ಸಾರಾಂಶ
ಸಾಲಬಾಧೆ ತಾಳಲಾರದೆ ನೇಕಾರನೊಬ್ಬ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಪಟ್ಟಣದಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಸಾಲಬಾಧೆ ತಾಳಲಾರದೆ ನೇಕಾರನೊಬ್ಬ ಮನನೊಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಪಟ್ಟಣದಲ್ಲಿ ನಡೆದಿದೆ.ಗುಳೇದಗುಡ್ಡ ಪಟ್ಟಣದ ಹೊಸಪೇಟೆ ಭಾಗದ ನಿವಾಸಿಯಾದ ಗುರುಪಾದಪ್ಪ ಚೆನ್ನಪ್ಪ ಹುಣಸಿಮರದ (56) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ನೇಕಾರ. ಆತ್ಮಹತ್ಯೆ ಮಾಡಿಕೊಂಡ ನೇಕಾರನಿಗೆ ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗ ಇದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಗುರುಪಾದಪ್ಪ ಹುಣಸಿಮರದ ನೇಕಾರರಾಗಿದ್ದು, ನೇಕಾರಿಕೆ ಉದ್ಯೋಗಕ್ಕಾಗಿ ಅರ್ಬನ್ ಬ್ಯಾಂಕ್, ಸಹಕಾರಿ ಬ್ಯಾಂಕ್ ಹಾಗೂ ಹಲವು ಮಹಿಳಾ ಸ್ವ ಸಹಾಯ ಸಂಘಗಳಲ್ಲಿ ಸುಮಾರು ₹6 ರಿಂದ 7 ಲಕ್ಷದಷ್ಟು ಸಾಲ ಮಾಡಿದ್ದರು. ಆದರೆ ನೇಕಾರಿಕೆ ಉದ್ಯೋಗ ಸಂಪೂರ್ಣ ಕುಸಿದಿದ್ದು, ನೇಕಾರಿಕೆ ಸರಿಯಾಗಿ ನಡೆಯದ ಕಾರಣ ಪಡೆದ ಸಾಲವನ್ನು ಮರುಪಾವತಿಸಲು ಸಾಧ್ಯವಾಗಲಿಲ್ಲ. ಅದಕ್ಕಾಗಿ ಜೀವನದಲ್ಲಿ ಜಿಗುಪ್ಸೆ ಹೊಂದಿ ಮನನೊಂದು ಸಾಲ ಬಾಧೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ನೇಕಾರ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.