ಹಾವು-ಮುಂಗುಸಿಯಂತೆ ಕಿತ್ತಾಡಿದ್ದ ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಗಂಗಾವತಿಯಲ್ಲಿ ನಡೆದ ಪ್ರಜಾಸೇವೆ ಕಾರ್ಯಕ್ರಮದಲ್ಲಿ ನಗುನಗುತ್ತ ಆಪ್ತ ಮಾತುಕತೆ ನಡೆಸಿದರು.
ಗಂಗಾವತಿ: ಹಾವು-ಮುಂಗುಸಿಯಂತೆ ಕಿತ್ತಾಡಿದ್ದ ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಪ್ರಜಾಸೇವೆ ಕಾರ್ಯಕ್ರಮದಲ್ಲಿ ನಗುನಗುತ್ತ ಆಪ್ತ ಮಾತುಕತೆ ನಡೆಸುವ ಮೂಲಕ ಭಾಯಿ ಭಾಯಿ ಎನಿಸಿದರು.
ಕಳೆದ ಒಂದು ತಿಂಗಳಿನಿಂದ ಸಚಿವ ಶಿವರಾಜ ತಂಗಡಗಿ ಮತ್ತು ಶಾಸಕ ಗಾಲಿ ಜನಾರ್ದನ ರೆಡ್ಡಿ ವಾಕ್ಸಮರ ನಡೆಸಿದ್ದರು. ಸಾಮಾಜಿಕ ಜಾಲತಾಣಗಳಲ್ಲೂ ಅವರ ಹೇಳಿಕೆ ಭಾರಿ ಸದ್ದು ಮಾಡಿತ್ತು. ಆದರೆ, ಇಂದು ಪಟ್ಟಣದಲ್ಲಿ ಆಯೋಜನೆಯಾಗಿದ್ದ ಪ್ರಜಾಸೇವಾ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಇಬ್ಬರ ಮಧ್ಯದ ಪಿಸುಮಾತು ಜನರ ಕುತೂಹಲ ಕೆರಳಿಸಿತು.ಶಿವರಾಜ ತಂಗಡಗಿ ಅವರನ್ನು ನಾನೇ ಸಚಿವರನ್ನಾಗಿ ಮಾಡಿದ್ದೇನೆ ಎಂದು ಜನಾರ್ದನ ರೆಡ್ಡಿ ಹೇಳಿರುವುದು, ಇನ್ನೊಂದೆಡೆ ಶಿವರಾಜ ತಂಗಡಗಿ ಅವರ ಪ್ರತಿಕ್ರಿಯೆ, ಇಬ್ಬರ ನಡುವೆ ಹಿಂದೆ ನಡೆದ ಮಾತುಕತೆಯ ಆಡಿಯೋ, ವಿಡಿಯೋಗಳು ಹರಿದಾಡಿದವು.
ಡಿಸಿ, ಸಚಿವರೇ ಗಮನಹರಿಸಿ: ಕಾರ್ಯಕ್ರಮದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಧ್ಯಕ್ಷೀಯ ಭಾಷಣ ಮಾಡುವ ಸಂದರ್ಭದಲ್ಲಿ ಸಚಿವ ಶಿವರಾಜ ತಂಗಡಗಿ ಮತ್ತು ಜಿಲ್ಲಾಧಿಕಾರಿ ಸುರೇಶ ಇಟ್ನಾಳ್ ಅವರು ಪರಸ್ಪರ ಮಾತುಗಳಲ್ಲಿ ನಿರತರಾಗಿದ್ದರು. ಆ ಸಂದರ್ಭದಲ್ಲಿ ಶಾಸಕ ರೆಡ್ಡಿ ಅವರು ಜಿಲ್ಲಾಧಿಕಾರಿಗಳೇ ಮತ್ತು ತಂಗಡಗಿ ಅವರೇ ನನ್ನ ಮಾತುಗಳ ಬಗ್ಗೆ ಗಮನಹರಿಸಿರಿ, ಬಹಳ ಮುಖ್ಯವಾದ ವಿಷಯ ಇದು ಎಂದು ಹೇಳಿದಾಗ ಇಬ್ಬರು ಮಾತನಾಡುವುದನ್ನು ಬಿಟ್ಟು ಶಾಸಕರ ಕಡೆ ಗಮನಹರಿಸಿದರು.