ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಹಾಸನದ ಪಡವಲಹಿಪ್ಪೆ ಹೊಳೆನರಸೀಪುರ ಎಚ್.ಡಿ.ದೇವೇಗೌಡ ಪ್ರಥಮ ದರ್ಜೆ ಕಾಲೇಜು ಸ್ನಾತ್ತಕೋತ್ತರ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಂದ ಸಮೀಪದ ಮಾಲಂಬಿ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲಾ ಆವರಣದಲ್ಲಿ 10 ದಿನದ ಗ್ರಾಮೀಣ ಸಮಾಜ ಸೇವಾ ಶಿಬಿರವು ನಡೆಯುತ್ತಿದೆ. ಮಂಗಳವಾರ ನಡೆದ ಸಂಪನ್ಮೂಲ ಮಾಹಿತಿ ಕಾರ್ಯಕ್ರಮವನ್ನು ಸಂಪನ್ಮೂಲ ವ್ಯಕ್ತಿ ಪತ್ರಕರ್ತ ಸುರೇಶ್ ಚೆರಿಯಮನೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು -ಪದವಿ ಮತ್ತು ಸ್ನಾತ್ತಕೋತ್ತರ ವಿದ್ಯಾರ್ಥಿಗಳು ಕೇವಲ ತಾನು ತೆಗೆದುಕೊಂಡಿರುವ ಐಚ್ಛಿಕ ವಿಷಯಗಳನ್ನು ಮಾತ್ರ ತಿಳಿದುಕೊಂಡರೆ ಸಾಲದು ಕಲಾ, ವಾಣಿಜ್ಯ, ವಿಜ್ಞಾನ ಮಾಹಿತಿ ತಂತ್ರಜ್ಞಾನ ಸೇರಿದಂತೆ ಪ್ರತಿಯೊಂದು ವಿಷಯದ ಬಗ್ಗೆ ಕನಿಷ್ಠ ಅರಿವು ಹೊಂದಿರಬೇಕು. ಈ ನಿಟ್ಟಿನಲ್ಲಿ ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳಿವೆ ಎಂದರು. ರಾಷ್ಟ್ರೀಯ ಸೇವಾ ಶಿಬಿರದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಮೌಲ್ಯಗಳ ಅನುಭವ ಪಡೆದುಕೊಂಡರೆ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಸಮಾಜ ಸೇವಾ ಶಿಬಿರದಿಂದ ಕರ್ತವ್ಯದ ತರಬೇತಿ ಪಡೆದುಕೊಂಡಂತೆ ಅನುಭವವಾಗುತ್ತದೆ. ಗ್ರಾಮೀಣ ಭಾಗದಲ್ಲಿ ಜನರ ಕಷ್ಟ, ಸಮಸ್ಯೆ ಮುಂತಾದವುಗಳ ಬಗ್ಗೆ ತಿಳಿದುಕೊಳ್ಳಬಹುದು ಈ ನಿಟ್ಟಿನಲ್ಲಿ ಜನರು ಸಹ ವಾಕ್ಸ್ವತಂತ್ರವನ್ನು ಹಕ್ಲಿನ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಪ್ರಶ್ನೆ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಇದರಿಂದ ಸಮಾಜ ಮತ್ತು ದೇಶದ ಅಭಿವೃದ್ದಿಗೆ ಪೂರಕವಾಗುತ್ತದೆ ಎಂದರು.ಮಾಜಿ ಗ್ರಾ.ಪಂ.ಅಧ್ಯಕ್ಷ ಎಂ.ಇ.ವೆಂಕಟೇಶ್ ಮಾತನಾಡಿ-ಗ್ರಾಮೀಣ ಪ್ರದೇಶದ ಅಭಿವೃದ್ದಿಗೆ ಮತ್ತು ಬುಡಕಟ್ಟು ಜನರ ಅಭಿವೃದ್ದಿ ಹಿತದೃಷ್ಟಿಯಿಂದ ಮಾಲಂಬಿ ಗ್ರಾಮದಲ್ಲಿ ಹಾಸನದ ಸ್ನಾತ್ತಕೋತ್ತರ ಸಮಾಜಕಾರ್ಯ ವಿದ್ಯಾರ್ಥಿಗಳು ಶಿಬಿರವನ್ನು ಹಮ್ಮಿಕೊಂಡು ಸಮಾಜ ಸೇವಾ ಕಾರ್ಯ ಮಾಡುತ್ತಿರುವುದು ಶ್ಲಾಘನಿಯ ಎಂದರು.
ವೇದಿಕೆಯಲ್ಲಿ ಪ್ರಮುಖರಾದ ಮಣಿ, ಗಿರೀಶ್, ಎಚ್.ಎಸ್.ಸುರೇಶ್, ಬಬು, ರಕ್ಷಿತಾ ಯೋಗೇಂದ್ರ, ಸಮಾಜಕಾರ್ಯ ವಿಭಾಗದ ಶಿಬಿರ ಸಂಯೋಜನಾಧಿಕಾರಿ ಡಾ.ಎಚ್.ಎನ್.ದೀಪ್, ಉಪನ್ಯಾಸಕರಾದ ವೆಂಕಟೇಶ್, ರೇಖಾಶ್ರೀ ವಿದ್ಯಾರ್ಥಿ ಪ್ರಮುಖರಾದ ಸಂಜನಾ, ಪೃಥ್ವಿ, ಪೂರ್ವಿಕಾ, ಅಭಿ, ಸಮರ್ಥ ಮುಂತಾದವರು ಇದ್ದರು. ನಂತರ ವಿದ್ಯಾರ್ಥಿಗಳಿಂದ ಮತ್ತು ಗ್ರಾಮಸ್ಥರಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.