ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ: ಶೆಟ್ಟರ್‌

| Published : Mar 15 2024, 01:19 AM IST

ಹೈಕಮಾಂಡ್‌ ತೀರ್ಮಾನಕ್ಕೆ ಬದ್ಧ: ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಚುನಾವಣೆ ವಿಚಾರವಾಗಿ ಧಾರವಾಡ, ಹಾವೇರಿ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಬೇಡಿಕೆ ಇಟ್ಟಿದ್ದೆ, ಆದರೆ ಬೇರೆ ಬೇರೆ ಕಾರಣದಿಂದ ಅದು ಕೈತಪ್ಪಿದೆ. ಹೀಗಾಗಿ ಆ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಸದ್ಯ ಬೆಳಗಾವಿ ಲೋಕಸಭಾ ಕ್ಷೇತ್ರದ ಚರ್ಚೆ ನಡೆದಿದೆ.

ಹುಬ್ಬಳ್ಳಿ:

ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಹೈಕಮಾಂಡ್‌ ಏನೂ ತೀರ್ಮಾನ ತೆಗೆದುಕೊಳ್ಳುತ್ತದೆ. ಅದಕ್ಕೆ ನಾನು ಬದ್ಧ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ವಿಚಾರವಾಗಿ ಧಾರವಾಡ, ಹಾವೇರಿ ಕ್ಷೇತ್ರಕ್ಕೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಬೇಡಿಕೆ ಇಟ್ಟಿದ್ದೆ, ಆದರೆ ಬೇರೆ ಬೇರೆ ಕಾರಣದಿಂದ ಅದು ಕೈತಪ್ಪಿದೆ. ಹೀಗಾಗಿ ಆ ವಿಚಾರವಾಗಿ ನಾನು ಹೆಚ್ಚು ಮಾತನಾಡುವುದಿಲ್ಲ. ಸದ್ಯ ಬೆಳಗಾವಿ ಲೋಕಸಭಾ ಕ್ಷೇತ್ರದ ಚರ್ಚೆ ನಡೆದಿದೆ ಎಂದರು.ಬೆಳಗಾವಿಯಲ್ಲಿ ಶೆಟ್ಟರ್ ಗೋಬ್ಯಾಕ್ ಅಭಿಯಾನದ ವಿಚಾರವಾಗಿ ಮಾತನಾಡಿ, ಬೆಳಗಾವಿಯಲ್ಲಿ ಪರಿಸ್ಥಿತಿ ಸರಿಯಿಲ್ಲ ಅಂತಾ ಏನಿಲ್ಲ, ಈಗಾಗಲೇ ಅಲ್ಲಿನ ನಾಯಕರು, ಹೈಕಮಾಂಡ್‌ ನಾಯಕರ ಜತೆಗೆ ಚರ್ಚೆ ಮಾಡಿದ್ದೇನೆ. ವಿ. ಸೋಮಣ್ಣ ಅವರಿಗೂ ತುಮಕೂರಿನಲ್ಲಿ ಮೊದಲು ವಿರೋಧ ವ್ಯಕ್ತವಾಗಿತ್ತು. ಟಿಕೆಟ್ ನೀಡಿದ ಬಳಿಕ ಎಲ್ಲವೂ ಸರಿ ಹೋಗಿದೆ. ಅದರಂತೆ ಬೆಳಗಾವಿಯಲ್ಲೂ ಆಗಲಿದೆ ಎಂದು ತಿಳಿಸಿದರು.ಸದ್ಯ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧೆ ಮಾಡುವುದು ತೀರ್ಮಾನ ಆಗಿಲ್ಲ, ಇದೀಗ ಚರ್ಚೆ ಹಂತದಲ್ಲಿದೆ. ಯಡಿಯೂರಪ್ಪ, ವಿಜಯೇಂದ್ರ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ. ನಾಲ್ಕು ಗೋಡೆ ಮಧ್ಯೆ ನಡೆದ ಚರ್ಚೆ ಬಹಿರಂಗವಾಗಿ ತಿಳಿಸಲು ಅಗುವುದಿಲ್ಲ ಎಂದರು.ಶೆಟ್ಟರ್ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಂಚು ರೂಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ಅದನ್ನು ನಾನು ಮಾತನಾಡುವುದಿಲ್ಲ. ನಮ್ಮ ಬೆಂಬಲಿಗರು ಹೇಳುತ್ತಾರೆ. ಅಷ್ಟೇ ಅಲ್ಲದೇ ಜನರಿಗೆ ಗೊತ್ತಿದೆ. ಅವರೇ ಪಾಠ ಕಲಿಸುತ್ತಾರೆ ಎಂದು ಹೆಸರು ಹೇಳದೇ ಪರೋಕ್ಷವಾಗಿ ಪ್ರಹ್ಲಾದ ಜೋಶಿ ವಿರುದ್ಧ ಕಿಡಿಕಾರಿದರು.

ಪ್ರಹ್ಲಾದ ಜೋಶಿ ಪರವಾಗಿ ಪ್ರಚಾರ ಮಾಡುತ್ತೀರಾ ಎಂಬ ಪ್ರಶ್ನೆಗೆ, ಪಕ್ಷ ಯಾರಿಗೆ ಟಿಕೆಟ್ ಕೊಟ್ಟರೂ ನಾನು ಪ್ರಚಾರ ಮಾಡುತ್ತೇನೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾಗಬೇಕೆಂಬ ಆಸೆ ಎಲ್ಲರಿಗೂ ಇದ್ದು, ಅದರಂತೆ ಪಕ್ಷ ಗೆಲ್ಲಿಸಲು ಶ್ರಮಿಸಲಾಗುವುದು. ಈ ಬಾರಿಯೂ ಎಲ್ಲೆಡೆ ಮೋದಿ ಅಲೆಯಿಂದ ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಟಿಕೆಟ್ ವಿಚಾರವಾಗಿ ದೆಹಲಿಗೆ ಹೋಗುವುದಿಲ್ಲ. ಖಂಡಿತವಾಗಿ ಈ ಬಾರಿ ಲೋಕಸಭಾ ಟಿಕೆಟ್ ಸಿಗುವ ಸಾಧ್ಯತೆ ಇದೆ ಎಂದು ಶೆಟ್ಟರ್ ಹೇಳಿದರು.

ಮುಂದಿನ ದಿನಗಳಲ್ಲಿ ಶೆಟ್ಟರ್ ಪಶ್ಚಾತ್ತಾಪ ಪಡುತ್ತಾರೆ ಎಂಬ ಡಿ.ಕೆ. ಶಿವಕುಮಾರ ಹೇಳಿಕೆಗೆ, ನಾನು ಕಾಂಗ್ರೆಸ್ಗೆ ಹೋದಾಗಲೂ ಪಶ್ಚಾತ್ತಾಪವಾಗಿಲ್ಲ, ಮರಳಿ ಬಿಜೆಪಿಗೆ ಬಂದಾಗಲೂ ಪಶ್ಚಾತ್ತಾಪ ಪಟ್ಟಿಲ್ಲ. ಬೇರೆಯವರಿಗೆ ಪಶ್ಚಾತ್ತಾಪ ಪಡಿಸುತ್ತೇನೆ. ಹಾಗಾಗಿ ನನಗೆ ಪಶ್ಚಾತ್ತಾಪ ಎಂಬುದಿಲ್ಲ ಎಂದರು.