ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ (ಐ.ಸಿ.ಎ.ಆರ್.) ಸಹಯೋಗದಲ್ಲಿ ಶನಿವಾರ ಹಾಗೂ ಭಾನುವಾರ ಆಯೋಜಿಸಿದ್ದ ‘ಸಹ್ಯಾದ್ರಿ ಕೃಷಿ ಸಂತೆ’ಗೆ ರೈತರು ಮತ್ತು ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಕೃಷಿ ವಿಜ್ಞಾನ ಕೇಂದ್ರದ (ಐ.ಸಿ.ಎ.ಆರ್.) ಸಹಯೋಗದಲ್ಲಿ ಶನಿವಾರ ಹಾಗೂ ಭಾನುವಾರ ಆಯೋಜಿಸಿದ್ದ ‘ಸಹ್ಯಾದ್ರಿ ಕೃಷಿ ಸಂತೆ’ಗೆ ರೈತರು ಮತ್ತು ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.

ರೈತರಿಗೆ ಮತ್ತು ಕೃಷಿ ಆಸಕ್ತರಿಗೆ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳ ಸಂಪೂರ್ಣ ಮಾಹಿತಿ, ಉತ್ತಮ ಗುಣಮಟ್ಟದ ಬೀಜಗಳು, ಸಸಿಗಳು ಮತ್ತು ಕೃಷಿ ಪರಿಕರಗಳನ್ನು ಒಂದೇ ಸೂರಿನಡಿ ಒದಗಿಸುವ ನಿಟ್ಟಿನಲ್ಲಿ ಈ ಸಂತೆಯು ಅತ್ಯಂತ ಉಪಯುಕ್ತ ವೇದಿಕೆಯಾಗಿ ಮೂಡಿಬಂದಿದೆ. ಗೃಹಿಣಿಯರು ಅಲಂಕಾರಿಕ ಗಿಡಗಳು, ಹೂವಿನ ಸಸಿಗಳು ಹಾಗೂ ಸಣ್ಣ ಪ್ರಮಾಣದ ಉಪಕರಣಗಳನ್ನು ಉತ್ಸಾಹದಿಂದ ಖರೀದಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

40 ರಿಂದ 45 ಲಕ್ಷ ವಹಿವಾಟು: ಸಂತೆಯಲ್ಲಿ ಜರುಗಿದ ಸುಮಾರು 25 ರಿಂದ 30 ನರ್ಸರಿ ಮಳಿಗೆಗಳಲ್ಲಿ ಹಣ್ಣು, ತರಕಾರಿ, ಕಸಿ ಗಿಡಗಳು, ಹೂವು ಹಾಗೂ ಔಷಧೀಯ ಸಸ್ಯಗಳು ಸಹಿತ ಸುಮಾರು 50 ರಿಂದ 60 ಸಾವಿರ ಸಸಿಗಳು ಮಾರಾಟವಾಗಿವೆ. ಇದರಿಂದ ಸುಮಾರು 40 ರಿಂದ 45 ಲಕ್ಷ ರು. ಭರ್ಜರಿ ವಹಿವಾಟು ನಡೆದಿರುವುದು ನರ್ಸರಿ ಮಾಲೀಕರಲ್ಲಿ ಸಂತಸ ಮೂಡಿಸಿದೆ.

ಸಂತೆಯ ಪ್ರಮುಖ ಆಕರ್ಷಣೆಗಳು:ಕೃಷಿ ಮತ್ತು ತೋಟಗಾರಿಕೆ ಉಪಕರಣಗಳು, ಜೈವಿಕ ಹಾಗೂ ಸಾವಯವ ಗೊಬ್ಬರಗಳು, ಮೌಲ್ಯವರ್ಧಿತ ಮತ್ತು ಸಂಸ್ಕರಿತ ಆಹಾರ ಉತ್ಪನ್ನಗಳ ಮಳಿಗೆಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದವು. ಮಲೆನಾಡಿನ ಸಾಂಪ್ರದಾಯಿಕ ವಿಶೇಷ ಖಾದ್ಯವಾದ ‘ತೊಡೆದೇವು’ ಸಂತೆಯ ಪ್ರಮುಖ ಆಕರ್ಷಣೆಯಾಗಿತ್ತು. ನಂಜುವಳ್ಳಿ ಗ್ರಾಮದ ಗುರುರಾಜ್‌ ತಯಾರಿಸಿದ 4,000ಕ್ಕೂ ಹೆಚ್ಚು ತೊಡೆದೇವು ಖಾದ್ಯಗಳು ಮಾರಾಟವಾಗಿದ್ದು, ಸುಮಾರು 70,000 ರು.ಆದಾಯ ತಂದುಕೊಟ್ಟಿದೆ.

ಸಂತೆಯ ಭಾಗವಾಗಿ ಸಾರ್ವಜನಿಕರು ಹಾಗೂ ರೈತರು ಕೃಷಿ ವಿಜ್ಞಾನ ಕೇಂದ್ರದ ಪ್ರಾತ್ಯಕ್ಷಿಕ ತಾಕುಗಳು, ಜೇನು ಪಾರ್ಕ್, ಸಮಗ್ರ ಕೃಷಿ ಪದ್ಧತಿ ಘಟಕ, ಮೀನುಗಾರಿಕೆ, ಕುರಿ ಸಾಗಾಣಿಕೆ ಹಾಗೂ ''''''''ಕೃಷಿ ಯಾನ'''''''' ಪ್ರವಾಸೋದ್ಯಮ ವಿಭಾಗಗಳಿಗೆ ಭೇಟಿ ನೀಡಿದರು. ಮೊದಲ ದಿನ 28,000ಕ್ಕೂ ಹೆಚ್ಚು ಹಾಗೂ ಎರಡನೇ ದಿನ ಸೇರಿ ಒಟ್ಟಾರೆಯಾಗಿ ಸುಮಾರು 50,000ಕ್ಕೂ ಹೆಚ್ಚು ಸಾರ್ವಜನಿಕರು ಮತ್ತು ರೈತರು ಈ ಕೃಷಿ ಸಂತೆಯ ಪ್ರಯೋಜನ ಪಡೆದುಕೊಂಡರು.