ದಲಿತರ ಸ್ಮಶಾನದ ಬಳಿ ಗಣಿಗಾರಿಕೆ ರದ್ದು ಪಡಿಸಿ

| Published : May 14 2024, 01:08 AM IST

ಸಾರಾಂಶ

ತಾಲೂಕಿನ ಹಿರೀಕಾಟಿ ಗ್ರಾಮದ ಸ.ನಂ.೧೦೮ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸ್ಮಶಾನದ ಜಾಗದ ಜಂಟಿ ಸರ್ವೇ ಆಗುವ ತನಕ ಗಣಿಗಾರಿಕೆ ನೀಡಿರುವ ಆದೇಶ ರದ್ದು ಪಡಿಸಬೇಕು ಎಂದು ರೈತ ಕೂಲಿ ಸಂಗ್ರಾಮ ಸಮಿತಿ (ಆರ್‌ಸಿಎಸ್‌ಎಸ್‌) ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಹಿರೀಕಾಟಿ ಗ್ರಾಮದ ಸ.ನಂ.೧೦೮ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸ್ಮಶಾನದ ಜಾಗದ ಜಂಟಿ ಸರ್ವೇ ಆಗುವ ತನಕ ಗಣಿಗಾರಿಕೆ ನೀಡಿರುವ ಆದೇಶ ರದ್ದು ಪಡಿಸಬೇಕು ಎಂದು ರೈತ ಕೂಲಿ ಸಂಗ್ರಾಮ ಸಮಿತಿ (ಆರ್‌ಸಿಎಸ್‌ಎಸ್‌) ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದೆ.

ಸ.ನಂ.೧೦೮ರಲ್ಲಿ ೧೯೯೭ರಲ್ಲಿ ಮಹದೇವಪ್ರಸಾದ್‌ ಶಾಸಕರಾಗಿದ್ದ ಸಮಯದಲ್ಲಿ ಎಸ್ಸಿ, ಎಸ್ಟಿಗೆ ೨ ಎಕರೆ ಜಾಗವನ್ನು ಸ್ಮಶಾನಕ್ಕೆ ಮಂಜೂರು ಮಾಡಿಸಿದ್ದರು. ಸ್ಮಶಾನಕ್ಕೆ ಮಂಜೂರಾದ ಜಾಗವನ್ನು ಹೊರೆಯಾಲ ಗ್ರಾಪಂಗೂ ಹಸ್ತಾಂತರ ಮಾಡಲಾಗಿದೆ. ಅಲ್ಲದೆ ಜಾಗದಲ್ಲಿ ಸತ್ತವರ ಹೆಣ ಹೂಳುತ್ತ ಬರಲಾಗಿದೆ ಎಂದು ದೂರಿನಲ್ಲಿ ಸಮಿತಿ ಅಧ್ಯಕ್ಷ ಕಂದೇಗಾಲ ಎಂ.ಶಿವಣ್ಣ, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಒತ್ತಿ ಹೇಳಿದ್ದಾರೆ.

ದೂರಿನಲ್ಲಿ ಏನಿದೆ?:

ದಲಿತರ ಸ್ಮಶಾನದ ಜಾಗದ ಬಳಿ ಗುತ್ತಿಗೆ ಸಂಖ್ಯೆ ೧೫೦ ಹಾಗೂ ೧೫೩ ರಲ್ಲಿ ಗಣಿಗಾರಿಕೆ ಮಾಡುತ್ತ ಬಂದಿದ್ದಾರೆ. ಸಾರ್ವಜನಿಕ ಸ್ಥಳದಿಂದ ೨೦೦ ಮೀಟರ್‌ ಸುತ್ತಳತೆ ಜಾಗ ಬಿಡಬೇಕು ಎಂಬ ನಿಯಮ ಸೇರಿ ಎಲ್ಲಾ ನಿಯಮ ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸುತ್ತ ಬಂದ ಬಳಿಕ ಕಳೆದ ೨೦೨೩ ರ ಡಿ.೧೧ ರಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಗಣಿಗಾರಿಕೆ ಸ್ಥಗಿತಕ್ಕೆ ಆದೇಶ ನೀಡಿದ ಬಳಿಕ ಗಣಿಗಾರಿಕೆ ನಿಂತಿದೆ.

ಗುತ್ತಿಗೆ ಸಂಖ್ಯೆ ೧೫೦ ಮತ್ತು ೧೫೩ ಲೀಸ್‌ದಾರರ ಪ್ರಕಾರ ಬ್ಯಾಂಕಿನಿಂದ ೧.೫ ಕೋಟಿ ಸಾಲವಿದೆ. ೭೦ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ ಎಂದು ಸುಳ್ಳು ಪತ್ರಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕೊಟ್ಟಿದ್ದಾರೆ. ಈ ಬಗ್ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಇಬ್ಬರು ಲೀಸ್‌ದಾರರ ಒತ್ತಡಕ್ಕೋ ಅಥವಾ ಆಮಿಷಕ್ಕೋ ಬಲಿಯಾಗಿ ಸ್ಥಗಿತಗೊಂಡ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ್ದಾರೆ.

ಮನವಿಯ ಮಹಾಪೂರ:

ದಲಿತ ಸ್ಮಶಾನದ ಬಳಿಕ ಗಣಿಗಾರಿಕೆ ಬೇಡ ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು, ಉಪ ವಿಭಾಗಾಧಿಕಾರಿ, ತಹಸೀಲ್ದಾರ್‌ಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ತಹಸೀಲ್ದಾರ್‌ ಎರಡು ಲೀಸ್‌ಗಳನ್ನು ರದ್ದು ಪಡಿಸುವಂತೆ ಮೇಲಾಧಿಕಾರಿಗಳಿಗೆ ಪತ್ರ ಕೂಡ ಬರೆದಿದ್ದಾರೆ. ಅಲ್ಲದೆ ಲೀಸ್‌ ದಾರರು ಕೋಟ್ಯಾಂತರ ರಾಜಧನ ಕಟ್ಟಿಲ್ಲ. ಆದರೂ ಗಣಿಗಾರಿಕೆಗೆ ಜಂಟಿ ಸರ್ವೇ ನಡೆಸದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅನುಮತಿ ನೀಡಿದೆ.