ಸಾರಾಂಶ
ಡಾ.ಜೆ.ಪಿ.ದೊಡ್ಡಮನಿಯವರ ಅಭಿನಂದನೆ ಹಾಗೂ ಅವರ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭವನ್ನು ಜೂ.15ರಂದು ಬೆಳಗ್ಗೆ 9.30ಕ್ಕೆ ಮೋಟಗಿ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ
ಕನ್ನಡಪ್ರಭ ವಾರ್ತೆ ಅಥಣಿ
ಪಟ್ಟಣದ ಖ್ಯಾತ ಸಾಹಿತಿ, ವಿಮರ್ಶಕ, ಪ್ರಗತಿಪರ ವಿಚಾರವಾದಿ, ಅನುವಾದಕ ಡಾ.ಜೆ.ಪಿ.ದೊಡ್ಡಮನಿಯವರ ಅಭಿನಂದನೆ ಹಾಗೂ ಅವರ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭವನ್ನು ಜೂ.15ರಂದು ಬೆಳಗ್ಗೆ 9.30ಕ್ಕೆ ಮೋಟಗಿ ಮಠದ ಅನುಭವ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿ ಹಿರಿಯ ಸದಸ್ಯೆ, ಅಥಣಿ ಸಾಹಿತ್ಯ ಸಾಂಸ್ಕೃತಿಕ ಸಂಘದ ಅಧ್ಯಕ್ಷೆ ಡಾ.ಪ್ರಿಯಂವಧಾ ಹುಲಗಬಾಳಿ ಹೇಳಿದರು.ಪಟ್ಟಣದಲ್ಲಿ ಗುರುವಾರ ಅಭಿನಂದನಾ ಸಮಾರಂಭದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಡಾ.ಜೆ.ಪಿ.ದೊಡ್ಡಮನಿಯವರು ಕನ್ನಡ ಪ್ರಾಧ್ಯಾಪಕರಾಗಿ, ಪ್ರಾಚಾರ್ಯರಾಗಿ ಅಥಣಿ ಸೇರಿದಂತೆ ವಿವಿಧ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಜೊತೆಗೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಮರಾಠಿ ಭಾಷೆಯಲ್ಲಿರುವ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದಿಸಿ ಜನಸಾಮಾನ್ಯರ ಮನೆ-ಮನ ಮುಟ್ಟಿದ್ದಾರೆ. ಜ್ಯೋತಿರಾವ ಫುಲೆ ಮತ್ತು ಸಾವಿತ್ರಿಬಾಯಿ ಪುಲೆ, ಶಾಹುಮಹಾರಾಜ, ಡಾ.ಅಂಬೇಡ್ಕರ್ರ ಸಮಗ್ರ ಜೀವನ ಚರಿತ್ರೆ ಅವರ ಪ್ರಮುಖ ಅನುವಾದಿತ ಗ್ರಂಥಗಳಾಗಿವೆ ಎಂದರು.ದೊಡ್ಡಮನಿಯವರ ಸಾಹಿತ್ಯ ಕೃಷಿ ಸಾಧನೆಗೆ ಕೇಂದ್ರ ಸಾಹಿತ್ಯ ಅನುವಾದ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಸಾಹಿತ್ಯ ಶ್ರೀ ಪ್ರಶಸ್ತಿ, ದಲಿತ ಸಾಹಿತ್ಯ ಪರಿಷತ್ ಕೊಡ ಮಾಡುವ ರಾಷ್ಟ್ರೀಯ ಗೌರವ ಪ್ರಶಸ್ತಿಗಳು ಒಲಿದಿವೆ. ಅಪಾರ ಶಿಷ್ಯ ಬಳಗ, ಸಾಹಿತ್ಯ ಬಳಗ ಹೊಂದಿರುವ ಇವರ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದೆ. ಈ ಸಮಾರಂಭದಲ್ಲಿ ಅವರ ಎಲ್ಲಾ ಅಭಿಮಾನಿ ಬಳಗದವರು, ಸಾಹಿತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಕೋರಿದರು.
ಶಿಕ್ಷಕಿ ಹಾಗೂ ಸಾಹಿತಿ ಪ್ರಭಾ ಬೋರಗಾಂವಕರ ಮಾತನಾಡಿ, ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಚಿತ್ತರಗಿ ಹಾಗೂ ಇಳಕಲ್ ಸಂಸ್ಥಾನ ಮಠದ ಗುರು ಮಹಾಂತ ಸ್ವಾಮೀಜಿ, ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕರ್ನಾಟಕ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ, ಹಿರಿಯ ಸಾಹಿತಿ ಡಾ.ವೀರಣ್ಣ ರಾಜೂರ ಅನುವಾದ ಜ್ಯೋತಿ ಅಭಿನಂದನಾ ಗ್ರಂಥ ಬಿಡುಗಡೆಗೊಳಿಸಲಿದ್ದಾರೆ. ನಾನು ರಚಿಸಿರುವ ಒಲವ ಉಡುಗೊರೆ ಎಂಬ ಭಾವಗೀತೆಗಳ ಧ್ವನಿ ಸುರಳಿಯನ್ನು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಮುರಿಗೆಪ್ಪ ಬಿಡುಗಡೆಗೊಳಿಸಲಿದ್ದಾರೆ. ಧಾರವಾಡದ ಜಿಎಸ್ಎಸ್ ಮಹಾವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ.ಜೆ.ಎ.ಹಡಗಲಿ ಅವರು ಡಾ.ದೊಡ್ಡಮನಿ ಅವರ ಸಂಕೀರ್ಣ ಗ್ರಂಥಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಖ್ಯಾತ ಸಾಹಿತಿ ಡಾ.ವಿ.ಎಸ್.ಮಾಳಿ ದೊಡ್ಡಮನಿಯವರ ಒಟ್ಟು ಸಾಹಿತ್ಯ ಅವಲೋಕನ ಕುರಿತು ಹಾಗೂ ಜಮಖಂಡಿ ಪ್ರಾಧ್ಯಾಪಕ, ಹಾಸ್ಯ ಸಾಹಿತಿ ಡಾ.ವೈ.ವೈ.ಕೊಕ್ಕನವರ ಅಭಿನಂದನಾ ಪರ ನುಡಿ ಆಡಲಿದ್ದಾರೆ ಎಂದು ತಿಳಿಸಿದರು. ಚುಟುಕು ಸಾಹಿತ್ಯ ಪರಿಷತ್ನ ತಾಲೂಕು ಅಧ್ಯಕ್ಷ ಡಾ.ಆರ್.ಎಸ್.ದೊಡ್ಡನಿಂಗಪ್ಪಗೋಳ ಸ್ವಾಗತಿಸಿ ವಂದಿಸಿದರು.