ಅನ್ನದಾತನ ಸಬಲೀಕರಣಕ್ಕೆ ಸಹಕಾರಿ ಕೊಡುಗೆ ಅನನ್ಯ

| Published : May 30 2025, 12:08 AM IST

ಸಾರಾಂಶ

ಸಂಘದ ಸದಸ್ಯರು ಪಾರದರ್ಶಕ ಆಡಳಿತದ ಮೂಲಕ ಗ್ರಾಹಕರು ವಿಶ್ವಾಸವಿರಿಸಿ ವ್ಯವಹರಿಸುವ ರೀತಿಯಲ್ಲಿ ಸೇವೆ ನೀಡಿದಾಗಲೇ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಸಹಕಾರ ರಂಗದ ಅಭಿವೃದ್ಧಿಗೆ ಹಾಗೂ ಕೇಂದ್ರ ಸಹಕಾರಿ ಬ್ಯಾಂಕ್ ಸದೃಢವಾಗಿ, ಸಮರ್ಥವಾಗಿ ಹಾಗೂ ದಕ್ಷತೆಯಿಂದ ಆಡಳಿತ ನಡೆಸುವಲ್ಲಿ ವಿಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಕೃಷಿ ಮಾರುಕಟ್ಟೆ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಜವಳಿ ಸಚಿವ ಶಿವಾನಂದ ಪಾಟೀಲ ಕೊಡುಗೆ ಅನನ್ಯವಾಗಿದೆ ಎಂದು ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ರಾಜಶೇಖರ ಗುಡದಿನ್ನಿ ಹೇಳಿದರು.

ಕೊಲ್ಹಾರ ತಾಲೂಕಿನ ಕುಪಕಡ್ಡಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಚೇರಿ ಕಟ್ಟಡ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ವಿಜಯಪುರ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಆರ್ಥಿಕವಾಗಿ ಸದೃಢತೆ ಹೊಂದಿದ್ದು, ಜಿಲ್ಲೆಯ 2.54 ಲಕ್ಷ ರೈತರಿಗೆ ಕೃಷಿಗಾಗಿಯೇ ₹2008 ಕೋಟಿ ಸಾಲ ನೀಡುವಲ್ಲಿ ಅಧ್ಯಕ್ಷ ಸಚಿವ ಶಿವಾನಂದ ಪಾಟೀಲ ಇಚ್ಛಾಶಕ್ತಿಯೇ ಪ್ರಮುಖ ಕಾರಣ. ಸಹಕಾರಿ ಸಂಘಗಳು ಗ್ರಾಮೀಣ ಜನರ ಹಾಗೂ ಅನ್ನದಾತನ ಆರ್ಥಿಕ ಸಬಲೀಕರಣಕ್ಕೆ ವಿಶೇಷ ಕೊಡುಗೆ ನೀಡಿವೆ ಎಂದು ಹೇಳಿದರು.

ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ ಸಂಘದ ನೂತನ ಉಗ್ರಾಣ ಲೋಕಾರ್ಪಣೆಗೊಳಿಸಿ ಮಾತನಾಡಿ, ಜಿಲ್ಲಾ ಬ್ಯಾಂಕ್‌ ರೈತರಿಗೆ ಸಹಕಾರ ಸಂಘಗಳ ಮೂಲಕ ಸರ್ಕಾರದ ಬಡ್ಡಿ ಸಹಾಯಧನ ಯೋಜನೆಯಡಿ ಶೂನ್ಯಬಡ್ಡಿ ದರದಲ್ಲಿ ಬೆಳೆಸಾಲ ನೀಡುತ್ತಿದೆ. ಶೇ.3ರ ರಿಯಾಯತಿ ಬಡ್ಡಿದರದಲ್ಲಿ ಮಧ್ಯಮಾವಧಿ ಸಾಲ ನೀಡುತ್ತಿದ್ದು, ಹೆಚ್ಚಿನ ರೈತರು ಪ್ರಯೊಜನ ಪಡೆಯಬೇಕು ಎಂದರು.

ವಿಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮನಗೂಳಿ ಸಮಾರಂಭಕ್ಕೆ ಜ್ಯೋತಿ ಬೆಳಗಿಸಿ ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ಜನತೆ ಪ್ಯಾಕ್ಸುಗಳೊಂದಿಗೆ ಹೆಚ್ಚಿನ ಪ್ರಮಾಣದಲ್ಲಿ ವ್ಯವಹರಿಸುತ್ತಿವೆ. ಸದಸ್ಯರು ಪ್ಯಾಕ್ಸುಗಳಲ್ಲಿ ₹1039 ಕೋಟಿ ಠೇವಣಿ ಇರಿಸಿದ್ದಾರೆ. 214 ಸಂಘಗಳು ಲಾಭದಲ್ಲಿದ್ದು 58 ಸಂಘಗಳು ಹಾನಿಯಲ್ಲಿವೆ ಇಂತಹ ಸಂಘಗಳ ಅಭಿವೃದ್ದಿಗೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ತೀವ್ರವಾಗಿ ಶ್ರಮಿಸುತ್ತಿದೆ ಎಂದರು.

ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಆಲಗೂರು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಡಾ.ಮಹಾದೇವ ಶ್ರೀಗಳು ಮಾತನಾಡಿ, ಸಹಕಾರ ಸಂಘಗಳು ಗ್ರಾಮಿಣ ಸಂಸ್ಥೆಗಳಾಗಿದ್ದು, ಗ್ರಾಮಸ್ಥರಿಂದಲೇ ಸ್ಥಾಪಿತಗೊಂಡಿವೆ. ಈ ಸಂಸ್ಥೆಗಳು ಸಹಕಾರ ತತ್ವಗಳಿಗೆ ಅನುಗುಣವಾಗಿ ವಿಶ್ವಾಸ, ನಂಬಿಕೆ, ಪ್ರಾಮಾಣಿಕತೆ ಹಾಗೂ ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಹೆಚ್ಚಿನ ಪ್ರಗತಿ ಹೊಂದಲಿ ಎಂದು ಹಾರೈಸಿದರು. ಸಂಘದ ಅಧ್ಯಕ್ಷೆ ಕಸ್ತೂರಿಬಾಯಿ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ತಾನಾಜಿ ನಾಗರಾಳ, ಸಿದ್ದನಗೌಡ ಪಾಟಿಲ, ಬಾವುರಾವ ಕುಲಕರ್ಣಿ, ಗುರನಗೌಡ ಬಿರಾದಾರ, ವಿಡಿಸಿಸಿ ಬ್ಯಾಂಕ್ ಡಿಜಿಎಂ ಪಿ.ವಾಯ್.ಡಿಂಗಿ, ಎಸ್.ಬಿ.ಹೊಸಮನಿ, ಸಹಕಾರ ಅಭಿವೃದ್ದಿ ಅಧಿಕಾರಿ ಶ್ರೀಶೈಲ ಹಂಗರಗಿ ವೇದಿಕೆ ಮೇಲಿದ್ದರು. ಗುರನಗೌಡ ಬಿರಾದಾರ ಪ್ರಾಸ್ಥಾವಿಕ ಮಾತನಾಡಿದರು. ಸಂಗನಗೌಡ ಬಿರಾದಾರ ಸ್ವಾಗತಿಸಿದರು.

ಸಂಘದ ಸದಸ್ಯರು ಪಾರದರ್ಶಕ ಆಡಳಿತದ ಮೂಲಕ ಗ್ರಾಹಕರು ವಿಶ್ವಾಸವಿರಿಸಿ ವ್ಯವಹರಿಸುವ ರೀತಿಯಲ್ಲಿ ಸೇವೆ ನೀಡಿದಾಗಲೇ ಸಹಕಾರ ಸಂಘಗಳ ಬೆಳವಣಿಗೆ ಸಾಧ್ಯ. ವಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿದ್ದ ದಿ.ಬಿ.ಎಸ್.ಪಾಟೀಲ ಕುಪ್ಪಕಡಿಯವರು ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ್ದನ್ನು ಸ್ಮರಿಸಿ, ಸಂಘದ ನೂತನ ಕಟ್ಟಡದಲ್ಲಿ ಹೆಚ್ಚಿನ ಅಭಿವೃದ್ದಿಪರ ಕೆಲಸಗಳಾಗಲಿ.

ರಾಜಶೇಖರ ಗುಡದಿನ್ನಿ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ