ಸಾರಾಂಶ
ಬಿ.ಎಚ್.ರಸ್ತೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಯೋಜನೆ ಅಡಿಯಲ್ಲಿ ಹೈವೆ ನಿರ್ಮಿಸುವ ಯೋಜನೆ ಇದೆ. ಇದರಿಂದ ಬೃಹತ್ ಅರಣ್ಯ ನಾಶವಾಗಲಿದೆ. ಭೂಕುಸಿತ ಹೆಚ್ಚಾಗಲಿವೆ.
ಶಿವಮೊಗ್ಗ: ಸಾಗರ- ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ ಬರುವ ಕೊಲ್ಲಿಬಚ್ಚಲು, ಕರಡಿಬೆಟ್ಟ ಕಣಿವೆಯಲ್ಲಿ ಬಿ.ಎಚ್.ರಸ್ತೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆ ಕೈಬಿಡಬೇಕು ಎಂದು ವೃಕ್ಷಲಕ್ಷ ಆಂದೋಲನ ಕರ್ನಾಟಕದ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಜಿಲ್ಲೆ ಸಾಗರ ಮತ್ತು ಶಿವಮೊಗ್ಗ ತಾಲೂಕುಗಳ ಮಧ್ಯ ಬಿ.ಎಚ್.ರಸ್ತೆ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಯೋಜನೆ ಅಡಿಯಲ್ಲಿ ಹೈವೆ ನಿರ್ಮಿಸುವ ಯೋಜನೆ ಇದೆ. ಇದರಿಂದ ಬೃಹತ್ ಅರಣ್ಯ ನಾಶವಾಗಲಿದೆ. ಭೂಕುಸಿತ ಹೆಚ್ಚಾಗಲಿವೆ. ಅಮ್ಮನ ಕೆರೆ ಜಲಾಯನ ಛಿದ್ರವಾಗಲಿದೆ. ಸುಮಾರು 1300 ಎಕರೆ ಕರಡಿ ಬೆಟ್ಟ ಅರಣ್ಯ ನಾಶಕ್ಕೆ ಕಾರಣವಾಗಲಿದೆ ಎಂದು ಆರೋಪಿಸಿದರು.ಕೊಲ್ಲಿ ಬಚ್ಚಲು ಕಣಿವೆ ಕರಡಿ ಅರಣ್ಯ ಬೆಟ್ಟ ಪ್ರದೇಶದಿಂದ ಸುಮಾರು 10 ಎಕರೆಗೆ ನೀರು ಹೋಗುತ್ತದೆ. ಅಲ್ಲದೆ ಲಿಂಗನಮಕ್ಕಿ ಶರಾವತಿ ಜಲಾಶಯಕ್ಕೆ ಇಲ್ಲಿನ ಹಳ್ಳಗಳಿಂದಲೇ ನೀರು ಹರಿಯುತ್ತದೆ. ಇಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಬೇಡ ಎಂಬುವುದು ತಜ್ಞರ ಅಭಿಪ್ರಾಯವು ಆಗಿದೆ. ಈ ಹಿಂದೆ ಅಣೆಕಟ್ಟು ಕಟ್ಟುವುದನ್ನು ಕೂಡ ನಿಲ್ಲಿಸಲಾಗಿತ್ತು. ಅಲ್ಲದೇ ಅರಣ್ಯ ಇಲಾಖೆ ಅನುಮತಿ ಇಲ್ಲದೆ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಬಾರದು ಎಂದರು.
ಈಗಾಗಲೇ ಗಿಳಾಲಗುಂಡಿ- ಕೋಣೆಹೊಸೂರು ರಾಷ್ಟ್ರೀಯ ಹೆದ್ದಾರಿಯಿದ್ದು, ಇದನ್ನೇ ಅಭಿವೃದ್ಧಿ ಪಡಿಸಬೇಕು. ಇದರಿಂದ ಯಾವುದೇ ತೊಂದರೆಯಾಗುವುದಿಲ್ಲ. ಜೀವ ವೈವಿಧ್ಯ ಕಾಯ್ದೆ ಪರಿಸರ ಕಾಯ್ದೆ ಮತ್ತು ಕಂದಾಯ ಕಾಯ್ದೆಗಳ ಉಲ್ಲಂಘನೆಯೂ ಆಗುತ್ತದೆ. ಸರ್ಕಾರ ಮತ್ತು ಅರಣ್ಯ ಇಲಾಖೆ ಈ ಬಗ್ಗೆ ಯೋಚಿಸಬೇಕು. ರಾಜ್ಯ ಅರಣ್ಯ ಸಚಿವರು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ತಜ್ಞರ ಸಲಹೆಗೆ ಮಾನ್ಯತೆ ನೀಡಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರಸ್ತಾವನೆ ಬದಲಾಯಿಸಲು ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.ಪತ್ರಿಕಾಗೋಷ್ಠಿಯಲ್ಲಿ ದಿನೇಶ್, ಸತ್ಯನಾರಾಯಣ್ ಮತ್ತಿತರರು ಇದ್ದರು.