ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಸೋಮಲಾಪುರ ಗ್ರಾಮ ಪಂಚಾಯಿತಿಗೆ ತಾಲೂಕಿನ ಉದಗಟ್ಟಿ ಪ್ಲಾಟ್ ನಿವಾಸಿಗಳು ಒತ್ತಾಯಿಸಿದ್ದಾರೆ.
ರಾಣಿಬೆನ್ನೂರು: ಸಮರ್ಪಕ ಕುಡಿಯುವ ನೀರು ಪೂರೈಸುವಂತೆ ಸೋಮಲಾಪುರ ಗ್ರಾಮ ಪಂಚಾಯಿತಿಗೆ ತಾಲೂಕಿನ ಉದಗಟ್ಟಿ ಪ್ಲಾಟ್ ನಿವಾಸಿಗಳು ಒತ್ತಾಯಿಸಿದ್ದಾರೆ.ಕಳೆದ ಎರಡು ದಿನಗಳಿಂದ ಬೋರ್ವೆಲ್ ಮೋಟಾರ್ ಕೆಟ್ಟಿದ್ದು, ಗ್ರಾಪಂ ಅಧಿಕಾರಿಗಳು ಅದನ್ನು ಸರಿಪಡಿಸಿ ನೀರು ಪೂರೈಸುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಕಳೆದ ತಿಂಗಳು ಮೋಟಾರ್ ಕೆಟ್ಟಿತ್ತು, ಅದನ್ನು ಸರಿಪಡಿಸಿ ನಾಲ್ಕೈದು ದಿನಗಳ ನಂತರ ನೀರು ಬಿಡಲಾಗಿತ್ತು. ಪ್ರತಿ ಬಾರಿಯೂ ಮೋಟಾರ್ ಕೆಟ್ಟರೆ, ನಾಲ್ಕೈದು ದಿನಗಳ ಕಾಲ ಗ್ರಾಮಕ್ಕೆ ನೀರು ಬಿಡುವುದಿಲ್ಲ. ಇದರಿಂದ ಜನ, ಜಾನುವಾರಗಳು ನೀರಿಲ್ಲದೆ ಪರಿತಪಿಸಬೇಕಾಗುತ್ತದೆ. ಆಗ ಅನಿವಾರ್ಯವಾಗಿ ಕುಡಿಯಲು ಯೋಗ್ಯವಿಲ್ಲದ ಹೊಲ, ಗದ್ದೆಗಳಿಗೆ ತೆರಳಿ ಅಲ್ಲಿಯ ಬೋರ್ವೆಲ್ಗಳಲ್ಲಿ ದೊರೆಯುವ ಕಲುಷಿತ ನೀರು ತಂದು ಕುಡಿಯುವ ಪರಿಸ್ಥಿತಿ ಇದೆ. ಮೋಟಾರ್ ಸರಿಪಡಿಸಿ ನೀರು ಬಿಡಿ ಅಂತ ಅಧಿಕಾರಿಗಳಿಗೆ ಕೇಳಿದರೆ ಮೋಟಾರ್ ರಿಪೇರಿ ಮಾಡುವವರು ಇಲ್ಲ. ಅವರನ್ನು ಕರೆಸಿ ಮೋಟಾರ್ ದುರಸ್ತಿಪಡಿಸಿದ ನಂತರ ನೀರು ಬಿಡುತ್ತೇವೆ. ಅಲ್ಲಿ ತನಕ ಕಾಯಬೇಕು. ಇಲ್ಲವೆ ನದಿಗೆ ಹೋಗಿ ನೀರು ತಂದು ಕುಡಿಯಿರಿ ಎನ್ನುತ್ತಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ಗ್ರಾಮದಲ್ಲಿ ಸ್ವಚ್ಛತೆ ಮರಿಚಿಕೆಯಾಗಿದೆ. ಚರಂಡಿಗಳು ದುರ್ವಾಸನೆ ಹೊರಸೂಸುತ್ತಿವೆ. ಖಾಲಿ ನಿವೇಶನಗಳು ಜಾಸ್ತಿ ಇರುವುದರಿಂದ ಗಿಡಗಂಟೆ ಬೆಳೆದಿದ್ದು ಸೊಳೆ, ವಿಷಜಂತುಗಳ ಕಾಟ ಜಾಸ್ತಿಯಾಗಿದೆ. ಜನವಸತಿ ಪ್ರದೇಶದಲ್ಲಿ ಕುರಿ ಶೆಡ್ ನಿರ್ಮಿಸಿ ಕುರಿ ಸಾಕಾಣಿಕೆ ಮಾಡಕೂಡದು ಎಂಬ ನಿಯಮ ಇದ್ದರೂ, ಕೂಡಾ ಗ್ರಾಮದಲ್ಲಿ ಕೆಲವರಿಗೆ ಕುರಿ ಶೆಡ್ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ. ಈ ಸಮಸ್ಯೆಗಳ ಕುರಿತು ಅಧಿಕಾರಿಗಳ ಗಮನಕ್ಕೂ ತಂದರೂ ಕ್ಯಾರೆ ಎನ್ನುತ್ತಿಲ್ಲ. ಕೂಡಲೇ ಬೋರ್ವೆಲ್ ಮೋಟಾರ್ ಸರಿಪಡಿಸಿ ನೀರು ಬಿಡಬೇಕು. ಗ್ರಾಮದಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಹಾಗೂ ಅನಧಿಕೃತವಾಗಿ ನಿರ್ಮಾಣ ಮಾಡಿದ ಕುರಿ ಶೆಡ್ ಗಳನ್ನು ತೆರವುಗೊಳಿಸಬೇಕು. ಇಲ್ಲವಾದರೆ ಗ್ರಾಪಂ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.