ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಸ್ನೇಹಿತನ ಗೆಲುವನ್ನು ಕಣ್ತುಂಬಾ ತುಂಬಿಕೊಂಡು ಆತನ ಯಶಸ್ಸಿಗೆ ಕಾರಣೀಕರ್ತನಾಗುವವನೇ ನಿಜವಾದ ಗೆಳೆಯ ಎಂದು ಎಂಜಿವಿಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಎಸ್.ಎಸ್.ಹೂಗಾರ ಹೇಳಿದರು.ಪಟ್ಟಣದ ಎಪಿಎಂಸಿಯ ಕರ್ನಾಟಕ ಬ್ಯಾಂಕ್ ಮಂಗಲ ಭವನದಲ್ಲಿ ಎಳೆಯರು ನಾವು ಗೆಳೆಯರು ಸಂಘದ ವತಿಯಿಂದ ಏರ್ಪಡಿಸಲಾದ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸ್ನೇಹಿತರ ದಿನಾಚರಣೆಯ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿ ಅವರು ಮಾತನಾಡಿದರು. ಕಷ್ಟ-ಸುಖದಲ್ಲಿ ಸಮಭಾಗಿಯಾಗಿ ಸಾಗುವ ಮೂಲಕ ಕಷ್ಟವನ್ನು ತಿದ್ದಿತೀಡುವಲ್ಲಿ ಸ್ನೇಹಿತನ ಪಾತ್ರ ಅಪಾರವಾಗಿದೆ. ಗೆಳೆತನ ಎಂದರೆ ಪ್ರೀತಿ, ವಿಶ್ವಾಸ, ಮಮತೆ, ಅನುಕಂಪ, ಔದಾರ್ಯ, ನಾನು, ನಮ್ಮವರು ಎಂಬ ಭಾವನೆಯೇ ನಿಜವಾದ ಗೆಳೆತನವಾಗಿದೆ. ಇಲ್ಲಿ ಶ್ರೀಮಂತಿಕೆಯೆಂಬುದು ಇರುವುದಿಲ್ಲವೆಂದರು. ಇಲ್ಲಿ ಕೂಡಿರುವ ಎಲ್ಲ ಸ್ನೇಹಿತರ ಗೆಳೆತನದ ಬಾಂಧವ್ಯ ಇನ್ನಷ್ಟು ಹೆಚ್ಚಲಿ ಎಂದು ಶುಭ ಹಾರೈಸಿದರು.
ಗೆಳೆಯರ ಬಳಗದ ಸದಸ್ಯರಾದ ರಾಜನಾರಾಯಣ ನಲವಡೆ ಪ್ರಾಸ್ತಾವಿಕವಾಗಿ ಮಾತನಾಡಿ, ರಕ್ತ ಸಂಬಂಧಕ್ಕಿಂತಲೂ ಸ್ನೇಹ ಸಂಬಂಧ ಶಾಶ್ವತವಾಗಿದೆ. ಪ್ರತಿ ಆಪತ್ತಿಗೂ ಸ್ನೇಹಿತರು ಸಹಾಯಹಸ್ತ ಮಾಡುವ ಮೂಲಕ ಜೀವನ ಪರ್ಯಂತ ಜೊತೆಗೆ ಇರುತ್ತಾರೆಂಬ ವಿಶ್ವಾಸ ನನಗಿದೆ ಎಂದರು. 1983ರ ಈ ಸ್ನೇಹಿತರ ಬಳಗ ಉನ್ನತ ಶಿಕ್ಷಣಕ್ಕಾಗಿ ಬೇರೆ ಬೇರೆಯಾದರೂ ಮತ್ತೆ ಈಗ ಇಂತಹ ಕಾರ್ಯಕ್ರಮಗಳ ಮೂಲಕ ಸುಮಾರು 42 ವರ್ಷಗಳ ಕಾಲದ ಗೆಳೆತನ ಇನ್ನೂ ಗಟ್ಟಿಯಾಗಿಯೇ ಉಳಿದಿದೆ. ಸಂಘ ಸ್ಥಾಪಿಸಿ 7 ವರ್ಷಗಳ ಕಳೆದಿದ್ದು, 250ಕ್ಕಿಂತ ಹೆಚ್ಚು ಸ್ನೇಹಿತರು ಭಾಗಿಯಾಗಿದ್ದು, ಇದೇ ಛಾಯಾಚಿತ್ರವನ್ನು ನಮ್ಮ ಸಂಘದ ಲೋಗೋವಾಗಿ ಮಾಡಿದ್ದೇವೆ ಎಂದರು. ಪ್ರತಿಯೊಬ್ಬ ಶಿಕ್ಷಕರಿಗೂ ಗೌರವ ನೀಡುವ ಮೂಲಕ ಅವರ ಋಣ ತೀರಿಸಬೇಕೆಂದರು.ಹಿರಿಯ ನಿವೃತ್ತ ದೈಹಿಕ ಶಿಕ್ಷಕಕ ಎಸ್.ಎಲ್.ಗುರವ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಬಿಸಿ ಹೈಸ್ಕೂಲ್ ನಿವೃತ್ತ ಮುಖ್ಯಶಿಕ್ಷಕ ಎ.ಸಿ.ಹಿರೇಮಠ, ಅತಿಥಿಗಳಾಗಿ ನಿವೃತ್ತ ಚಿತ್ರಕಲಾ ಶಿಕ್ಷಕರಾದ ಆರ್.ವಿ.ಮಾದಿಹಾಳ ಆಗಮಿಸಿದ್ದರು. ಅಧ್ಯಕ್ಷತೆಯನ್ನು ಎಳೆಯರು ನಾವು ಗೆಳೆಯರು ಸಂಘದ ಅಧ್ಯಕ್ಷ ಜಗದೀಶ ಲಕ್ಷಟ್ಟಿ ವಹಿಸಿದ್ದರು.
ನೂತನ ಪದಾಧಿಕಾರಿಗಳ ನೇಮಕ:
ಇದೇ ವೇಳೆ ನೂತನ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಜಗದೀಶ ಲಕ್ಷಟ್ಟಿ, ಉಪಾಧ್ಯಕ್ಷ ಹಣಮಂತ ಮೇಲಿನಮನಿ, ಡಾ.ಮಹಾಂತೇಶ ಹಿರೇಮಠ, ಪ್ರಧಾನ ಕಾರ್ಯದರ್ಶಿ ನಿಸಾರ್ ಅಹ್ಮದ ಅತ್ತಾರ, ಖಜಾಂಚಿ ಸಂತೋಷ ಪಾಟೀಲ, ಸಹ ಕಾರ್ಯದರ್ಶಿ ಮಹಾಂತೇಶ ಕಂಠಿ, ಸಂಘಟನಾ ಕಾರ್ಯದರ್ಶಿ ಬಂದಗೀಸಾಬ ನಾಯ್ಕೋಡಿ, ಸಾಂಸ್ಕೃತಿಕ ಕಾರ್ಯದರ್ಶಿ ವಾಸುದೇವ ಬಡಿಗೇರ, ಮಾಧ್ಯಮ ಸಲಹೆಗಾರ ಶಂಕರ ಬಳ್ಳೊಳ್ಳಿ ಅವರು ನೇಮಕವಾದರು. ಎಂ.ಎ.ತಳ್ಳಕೇರಿ ಸ್ವಾಗತಿಸಿ, ನಿರೂಪಿಸಿ ವಂದಿಸಿದರು.