ವಿದ್ಯಾರ್ಥಿಯ ಜೀವನ ತಪಸ್ಸು ಇದ್ದಂತೆ: ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು

| Published : Jun 02 2025, 11:49 PM IST

ವಿದ್ಯಾರ್ಥಿಯ ಜೀವನ ತಪಸ್ಸು ಇದ್ದಂತೆ: ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2747ನೇ ಶಿವಾನುಭವ ಕಾರ್ಯಕ್ರಮ ನಡೆಯಿತು. ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.

ಗದಗ: ವಿದ್ಯಾರ್ಥಿಗಳ, ಶ್ರಮ ಸಂಯಮ ಮತ್ತು ನಿಶ್ಚಲ ದಿಟ್ಟತೆಯೇ ಸಾಧನೆಯ ಯಶಸ್ಸು. ಅದುವೇ ತಂದೆ ತಾಯಿ, ಶಿಕ್ಷಕರಿಗೆ ಹೆಮ್ಮೆ ಸಂತೋಷ. ವಿದ್ಯಾರ್ಥಿ ಜೀವನ ತಪಸ್ಸು ಇದ್ದಂತೆ ಎಂದು ಡಾ. ತೋಂಟದ ಸಿದ್ಧರಾಮ ಸ್ವಾಮಿಗಳು ಹೇಳಿದರು.ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ ವತಿಯಿಂದ ನಡೆದ 2747ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಮಾತನಾಡಿದರು. ಬೆಳಗಿನ ಓದು, ರಾತ್ರಿ ತಯಾರಿ ನಿಮ್ಮ ಸಾಧನೆಯನ್ನು ಉತ್ತುಂಗಕ್ಕೇರಿಸುತ್ತದೆ. ಈ ಯಶಸ್ಸು ಶಿಕ್ಷಣ ಮಾರ್ಗದ ಒಂದು ಹೆಜ್ಜೆ ಅಷ್ಟೆ. ಮುಂದೆ ಹೋದಂತೆ ಹೆಚ್ಚಿನ ಅವಕಾಶಗಳು ಮತ್ತು ಗುರಿಗಳಿವೆ. ಈ ಸಾಧನೆಗಳು ಉಜ್ವಲವಾದ ಭವಿಷ್ಯಕ್ಕೆ ದಾರಿಯಾಗಿದೆ. ನಿಮ್ಮ ಭವಿಷ್ಯ ಬೆಳಕಿನಿಂದ ತುಂಬಿರಲಿ. ನೀವು ಉಜ್ವಲ ನಕ್ಷತ್ರಗಳಾಗಿರಿ ಎಂದರು.

ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ಎಚ್.ಬಿ. ರಡ್ಡೇರ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯ ಓದುವ ಬಗ್ಗೆ ಸಮರ್ಪಣಾ ಭಾವ ಮತ್ತು ಶಿಸ್ತು ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧಿಸಿದ ಉನ್ನತ ಫಲಿತಾಂಶ ಶಿಕ್ಷಣ ಇಲಾಖೆಗೆ ಸಾಧನೆಯ ಮುಕುಟವಾಗಿದೆ. ನಿಮ್ಮ ಮುಂಬರುವ ಶಿಕ್ಷಣದ ಆಯ್ಕೆ ನಿಮ್ಮ ಆಸಕ್ತಿಯ ಆಯ್ಕೆ ಆಗಿರಲಿ ಎಂದು ತಿಳಿಸಿದರು.ಜಿಲ್ಲಾ ಉಪನಿರ್ದೇಶಕ ಆರ್.ಎಸ್. ಬುರಡಿ ಮಾತನಾಡಿ, ಪರೀಕ್ಷೆಯಲ್ಲಿ ಪರಿಶ್ರಮ ಪಟ್ಟು ಓದಿ ಉತ್ತಮ ಅಂಕ ಪಡೆದಿದ್ದೀರಿ. ನಿಮ್ಮ ಫಲಿತಾಂಶ ನೈಜ ಫಲಿತಾಂಶ. ಪರಿಶ್ರಮಪಟ್ಟು ಓದಿ ಜಿಲ್ಲೆಯ ಕೀರ್ತಿಯನ್ನು ತಂದಿದ್ದೀರಿ. ಇದೇ ರೀತಿ ನಿಮ್ಮ ಸಾಧನೆ ಸಾಗಲಿ ಎಂದರು.

ಗುರುನಾಥ ಸುತಾರ ಹಾಗೂ ಅನಿರುದ್ಧ ಧನೇಶ ದೇಸಾಯಿ ಮತ್ತು ಶಿವಾನಂದ ಭಾವಿಕಟ್ಟಿ ವಚನ ಸಂಗೀತ ಸೇವೆ ನಡೆಸಿಕೊಟ್ಟರು. ತೋಂಟದಾರ್ಯ ಕೈಗಾರಿಕಾ ತರಬೇತಿ ಕೇಂದ್ರ ಮಂಡಲಗಿರಿಯ ಕಿರಿಯ ತರಬೇತಿ ಅಧಿಕಾರಿ ಭೋಜರಾಜ ಸೊಪ್ಪಿಮಠ ಅವರು ರಚಿಸಿದ ಎಲ್ಲ ನನ್ನವಳದೆ ಪುಸ್ತಕ ಲೋಕಾರ್ಪಣೆಯಾಯಿತು. ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ, ದ್ವಿತೀಯ, ತೃತೀಯ ಬಂದ 21 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು. ಧಾರ್ಮಿಕ ಗ್ರಂಥ ಪಠಣವನ್ನು ವಿಶ್ವಾಸ ಎಂ. ಮಳಗಾವಿಮಠ ಹಾಗೂ ವಚನ ಚಿಂತನವನ್ನು ಸ್ಫೂರ್ತಿ ಎಂ. ಮಳಗಾವಿಮಠ ನಡೆಸಿಕೊಟ್ಟರು. ದಾಸೋಹ ಸೇವೆಯನ್ನು ನಿವೃತ್ತ ಶಿಕ್ಷಕ ಲಿಂಗನಗೌಡ ಶಂಕರಗೌಡ ಬೆಳವಟಿಗಿ ವಹಿಸಿದ್ದರು.

ಪಪೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಮಸನಾಯಿಕ, ಶಿರಹಟ್ಟಿಯ ಸರ್ಕಾರಿ ಪಪೂ ಕಾಲೇಜಿನ ಪ್ರಾಚಾರ್ಯ ಎಂ.ಸಿ. ಗಿರಿತಮ್ಮಣ್ಣವರ, ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಬಾಲಚಂದ್ರ ಭರಮಗೌಡ್ರ, ಉಪಾಧ್ಯಕ್ಷ ಡಾ. ಉಮೇಶ ಪುರದ, ವಿದ್ಯಾ ಪ್ರಭು ಗಂಜಿಹಾಳ, ವೀರಣ್ಣ ಗೋಟಡಕಿ, ಸೋಮನಾಥ ಪುರಾಣಿಕ, ನಾಗರಾಜ ಹಿರೇಮಠ, ಮಹೇಶ ಗಾಣಿಗೇರ, ಬಸವರಾಜ ಕಾಡಪ್ಪನವರ, ಐ.ಬಿ. ಬೆನಕೊಪ್ಪ, ಶಿವಾನಂದ ಹೊಂಬಳ ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು. ಡಾ. ಉಮೇಶ ಪುರದ ಸ್ವಾಗತಿಸಿದರು. ಅಶೋಕ ಹಾದಿ ಕಾರ್ಯಕ್ರಮ ನಿರೂಪಿಸಿದರು.