ಸಾರಾಂಶ
- ಎಂಸಿಸಿ ಎ ಬ್ಲಾಕ್ ದೇವಸ್ಥಾನ ಬಗ್ಗೆ ಸಂಘ-ಸಂಸ್ಥೆ, ಭಕ್ತರ ದೂರು - ಜಿಲ್ಲಾಧಿಕಾರಿ ಸೂಚನೆ ಮೇರೆಗೆ ದೇಗುಲಕ್ಕೆ ಭೇಟಿ ನೀಡಿ ಪರಿಶೀಲನೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸುವಂತೆ ಭಕ್ತರ ದೂರು, ಮನವಿಗಳ ಮೇರೆಗೆ ಉಪ ವಿಭಾಗಾಧಿಕಾರಿ ಸಂತೋಷ ಹಾಗೂ ಸಿಬ್ಬಂದಿ ಮಂಗಳವಾರ ದೇಗುಲಕ್ಕೆ ಭೇಟಿ ನೀಡಿ, ಪರಿಶೀಲಿಸಿದರು.
ನಗರದ ಎಂಸಿಸಿ ಬಿ ಬ್ಲಾಕ್ನಲ್ಲಿ ನಾಗರೀಕರ ಸೇವಾ ನಿವೇಶನದಲ್ಲಿ ನಿರ್ಮಿಸಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನ 1985ರಲ್ಲಿ ಶಂಕುಸ್ಥಾಪನೆಯಾಗಿ, 1991ರಲ್ಲಿ ಉದ್ಘಾಟನೆಯಾಗಿದೆ. ಸಿಎ ನಿವೇಶನದಲ್ಲಿರುವ ಶ್ರೀ ವೈಷ್ಣವ ಸಭಾ ಎಂಬವರಿಗೆ ಹಾಸ್ಟೆಲ್ ಸ್ಥಾಪಿಸಲು ಮಂಜೂರಾಗಿದ್ದ 80-100 ಅಡಿ ಜಾಗ ಇದಾಗಿದೆ. ಇದೇ ಸ್ಥಳದಲ್ಲಿ ದೇವಸ್ಥಾನ ನಿರ್ಮಿಸಿದ್ದ ಬಗ್ಗೆ ಮುಜುರಾಯಿ ಇಲಾಖೆಗೆ ಸಾರ್ವಜನಿಕರ ಅಭಿವೃದ್ಧಿ ಸಮಿತಿ ಹಾಗೂ ನೂರಾರು ಭಕ್ತರು ಲಿಖಿತ ರೂಪದಲ್ಲಿ ದೂರು ನೀಡಿದ್ದರು.ಶ್ರೀ ವೈಷ್ಣವ ಸಭಾ ಮತ್ತು ಸಾರ್ವಜನಿಕ ಭಕ್ತರು 1991ರಲ್ಲಿ ದೇಗಲ ಸ್ಥಾಪಿಸಿ, ಮುನ್ನಡೆಸಿಕೊಂಡು ಬಂದಿದ್ದರು. ದೇವಸ್ಥಾನ ಉದ್ಘಾಟನೆಯಾದ 2 ವರ್ಷದ ನಂತರ ಸಂಘದ ಸಮಿತಿ ಸದಸ್ಯರನ್ನು ವೈಷ್ಣವ ಸಮಾಜದಿಂದ ಹೊರಹಾಕಿ, ದೇವಸ್ಥಾನದ ಆಡಳಿತವನ್ನು ಗೌರವ ಕಾರ್ಯದರ್ಶಿ ನರಸಿಂಹ ಅಯ್ಯಂಗಾರ್ ನಡೆಸಿಕೊಂಡು ಬರುತ್ತಿದ್ದರು. ನರಸಿಂಹ ಅಯ್ಯಂಗಾರ್ ನಿಧನದ ನಂತರ ಲೆಕ್ಕ ಪರಿಶೋಧಕ ಎಂ.ಎನ್. ರಾಮಮೋಹನ್ ಒಬ್ಬರೇ ದೇವಸ್ಥಾನ ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಭಕ್ತರು ತಿಳಿಸಿದ್ದರು.
ದೇವಸ್ಥಾನಕ್ಕೆ ಕಾಣಿಕ ರೂಪದಲ್ಲಿ ಭಕ್ತರಿಂದ ಬರುವಂತಹ ಕೋಟ್ಯಂತರ ರು. ನಗದು, ಚಿನ್ನ, ಬೆಳ್ಳಿ ಆಭರಣ, ವಸ್ತುಗಳು, ವಜ್ರ ವೈಢೂರ್ಯಗಳನ್ನು ಯಾರ ಗಮನಕ್ಕೂ ತರುತ್ತಿಲ್ಲ. ದೇವಸ್ಥಾನ ಆಡಳಿತ ಮಂಡಳಿಯಲ್ಲಿ ಅಧಿಕಾರ ನಡೆಸುತ್ತಿರುವ ಒಬ್ಬರೇ ವ್ಯಕ್ತಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಭಕ್ತರ ಕಾಣಿಕೆ ಹಣ, ದೇವಸ್ಥಾನದ ಆದಾಯ ಮತ್ತು ಹಣ, ಒಡವೆಗಳ ಮಾಹಿತಿ, ಲೆಕ್ಕವನ್ನು ಸಾರ್ವಜನಿಕರು, ಭಕ್ತರ ಗಮನಕ್ಕೆ ತಾರದೇ, ಎಲ್ಲವನ್ನೂ ತಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದಾರೆ. ಇದು ಸಾಕಷ್ಟು ಗೊಂದಲಕ್ಕೂ ಕಾರಣವಾಗಿದೆ ಎಂಬುದು ಭಕ್ತರ ಆಕ್ಷೇಪ.ವೈಕುಂಠ ಏಕಾದಶಿ ಕಾರ್ಯಕ್ರಮದಂದು ಒಂದೇ ದಿನ ದೇಣಿಗೆ, ಕಾಣಿಕೆ ರೂಪದಲ್ಲಿ ₹25 ಲಕ್ಷಕ್ಕೂ ಅಧಿಕ ಆಹಾರ ಧಾನ್ಯಗಳು, ಇತರೆ ಸೇವೆ ರೂಪದಲ್ಲಿ ವಸ್ತುಗಳು ಬಂದಿದ್ದವು. ಭಕ್ತರಿಗೆ ದೇವಸ್ಥಾನದಲ್ಲಿ ಯಾವುದೇ ತರಹದ ಪ್ರಸಾದವನ್ನು ಸಹ ಕೊಡದೇ ಕಡೆಗಣಿಸಲಾಗುತ್ತಿದೆ. ನಾಗರೀಕ ಸೇವಾ ನಿವೇಶನ ತಮ್ಮ ಸ್ವಂತ ಜಾಗವೆಂದು ಭಕ್ತರು, ಸಾರ್ವಜನಿಕರಿಗೆ ಬಿಂಬಿಸಿ, ದೇವರ ಹೆಸರಿನಲ್ಲಿ ವಂಚನೆ ಮಾಡಲಾಗುತ್ತಿದೆ. ಸರ್ಕಾರಿ ನಿವೇಶನ ಆಗಿದ್ದರಿಂದ ದೇವಸ್ಥಾನವನ್ನು ಮುಜರಾಯಿ ಇಲಾಖೆ ತನ್ನ ಸುಪರ್ದಿಗೆ ಪಡೆಯಬೇಕು ಎಂದು ಭಕ್ತರು ಒತ್ತಾಯಿಸಿದ್ದರು.
ಭಕ್ತರನ್ನು ಒಳಗೊಂಡಂತೆ ಸಮಿತಿ ರಚಿಸಿ, ಭಕ್ತರಿಂದ ವಂಚಿಸಿ ಪಡೆದ ಅಷ್ಟೂ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲು ಅನುಕೂಲ ಆಗುವಂತೆ ಸಮಿತಿ ರಚಿಸಬೇಕು. ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನವನ್ನು ಉಳಿಸಿಕೊಡುವಂತೆ ಸಾರ್ವಜನಿಕರ ಅಭಿವೃದ್ಧಿ ಸಮಿತಿ, ಸುಮಾರು 150ಕ್ಕೂ ಹೆಚ್ಚು ಭಕ್ತರು ಮುಜರಾಯಿ ಇಲಾಖೆಗೆ ದೂರು ನೀಡಿ, ಮನವಿ ಮಾಡಿದ್ದರು. ಮುಜರಾಯಿ ಇಲಾಖೆ ಪತ್ರದ ಹಿನ್ನೆಲೆ ದೇವಸ್ಥಾನಕ್ಕೆ ತೆರಳಿ, ಪರಿಶೀಲಿಸುವಂತೆ ಜಿಲ್ಲಾಧಿಕಾರಿ ಉಪವಿಭಾಗಾಧಿಕಾರಿಗೆ ಸೂಚನೆ ನೀಡಿದ್ದರು.- - -
-27ಕೆಡಿವಿಜಿ6, 7, 8, 9.ಜೆಪಿಜಿ:ದಾವಣಗೆರೆ ಎಂಸಿಸಿ ಬಿ ಬ್ಲಾಕ್ನ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನಕ್ಕೆ ಉಪವಿಭಾಗಾಧಿಕಾರಿ ಸಂತೋಷ ಹಾಗೂ ಸಿಬ್ಬಂದಿ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.