ಸಾರಾಂಶ
ನಾಗಮಂಗಲ : ಸಂವಿಧಾನ ಹಿಡಿತದಲ್ಲಿರುವ ರಾಜ್ಯಪಾಲರನ್ನು ಬಿಜೆಪಿ - ಜೆಡಿಎಸ್ ನಾಯಕರು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ದೂರಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕುರಿತಂತೆ ಸುದ್ದಿಗಾರರೊಂದಿಗೆ ಅವರು, ಇದು ಕಾನೂನು ಬಾಹಿರವಾದ ಪ್ರಾಸಿಕ್ಯೂಷನ್ ಆಗಿದೆ. ಬಿಜೆಪಿಯ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ ಹಾಗೂ ಮಾಜ ಸಿಎಂ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಸಂವಿಧಾನ ಬದ್ಧವಾಗಿ ತನಿಖೆಯಾಗಿ ಕ್ರಮ ತೆಗೆದುಕೊಳ್ಳಲು ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಆದರೆ, ಅದಕ್ಕೆ ಏಕೆ ಅನುಮತಿ ನೀಡಿಲ್ಲ ಎಂದು ಪ್ರಶ್ನಿಸಿದರು.
ಯಾವುದೇ ತನಿಖೆಯೂ ನಡೆದಿಲ್ಲ. ಅಲ್ಲದೇ ಯಾವ ಅಧಿಕಾರಿ ಅಥವಾ ಕನಿಷ್ಠ ಡೀಸಿ, ಎಸಿ, ಲೋಕಾಯುಕ್ತ ಸಂಸ್ಥೆ ಪ್ರಾಸಿಕ್ಯೂಷನ್ ಕೇಳಬೇಕು. ಆದರೆ, ಯಾರೋ ಒಬ್ಬ ಹೊರಗಿನವರು ಕೇಳಿದರೂ ಎಂಬ ಕಾರಣಕ್ಕೆ ಹಿಂದುಳಿದ ನಾಯಕ, ದೇವರಾಜ ಅರಸು ಹಾದಿಯಲ್ಲಿ ಒಂದು ಕಪ್ಪುಚುಕ್ಕೆ ಇಲ್ಲದೆ ಕೆಲಸ ಮಾಡುತ್ತಿರುವ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ಸಂವಿಧಾನ ಹುದ್ದೆಯನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಪಕ್ಷ 136 ಸ್ಥಾನಗಳನ್ನು ಗೆದ್ದು ಸಂಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಇದನ್ನು ನೋಡಿ ವಿಪಕ್ಷ ನಾಯಕರಿಗೆ ಹೊಟ್ಟೆ ಉರಿ ಬಂದಿದೆ. ನಾವು ಯಾವುದಕ್ಕೂ ಸೊಪ್ಪು ಹಾಕಲ್ಲ. ಬೆಲೆ ಕೊಡಲ್ಲ. ಯಾವ ಕಾರಣ ನೋಡಿ ಪ್ರಾಸಿಕ್ಯೂಷನ್ ನೀಡಲು ಅಧಿಕಾರವಿದೆಯೇ ಎಂದು ಕೇಳಿ ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ. ಈ ಬಗ್ಗೆ ನ್ಯಾಯಾಲಯದಲ್ಲೂ ಪ್ರಶ್ನೆ ಮಾಡುತ್ತೇವೆ ಎಂದರು.