ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಏಕ ನಿವೇಶನ ನಕ್ಷೆ ನೀಡಲು ಲಂಚ ಪಡೆದ ಸರ್ವೇಯರ್ ಹಾಗೂ ಮಧ್ಯವರ್ತಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.ದೂರುದಾರರ ತಾಯಿ ತನ್ನ ಹೆಸರಿನಲ್ಲಿರುವ ಕಂಕನಾಡಿ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ಮಾಡಿಸಲು ಫೆಬ್ರವರಿಯಲ್ಲಿ ಮಂಗಳೂರು ಯು.ಪಿ.ಒ.ಆರ್ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ದೂರುದಾರರ ತಾಯಿಗೆ ವಯಸ್ಸಾಗಿರುವುದರಿಂದ ದೂರುದಾರರು ಮಂಗಳೂರು ಯು.ಪಿ.ಒ.ಆರ್ ಕಚೇರಿಗೆ ಹೋಗಿ ಕಡತದ ಬಗ್ಗೆ ವಿಚಾರಿಸಿದ್ದರು. ಅಲ್ಲಿನ ಸರ್ವೆಯರ್ ನಂದೀಶ್ ಅವರು ಏಪ್ರಿಲ್ನಲ್ಲಿ ಸರ್ವೆ ನಡೆಸಿ 6500 ರು. ಲಂಚದ ಹಣವನ್ನು ತಾನು ಸ್ವೀಕರಿಸಿದ್ದು, ಅದಲ್ಲದೆ 20,000 ರು. ಲಂಚದ ಹಣವನ್ನು ಮಧ್ಯವರ್ತಿ ಬಿಜೈನ ದಿವಾಕರ್ ಮೂಲಕ ಪಡೆದುಕೊಂಡಿದ್ದರು.
ಅದರ ಬಳಿಕವೂ ಸರ್ವೆಯರ್ ನಂದೀಶ್ ಅವರು ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ 18,000 ರು. ಲಂಚದ ಹಣ ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ದೂರುದಾರರು ಸಾಕ್ಷಿ ಪುರಾವೆಗಳೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಅದರಂತೆ ಸರ್ವೆಯರ್ ನಂದೀಶ್ ದೂರುದಾರರಿಂದ 15,000 ರು. ಲಂಚದ ಹಣವನ್ನು ಮಧ್ಯವರ್ತಿ ದಿವಾಕರ್ ಮೂಲಕ ಪಡೆದುಕೊಂಡಿದ್ದರು. ಬುಧವಾರ ಹೆಚ್ಚುವರಿಯಾಗಿ 2000 ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸರ್ವೆಯರ್ ನಂದೀಶ್ ದೂರುದಾರರಿಂದ ಈವರೆಗೆ ಒಟ್ಟು 43,500 ರು. ಲಂಚದ ಹಣ ಪಡೆದುಕೊಂಡಿದ್ದಾರೆ. ಸರ್ವೆಯರ್ ನಂದೀಶ್ ಮತ್ತು ದಿವಾಕರ್ ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.