ಆರ್‌ಆರ್‌ ಸಂಖ್ಯೆಗೆ ಆಧಾರ್‌ ಜೋಡಣೆ ನಿಯಮ ಕೈಬಿಡಿ

| Published : Sep 05 2024, 12:36 AM IST

ಸಾರಾಂಶ

ರೈತರಿಗೆ ರಿಯಾಯಿತಿಯಲ್ಲಿ ಕೊಡುತ್ತಿದ್ದ ವಿದ್ಯುತ್ ಸಂಪರ್ಕ ಅಕ್ರಮ ಸಕ್ರಮ ವಿದ್ಯುತ್, ಕಂಬ, ವೈಯರು, ಪರಿವರ್ತಕ ಇನ್ನು ಮುಂತಾದ ಪರಿಕರಗಳನ್ನು ನಿಲ್ಲಿಸಿ ಎಲ್ಲಾ ಹೊರೆಯನ್ನು ರೈತನ ಮೇಲೆ ಹಾಕಿ, ಈಗಾಗಲೇ ಸೋತು ಸುಣ್ಣವಾಗಿರುವ ರೈತನ ಮೇಲೆ ಮತ್ತೆ ಬಂಡೆ ಹೊರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಆ‌ರ್ ಆ‌ರ್ ನಂಬರ್ ಗೆ ಆಧಾರ್ ಜೋಡಣೆ ಮಾಡುವುದನ್ನು ಕೈಬಿಡಬೇಕು, 2023ಕ್ಕೂ ಹಿಂದಿನ ರೀತಿಯಲ್ಲಿ ಇದ್ದ ಕಾನೂನಿನಂತೆ ವಿದ್ಯುತ್ ಸಂಪರ್ಕವನ್ನು, ಮತ್ತು ಟಿ ಸಿ ಗಳನ್ನು ಕೊಡಬೇಕು, ಹಾಗೂ ವಿದ್ಯುತ್ ಇಲಾಖೆ ಖಾಸಗಿಕರಣ ಮಾಡುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಬುಧವಾರ ಇಲ್ಲಿಯ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ಚಿಕ್ಕಬಳ್ಳಾಪುರ ಜಿಲ್ಲೆಯು ಬರಪೀಡಿತ ಪ್ರದೇಶವಾಗಿದ್ದು, ಯಾವುದೇ ನದಿ ನಾಲೆಗಳಿಲ್ಲದೆ ರೈತರು ಕೇವಲ ಮಳೆಯನ್ನು ಆಶ್ರಯಿಸಿ, ಸಾಲ ಸಫಲ ಮಾಡಿ ಸಾವಿರಾರು ಅಡಿ ಆಳಕ್ಕೆ ಕೊಳವೆ ಬಾವಿಗಳನ್ನು ಕೊರೆಸಿ ಬೋರ್‌ವೆಲ್‌ ಮೂಲಕ ಕೃಷಿಯಲ್ಲಿ ತೊಡಿದ್ದಾರೆ ಎಂದರು.

ಮೀಟರ್‌ ಅಳವಡಿಸಲು ಹುನ್ನಾರ

ಆದರೆ ಬೆಸ್ಕಾಂ ರೈತ ವಿರೋಧಿ ಶರತ್ತುಗಳನ್ನು ವಿಧಿಸಿ, ಆರ್ ಆರ್ ನಂಬರ್‌ಗೆ ಆಧಾರ್ ಜೋಡಣೆಯನ್ನು ಮಾಡಿ, ಮೀಟರ್ ಅಳವಡಿಸಿ ಶುಲ್ಕ ವಸೂಲಿ ಮಾಡಲು ಹೊರಟಿದೆ. ಬೋರ್‌ವೆಲ್‌ನ ಲ್ಪ ಸ್ವಲ್ಪ ನೀರಿನಿಂದ ರೇಷ್ಮೆ , ರಾಗಿ, ಜೋಳ, ಹೂವು-ಹಣ್ಣು ತರಕಾರಿಗಳನ್ನು ಬೆಳೆದು, ಹೈನುಗಾರಿಕೆಯಿಂದ ,ಹಾಲು ಉತ್ಪತ್ತಿ ಮಾಡಿ ದೇಶಕ್ಕೆ ಮಾದರಿ ರೈತರಾಗಿರುತ್ತಾರೆ. ಆದರೆ ಮಾರುಕಟ್ಟೆಯ ಅಸಮತೋಲನದಿಂದ ಮತ್ತು ಪ್ರಕೃತಿ ವಿಕೋಪಗಳಿಂದ ರೈತರು ತಾವು ಬೆಳೆದ ಬೆಳೆಗಳಿಗೆ ಇಟ್ಟಿರುವ ಖರ್ಚು ಸಹ ಸಿಗದೇ ಕಂಗಾಲಾಗಿರುವಾಗ, ಬೆಸ್ಕಾಂ ರೈತರಿಗೆ ಗಾಯದ ಮೇಲೆ ಬರೆ ಎಳೆಯಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತರಿಗೆ ರಿಯಾಯಿತಿಯಲ್ಲಿ ಕೊಡುತ್ತಿದ್ದ ವಿದ್ಯುತ್ ಸಂಪರ್ಕ ಅಕ್ರಮ ಸಕ್ರಮ ವಿದ್ಯುತ್, ಕಂಬ, ವೈಯರು, ಪರಿವರ್ತಕ ಇನ್ನು ಮುಂತಾದ ಪರಿಕರಗಳನ್ನು ನಿಲ್ಲಿಸಿ ಎಲ್ಲಾ ಹೊರೆಯನ್ನು ರೈತನ ಮೇಲೆ ಹಾಕಿ, ಈಗಾಗಲೇ ಸೋತು ಸುಣ್ಣವಾಗಿರುವ ರೈತನ ಮೇಲೆ ಮತ್ತೆ ಬಂಡೆ ಹೊರಿಸುತ್ತಿದ್ದೀರಿ, ಇದರಿಂದ ರೈತನ ಉಳಿವಿಗೆ ತೊಂದರೆಯಾಗಿ ಆಹಾರ ಉತ್ಪಾದನೆಯಲ್ಲಿ ದೇಶವನ್ನು ಸ್ವಾವಲಂಬಿಯಾಗಿಸಿರುವ ರೈತನೇ ಇಲ್ಲದ ಮೇಲೆ 145 ಕೋಟಿ ಜನಕ್ಕೆ ಆಹಾರವನ್ನು ಎಲ್ಲಿಂದ ತರುತ್ತೀರಿ ಎಂದು ಪ್ರಶ್ನಿದರು.

ಬೆನ್ನೆಲುಬು ಮುರಿಯುವ ಸರ್ಕಾರ

ದೇಶದ ಯಾವುದೇ ರಾಜ್ಯಗಳಲ್ಲಿ ಇಲ್ಲದ ರೈತ ವಿರೋಧಿ ಕಾಯ್ದೆಗಳನ್ನು ನೀವು ಜಾರಿ ಮಾಡಿರುತ್ತೀರಿ. ಸ್ವಾಮಿನಾಥನ್ ವರದಿ ಜಾರಿ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿದೆ. ವಾರ್ಷಿಕ ಅವಯವದಲ್ಲಿ ರೈತರ ಸಬ್ಸಿಡಿ ಹೆಸರಲ್ಲಿ ತೆಗೆಯುವ ಲಕ್ಷಾಂತರ ಕೋಟಿ ಹಣವು ಕಂಪನಿಗಳ ಪಾಲಾಗುತ್ತಿದೆ. ರೈತನೇ ದೇಶದ ಬೆನ್ನೆಲುಬು ಎನ್ನುವುದು ಕೇವಲ ಘೋಷ ವಾಕ್ಯಕ್ಕೆ ಸೀಮಿತವಾಗಿದೆ. ಯಾವುದೇ ಸರ್ಕಾರ ಬಂದರೂ ರೈತನ ಬೆನ್ನೆಲುಬು ಮುರಿದು ರೈತನನ್ನು ಮೂಲೆಗುಂಪು ಮಾಡಲು ಹೊರಟಿದೆ, ಈ ಎಲ್ಲಾ ರೈತ ವಿರೋಧಿ ಕಾರ್ಯಗಳು ಕೂಡಲೇ ಹಿಂಪಡೆಯಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರಾಮನಾಥ ರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ವೇಣುಗೋಪಾಲ್, ವೀರಾಪುರ ಮುನಿ ನಂಜಪ್ಪ, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ರಾಮಾಂಜನಪ್ಪ, ನೆಲಮಾಕನಹಳ್ಳಿ ಗೋಪಾಲ್, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ತಾದೂರು ಮಂಜುನಾಥ್, ಚಿಂತಾಮಣಿ ತಾಲೂಕು ಅಧ್ಯಕ್ಷ ರಮಣರೆಡ್ಡಿ, ಗುಡಿಬಂಡೆ ತಾಲೂಕು ಅಧ್ಯಕ್ಷ ಸೋಮು ಬಾಗೇಪಲ್ಲಿ ತಾಲೂಕು ಅಧ್ಯಕ್ಷ ಲಕ್ಷ್ಮಣ್ ರೆಡ್ಡಿ, ಬಿ.ನಾರಾಯಣ ಸ್ವಾಮಿ, ರಾಮಕೃಷ್ಣಪ್ಪ, ಕುಪ್ಪಳ್ಳಿ ಶ್ರೀನಿವಾಸ್, ಜಾತವರ ಮುನಿರಾಜು, ರಾಮಾಂಜಿನಪ್ಪ,ಅಶ್ವತಪ್ಪ, ಮಹೇಶ, ರಾಮಚಂದ್ರಪ್ಪ, ಸುಂದ್ರಹಳ್ಳಿ ಬೀರಪ್ಪ, ಕನ್ನಮಂಗಲ ನಾಗರಾಜು, ಪಿ.ವಿ.ದೇವರಾಜ್, ಬುಸ್ಸನಹಳ್ಳಿ ದೇವರಾಜ್,ಮತ್ತಿತರರು ಇದ್ದರು.