ಸಾರಾಂಶ
ಗದಗ: ವಿದ್ಯಾರ್ಥಿಗಳು ಏಕಾಗ್ರತೆ ಶಕ್ತಿ ಮೈಗೂಡಿಸಿಕೊಂಡರೆ ಮಾತ್ರ ಅವರಲ್ಲಿ ಮೌಲ್ಯಯುಕ್ತ ಮತ್ತು ನೈತಿಕ ಶಿಕ್ಷಣ ದೊರೆಯಲು ಸಾಧ್ಯವಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಖೆಯ ಸಂಚಾಲಕಿ ಬಿ.ಕೆ. ಸರೋಜಾ ಹೇಳಿದರು.
ಅವರು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಶಾಖೆಯಲ್ಲಿ ಕಳೆದ 10 ದಿನಗಳಿಂದ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇಂದು ಮಕ್ಕಳಲ್ಲಿ ಮುಖ್ಯವಾಗಿ ಬೇಕಾಗಿರುವ ನೈತಿಕ ಮತ್ತು ಮೌಲ್ಯಯುತ ಶಿಕ್ಷಣ ಇಲ್ಲದ್ದರಿಂದ ಭವಿಷ್ಯದಲ್ಲಿ ಅವರು ದುಶ್ಚಟಕ್ಕೆ ದಾಸರಾಗುತ್ತಿದ್ದಾರೆ. ದುಶ್ಚಟದಿಂದ ದೂರ ಉಳಿಬೇಕಾದರೆ ಪ್ರಾಥಮಿಕ ಶಿಕ್ಷಣದಿಂದಲೇ ಉತ್ತಮ ಸಂಸ್ಕಾರ, ಒಳ್ಳೆಯ ನಡತೆ, ಹಿರಿಯರಿಗೆ ಗೌರವ, ಸಾತ್ವಿಕ ಆಹಾರ ಸೇವನೆ, ಉತ್ತಮ ದಿನಚರಿ, ಒಳ್ಳೆಯ ಸ್ನೇಹ ಬೆಳೆಸಿಕೊಳ್ಳುವುದರಿಂದ ಈ ಸಮಾಜಕ್ಕೆ ಸದೃಢವಾದ ನಾಗರಿಕರನ್ನಾಗಿ ಮಾಡಬಹುದು. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ತಮ್ಮ ಮನೆಯ ಪರಿಸರ ಸಕಾರಾತ್ಮಕವಾಗಿ ಬದಲಿಸಿಕೊಳ್ಳಬೇಕು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ರಾಜಯೋಗ ಧ್ಯಾನ ಕಲಿಯಬೇಕು ಎಂದು ಸಲಹೆ ನೀಡಿದರು.
5 ನೇ ತರಗತಿಯಿಂದ 9 ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣ, ಮೌಲ್ಯಯುಕ್ತ ಆಟಗಳು, ಹಾಡುಗಳು, ಶ್ಲೋಕಗಳ ಕಂಠಪಾಠ, ಜ್ಞಾಪಕ ಶಕ್ತಿ, ಏಕಾಗ್ರತೆ, ದೃಢತೆ, ಇಚ್ಛಾಶಕ್ತಿ ವೃದ್ಧಿ ಮಾಡಿಕೊಳ್ಳುವುದು ಮತ್ತು ರಾಜಯೋಗ ಧ್ಯಾನದ ಬಗ್ಗೆ ಶಿಬಿರದಲ್ಲಿ ಮಕ್ಕಳಿಗೆ ತರಬೇತಿ ನೀಡಲಾಯಿತು.ಮಕ್ಕಳು ತಾವು ಕಲಿತ ಶಿಕ್ಷಣ ಮತ್ತು ಸುಂದರ ಶ್ಲೋಕವನ್ನು ಹಾಡುಗಳಿಂದ ಮನರಂಜಿಸಿದರು. ಭಾಗವಹಿಸಿದ ಮಕ್ಕಳಿಗೆ ಪ್ರಮಾಣ ಪತ್ರ ನೀಡಲಾಯಿತು. ಡಾ. ವೈಶಾಲಿ ಬಿರಾದಾರ, ಕೆ.ಸಿ. ಹಿರೇಮಠ, ಸಿದ್ದಪ್ಪ ಚಬ್ಬರಭಾವಿ ಸೇರಿದಂತೆ ದೈವಿ ಪರಿವಾರದವರು ಉಪಸ್ಥಿತರಿದ್ದರು.