ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ
ಗೋವಾ ಪ್ರವಾಸ ಮುಗಿಸಿಕೊಂಡು ವಾಪಸ್ ಬರುವ ಸಂದರ್ಭದಲ್ಲಿ ತಾಲೂಕಿನ ಕಂಬದಹಳ್ಳಿ ಸಮೀಪ ಲಾರಿ ಹಾಗೂ ಕಾರು ನಡುವೆ ಭೀಕರ ಅಪಘಾತ ಸಂಭಿವಿಸಿ ಕಾರಿನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿರುವ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ.ತಾಲೂಕಿನ ಹೊಳವನಹಳ್ಳಿ ಗ್ರಾಮದ ವಾಸಿಯಾದ ಹರ್ಷಿತ್ (೨೨) ಹಾಗೂ ಪ್ರವೀಣ್ (22) ಅಪಘಾತದಲ್ಲಿ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಹೊಳವನಹಳ್ಳಿ ಗ್ರಾಮದ ಮೂವರು ಯುವಕರು ಗೋವಾ ಪ್ರವಾಸಕ್ಕೆ ಹೋಗಿದ್ದರು, ಮೂವರಲ್ಲಿ ಓರ್ವ ಯುವಕನ ಮನೆ ಶಿರಾದಲ್ಲಿದ್ದು ಆತ ಅಲ್ಲಿಯೇ ಇಳಿದುಕೊಂಡಿದ್ದಾನೆ. ಇವರಿಗೂ ಸಹ ಅಲ್ಲಿಯೇ ಇದ್ದು ಬೆಳಿಗ್ಗೆ ಹೋಗುವಂತೆ ತಿಳಿಸಿದ್ದ. ಆದರೆ ಅಲ್ಲಿ ತಂಗಲು ಇಷ್ಟಪಡದ ಹರ್ಷಿತ್ ಹಾಗೂ ಪ್ರವೀಣ್ ಊರಿಗೆ ಹೊರಟಿದ್ದರು ಎನ್ನಲಾಗಿದೆ. ಕೊರಟಗೆರೆ ಹತ್ತಿರ ಇರುವ ಕಂಬದಹಳ್ಳಿಗೆ ಬರುತ್ತಿದ್ದಾಗ ಲಾರಿಯೊಂದು ಅಡ್ಡ ಬಂದಿದ್ದು, ವೇಗವಾಗಿ ಬರುತ್ತಿದ್ದ ಕಾರು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪ್ರವೀಣ್ ಸ್ಥಳದಲ್ಲಿಯೇ ಮೃತಪಟ್ಟರೆ ಹರ್ಷೀತ್ ಜೀವ ಇದ್ದ ಕಾರಣ ಸ್ಥಳೀಯರು ಆಂಬ್ಯುಲೆನ್ಸ್ ಕರೆಸಿ ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಿದ್ದಾರೆ. ಮಾರ್ಗದ ಮಧ್ಯೆ ಯುವಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಕೊರಟಗೆರೆ ಹೆಚ್ಚುವರಿ ಪೊಲೀಶ್ ಅಧೀಕ್ಷಕರು ಮಹಮದ್ ಖಾದರ್ ಸಿಪಿಐ ಅನಿಲ್ ಪಿಎಸ್ಐ ಚೇತನ್ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.