ ಒಂದು ಬಿಂದಿಗೆ 5 ರು. ಹಣ ಕೊಟ್ಟು ನೀರನ್ನು ಖರೀದಿಸಬೇಕು, ಆರ್.ಓ ಪ್ಲಾಂಟುಗಳು ಇದ್ದರೂ ಬಹುತೇಕ ಆರ್.ಓ ಪ್ಲಾಟ್‌ಗಳು ಕೆಟ್ಟು ನಿಂತಿವೆ, ಬಹುತೇಕ ಒಂದು ಕ್ಯಾನ್ ನೀರಿಗೆ ೧೫ ರು. ಕೊಟ್ಟು ಜನರು ಖರೀದಿ ಮಾಡುತ್ತಿದ್ದಾರುವುದಾಗಿ ೧೩ನೇ ವಾರ್ಡ್‌ನ ಸದಸ್ಯೆ ಶಾಂತಿ ಉದಯಕುಮಾರ್ ತಿಳಿಸಿದರು.

ನೀರಿನ ಪೂರೈಕೆ ದೇವರ ಬಲ್ಲ:

ಅಮೃತ್ ಸಿಟಿ ಯೋಜನೆಯಡಿ ೭೦ ಕೋಟಿ ರು. ಗಳ ವೆಚ್ಚದಲ್ಲಿ ಬೇತಮಂಗಲದ ಪಾಲರ್ ಕೆರೆಯಿಂದ ಕೆಜಿಎಫ್ ನಗರಕ್ಕೆ ೭ ಕಿ.ಮೀ ಉದ್ದದ ಒಂದು ಮೀ. ಪೈಪ್ ಲೈನ್ ಕಾಮಗಾರಿ, ೩ ಓವರ್ ಹೆಡ್ ಟ್ಯಾಂಕ್‌ಗಳ ನಿರ್ಮಾಣ, ೨೫೦ ಹೆಚ್.ಪಿ ಮೋಟಾರ್ ಅಳವಡಿಕೆ, ೭೫ ಕಿ.ಮೀಟರ್ ಉದ್ದದ ಮನೆ ಮನೆ ನಲ್ಲಿ ಸಂಪರ್ಕ ಮೂಲಕ ಕುಡಿವ ನೀರಿನ ಕಾಮಗಾರಿ ಅರ್ದಕ್ಕೆ ನಿಂತು 3ವರ್ಷ ಕಳೆದಿದೆ, ಈ ಹಿಂದೆ ಬ್ರಿಟೀಷರು ವೈಜ್ಞಾನಿಕವಾಗಿ ಹಾಕಿದ್ದ ಪೈಪ್‌ಗಳನ್ನು ತೆಗೆದು ಜಲಮಂಡಳಿಯ ಅಧಿಕಾರಿಗಳು ಮಾರಾಟ ಮಾಡಿರುವುದೇ ದೊಡ್ಡ ಸಾಧನೆಯಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದರೂ ಅಧಿಕಾರಿಗಳನ್ನು ಪ್ರಶ್ನೆ ಮಾಡುವವರು ಯಾರು?

ಬೃಹತ್ ಗಾತ್ರದ ಪೈಪ್‌ಗಳು ಎಲ್ಲಿ ಹೋದವು:

ಬ್ರಿಟಿಷರ ಕಾಲದಲ್ಲಿ ಹಾಕಿದ್ದ ಕಬ್ಬಿಣದ ಪೈಪ್‌ಗಳನ್ನು ತೆಗೆದು ಪ್ಲಾಸ್ಟಿಕ್ ಪೈಪ್‌ಗಳನ್ನು ಅಳವಡಿಸಿದ್ದು ಕಬ್ಬಿಣದ ಪೈಪುಗಳು ಎಲ್ಲಿ ಹೋಗಿವೆ ಎಂದು ಜಲಮಂಡಳಿಯ ಅಧಿಕಾರಿಗಳು ಉತ್ತರ ನೀಡಬೇಕಿದೆ. ಕೆಜಿಎಫ್ ನಗರದ ಮನೆಗಳ ತ್ಯಾಜ್ಯದ ನೀರು ಸ್ವರ್ಣನಗರದ ಮೂಲಕ ಉರಿಗಾಂ ಪೇಟೆಯ ಕೆರೆಗೆ ಬಿಟ್ಟಿದ್ದಾರೆ, ಇದರಿಂದ ಕೆರೆಯ ನೀರು ಮಲೀನಗೊಂಡು ಸುತ್ತಲು ವಾಸ ಮಾಡುವ ನಾಗರೀಕರಿಗೆ ನರಕ ಕಾಣಿಸುತ್ತಿರುವುದಾಗಿ ಸ್ವರ್ಣ ಕುಪ್ಪಂನ ನಿವಾಸಿ ಪ್ರಸಾದ್ ತಿಳಿಸಿದ್ದಾರೆ.