ಸಾರಾಂಶ
ಕುದೂರು: ತಾನು ಕೆಲಸ ನಿರ್ವಹಿಸುವ ಶಾಲೆಯ 51 ಮಕ್ಕಳು ಮತ್ತು 8 ಜನ ಶಾಲಾ ಸಿಬ್ಬಂದಿಯನ್ನು ತಮ್ಮ ಸ್ವಂತ ಖರ್ಚಿನಲ್ಲಿ ಶಿಕ್ಷಕರೊಬ್ಬರು ವಿಮಾನದಲ್ಲಿ ಪ್ರವಾಸಕ್ಕೆ ಕರೆದೊಯ್ಯುವ ಮೂಲಕ ಗಮನ ಸೆಳೆದಿದ್ದಾರೆ.
ಮಾಗಡಿ ತಾಲೂಕು ಕುದೂರು ಹೋಬಳಿ ಕಣನೂರುಪಾಳ್ಯದ ಶಿಕ್ಷಕ ರಾಜಣ್ಣ ತಮ್ಮ ಸಂಬಳದ ಉಳಿತಾಯದ ಹಣದಲ್ಲಿ 2.76 ಲಕ್ಷ ರು. ಖರ್ಚು ಮಾಡಿ ತಮ್ಮ ಶಾಲೆಯ ಕನ್ನಡ ಮಾಧ್ಯಮದ 8, 9, 10 ನೇ ತರಗತಿಯ ಮಕ್ಕಳನ್ನು ಮಹಾರಾಷ್ಟ್ರದ ಪೂನಾಕ್ಕೆ ವಿಮಾನ ಪ್ರಯಾಣ ಮಾಡಿಸುತ್ತಿದ್ದಾರೆ.
ಹರಳೂರು ಗ್ರಾಮದ ಶ್ರೀ ಸಿದ್ದಗಂಗಾ ಸಂಸ್ಥೆಯ ಶ್ರೀ ವೀರಭದ್ರೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಸಂಸ್ಕೃತ ಪಾಠಶಾಲೆ ಮುಖ್ಯಶಿಕ್ಷಕ ರಾಜಣ್ಣರವರ ಸೇವೆಗೆ ಮಕ್ಕಳು ಮತ್ತು ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಜಣ್ಣರವರು ಕಾರ್ಯ ನಿರ್ವಹಿಸುವ ಶಾಲೆಯಲ್ಲಿ ಯಾವುದೇ ಕಾರ್ಯಕ್ರಮಗಳಾದರು ನಮ್ಮ ಹಳ್ಳಿಗಾಡಿನ ಶಾಲಾ ಮಕ್ಕಳು ಯಾವುದಾದರು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಶಾಲೆಗೆ ಕರೆತಂದು ಸಂವಾದ ಮಾಡಿಸುತ್ತಾರೆ. ಸಾಲುಮರದ ತಿಮ್ಮಕ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಚಲನಚಿತ್ರ ವಿಭಾಗ, ಅಧ್ಯಾತ್ಮಕ್ಷೇತ್ರ, ಮಾಧ್ಯಮರಂಗ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಶಾಲೆಗೆ ಕರೆಸಿ ಮಕ್ಕಳಿಗೆ ಅವರ ಅನುಭವವನ್ನು ಕೇಳಿಸುತ್ತಾರೆ.
ಓದುವ ಸಂದರ್ಭದಲ್ಲೇ ಮಕ್ಕಳು ವಿಮಾನ ಪ್ರಯಾಣವನ್ನು ಒಮ್ಮೆಯಾದರು ಮಾಡಬೇಕು. ಏಕೆಂದರೆ ನಾನು ಚಿಕ್ಕಂದಿನಲ್ಲಿ ವಿಮಾನವನ್ನು ಹತ್ತಿರದಿಂದ ನೋಡಬೇಕು, ಅದರಲ್ಲಿ ಹಾರಾಡಬೇಕು ಎಂಬ ಆಸೆಯಿತ್ತು. ಆಗದೇ ಇದ್ದಾಗ ಬಹಳ ಸಂಕಟ ಪಟ್ಟಿದ್ದೆ. ಇಂತಹ ಸಂಕಟ ನಮ್ಮ ಮಕ್ಕಳು ಪಡಬಾರದು. ಅದಕ್ಕಾಗಿ ಒಮ್ಮೆಯಾದರು ಅವರನ್ನು ವಿಮಾನದಲ್ಲಿ ಪ್ರಯಾಣ ಮಾಡಿಸಬೇಕು. ಮನುಷ್ಯ ಎತ್ತರಕ್ಕೆ ಹೋದಾಗ ಅವನ ಸಣ್ಣತನಗಳೆಲ್ಲಾ ಗೊತ್ತಾಗುತ್ತದೆ. ಮಕ್ಕಳ ಆಲೋಚನೆಗಳು ಎತ್ತರಕ್ಕೆ ಬೆಳೆಯಬೇಕು. ಅದಕ್ಕಾಗಿ ಇಂತಹ ಒಂದು ಪ್ರಯೋಗವನ್ನು ಮಾಡುತ್ತಿದ್ದೇನೆ. ಮಕ್ಕಳಿಂದ ಇದುವರೆಗು ನಮಗೆ ಸಂಬಳ ಪಡೆಯುತ್ತಿದ್ದೇನೆ. ಅದರಲ್ಲಿ ಒಂದು ಭಾಗವನ್ನಷ್ಟೇ ಮಕ್ಕಳಿಗೆ ಖರ್ಚು ಮಾಡುತ್ತಿದ್ದೇನೆ ಎಂಬುದೇ ನನಗೆ ಖುಷಿ ಎಂದು ರಾಜಣ್ಣ ಖುಷಿಯಿಂದ ಹೇಳಿದ್ದಾರೆ.
ಮಕ್ಕಳು ಮಹಾರಾಷ್ಟ್ರದಲ್ಲಿರುವ ಶಿರಡಿ ಸಾಯಿಬಾಬಾ ಆಶ್ರಮಕ್ಕೆ ಭೇಟಿ ನೀಡಿ ಗುರುದರ್ಶನ ಮಾಡಬೇಕೆಂದು ಅಲ್ಲಿಗೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ಶಾಲೆಯ ಮಕ್ಕಳು ಮತ್ತು ಶಿಕ್ಷಕರ ಜೊತೆಗೆ ಬಿಸಿಯೂಟ ತಯಾರಿಸುವ ತಾಯಂದಿರು ಮತ್ತು ಶಾಲೆಯಲ್ಲಿ ಕಸ ಹೊಡೆದು ಶಾಲೆಯನ್ನು ಅಚ್ಚುಕಟ್ಟಾಗಿಡುವ ಸಿಬ್ಬಂದಿಯನ್ನು ರಾಜಣ್ಣ ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನ ಪ್ರಯಾಣ ಮಾಡಿಸುತ್ತಿದ್ದಾರೆ.
ಸಂಸ್ಕೃತ ವಿವಿ ಮಂಜೂರಾತಿಗೆ ರಾಜಣ್ಣರ ಶ್ರಮ:
ಮಾಗಡಿ ತಾಲೂಕು ತಿಪ್ಪಸಂಸ್ರ ಹೋಬಳಿಯಲ್ಲಿ ನೂರು ಎಕರೆ ಪ್ರದೇಶದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಮಂಜೂರಾಗಲು ರಾಜಣ್ಣರವರ ಶ್ರಮವೂ ಇದೆ. ರಾಜ್ಯ ಸಂಸ್ಕೃತ ಶಿಕ್ಷಕರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ರಾಜಣ್ಣರವರಿಗೆ ಸಾಲುಮರದದ ತಿಮ್ಮಕ್ಕ ಪರಿಸರ ಪ್ರಶಸ್ತಿ, ಉತ್ತಮ ಶಿಕ್ಷಕ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗಳನ್ನು ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ.
ರಾಜಣ್ಣ ನಮ್ಮ ಶಾಲೆಯ ಸಂಸ್ಕೃತ ಪಾಠಶಾಲೆಯ ಮುಖ್ಯಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಳ್ಳಿಗಾಡಿನ ಮಕ್ಕಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಕರೆದುಕೊಂಡು ಹೋಗುತ್ತಿರುವುದು ಖುಷಿಯಾಗುತ್ತಿದೆ. ಮಕ್ಕಳಿಗೆ ಚೈತನ್ಯ ತುಂಬುವ ಕೆಲಸವನ್ನು ರಾಜಣ್ಣ ಮಾಡುತ್ತಿದ್ದಾರೆ.
- ಎಸ್.ಗುರುಮೂರ್ತಿ, ಮುಖ್ಯ ಶಿಕ್ಷಕ, ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ