ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಜೋಳದ ಕಡ್ಡಿಗೆ ಆಕಸ್ಮಿಕ ಬೆಂಕಿ

| Published : Jun 08 2025, 01:55 AM IST

ಟ್ರ್ಯಾಕ್ಟರ್‌ನಲ್ಲಿ ಸಾಗಿಸುತ್ತಿದ್ದ ಜೋಳದ ಕಡ್ಡಿಗೆ ಆಕಸ್ಮಿಕ ಬೆಂಕಿ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು: ಪಟ್ಟಣದ ಆರ್‌ಎಸ್ ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಹೋಗುತ್ತಿದ್ದ ಜೋಳದ ಕಡ್ಡಿಗೆ ಆಕಸ್ಮಿಕ ಬೆಂಕಿ ಬಿದ್ದದ್ದು, ಅದೇ ರಸ್ತೆಯಲ್ಲಿ ಬರುತ್ತಿದ್ದ ಹನೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆನಂದಮೂರ್ತಿ ವಿಚಾರ ತಿಳಿದು ಮುಂದೆ ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ಹನೂರು: ಪಟ್ಟಣದ ಆರ್‌ಎಸ್ ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಹೋಗುತ್ತಿದ್ದ ಜೋಳದ ಕಡ್ಡಿಗೆ ಆಕಸ್ಮಿಕ ಬೆಂಕಿ ಬಿದ್ದದ್ದು, ಅದೇ ರಸ್ತೆಯಲ್ಲಿ ಬರುತ್ತಿದ್ದ ಹನೂರು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಆನಂದಮೂರ್ತಿ ವಿಚಾರ ತಿಳಿದು ಮುಂದೆ ಆಗಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿಸಿದ್ದಾರೆ.

ತಾಲೂಕಿನ ಚಿಂಚಳ್ಳಿ ಗ್ರಾಮದ ರವಿ ಟ್ರ್ಯಾಕ್ಟರ್‌ನಲ್ಲಿ ಆರ್‌ಎಸ್ ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆ ಜೋಳದ ಕಡ್ಡಿಯನ್ನು ತುಂಬಿಕೊಂಡು ಹೋಗುತ್ತಿದ್ದಾಗ ಎಡಳ್ಳಿದೊಡ್ಡಿ ಗ್ರಾಮದ ಸಮೀಪ ಜೋಳದ ಕಡ್ಡಿಗೆ ಆಕಸ್ಮಿಕವಾಗಿ ಬೆಂಕಿ ಹತ್ತಿಕೊಂಡಿದೆ. ಇದು ಟ್ರ್ಯಾಕ್ಟರ್‌ ಚಾಲಕನ ಗಮನಕ್ಕೆ ಬರದೆ ಹಾಗೆ ಹೋಗುತ್ತಿದ್ದಾಗ ಬಂಡಳ್ಳಿ ಗ್ರಾಮದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಬಂದೋಬಸ್ತ್ ಮುಗಿಸಿ ವಾಪಸ್ ಹನೂರು ಪಟ್ಟಣಕ್ಕೆ ಆಗಮಿಸುತ್ತಿದ್ದಾಗ ಇನ್ಸ್‌ಪೆಕ್ಟರ್ ಆನಂದಮೂರ್ತಿ ಜೋಳದ ಕಡ್ಡಿಗೆ ಬೆಂಕಿ ಹತ್ತಿಕೊಂಡಿರುವುದನ್ನು ಗಮನಿಸಿದ್ದಾರೆ.

ಕೂಡಲೇ ಆನಂದಮೂರ್ತಿ ಓಡಿ ಹೋಗಿ ಟ್ರ್ಯಾಕ್ಟರ್ ನಿಲ್ಲಿಸಿ ಕೂಲಿ ಕಾರ್ಮಿಕರಾದ ಬಸವಣ್ಣ, ಮಹದೇವಸ್ವಾಮಿ, ಸಿದ್ದಪ್ಪರನ್ನು ಕೆಳಗಿಳಿಸಿದ್ದಾರೆ. ಟ್ರ್ಯಾಕ್ಟರ್‌ ಓಡಿಸುತ್ತಿದ್ದ ರವಿ ಸ್ವಲ್ಪ ಮುಂದೆ ಹೋಗಿ ಜೋಳದ ಕಡ್ಡಿಯನ್ನು ಕೆಳಗೆ ಸುರಿದು ಟ್ರ್ಯಾಕ್ಟರ್ ಮುಂದೆ ನಿಲ್ಲಿಸಿದ್ದಾರೆ. ಅಷ್ಟರಲ್ಲಿ ಜೋಳದ ಕಡ್ಡಿ ಸಂಪೂರ್ಣ ಉರಿದು ಕರಕಲಾಗಿತ್ತು. ಜೊತೆಗೆ ಟ್ರ್ಯಾಕ್ಟರ್ ನಲ್ಲಿ ಜೋಳದ ಕಡ್ಡಿ ತುಂಬಲು ಅಳವಡಿಸಿದ್ದ ಮರಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಇನ್ಸ್‌ಪೆಕ್ಟರ್ ಆನಂದಮೂರ್ತಿ ಸಮಯಪ್ರಜ್ಞೆಯಿಂದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜೋಳದ ಕಡ್ಡಿ ಸುಟ್ಟು ಭಸ್ಮವಾಗಿರುವುದರಿಂದ ಸುಮಾರು 6 ಸಾವಿರಕ್ಕೂ ಹೆಚ್ಚು ರು. ನಷ್ಟವಾಗಿದೆ.

ಟ್ರ್ಯಾಕ್ಟರ್ ಮಾಲಿಕ ರವಿ ಮಾತನಾಡಿ, ಚಿಂಚಳ್ಳಿ ಗ್ರಾಮಕ್ಕೆ ಆರ್‌ಎಸ್ ದೊಡ್ಡಿ ಗ್ರಾಮದಿಂದ ಜೋಳದ ಕಡ್ಡಿ ತುಂಬಿಕೊಂಡು ಬರುವಾಗ ಆಕಸ್ಮಿಕ ಬೆಂಕಿ ಹತ್ತಿಕೊಂಡಿದೆ. ಆದರೆ ಇದು ನಮಗೆ ಗೊತ್ತಿರಲಿಲ್ಲ, ಇನ್ಸ್‌ಪೆಕ್ಟರ್ ಆನಂದ್ ಮೂರ್ತಿಯವರು ನಮ್ಮನ್ನು ತಡೆದು ಪ್ರಾಣಾಪಾಯವಾಗದಂತೆ ಸಹಕರಿಸಿದರು. ಜೊತೆಗೆ ಟ್ರ್ಯಾಕ್ಟರ್ ಗೆ ಯಾವುದೇ ಹಾನಿಯಾಗಿಲ್ಲ, ನನ್ನ ಜೀವ ಉಳಿಸಿದ್ದಾರೆ ಅವರಿಗೆ ಸದಾ ಚಿರಋಣಿಯಾಗಿರುತ್ತೇನೆ ಎಂದರು.

ಕೋಟ್‌..............

ಬಂಡಳ್ಳಿ ಗ್ರಾಮದಲ್ಲಿ ಬಕ್ರೀದ್ ಬಂದೋಬಸ್ತ್ ಮುಗಿಸಿ ಠಾಣೆಗೆ ಆಗಮಿಸುತ್ತಿದ್ದಾಗ ಟ್ರ್ಯಾಕ್ಟರ್‌ನಲ್ಲಿ ತುಂಬಿಕೊಂಡು ಬರುತ್ತಿದ್ದ ಜೋಳದ ಕಡ್ಡಿಗೆ ಬೆಂಕಿ ಬಿದ್ದು ಹೊತ್ತಿಕೊಂಡು ಉರಿಯುತ್ತಿತ್ತು. ಟ್ರ್ಯಾಕ್ಟರ್‌ ಚಾಲಕನ ಗಮನಕ್ಕೆ ಬರದೆ ಮುಂದೆ ಸಾಗುತ್ತಿದ್ದರು. ಇದನ್ನು ಗಮನಿಸಿ ಎಲ್ಲರನ್ನು ಕೆಳಗಿಳಿಸಿದ್ದು, ಅದೃಷ್ಟವಶಾತ್‌ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

-ಆನಂದ ಮೂರ್ತಿ, ಇನ್ಸ್‌ಪೆಕ್ಟರ್, ಹನೂರು ಪೊಲೀಸ್ ಠಾಣೆ

7ಸಿಎಚ್ಎನ್‌13

ಹನೂರು ತಾಲೂಕಿನ ಚಿಂಚಳ್ಳಿ ಗ್ರಾಮದ ರವಿಯವರು ಟ್ರ್ಯಾಕ್ಟರ್ ನಲ್ಲಿ ಆರ್‌ಸ್ ದೊಡ್ಡಿ ಗ್ರಾಮದಿಂದ ಚಿಂಚಳ್ಳಿ ಗ್ರಾಮಕ್ಕೆ ಜೋಳದ ಕಡ್ಡಿ ತುಂಬಿಕೊಂಡು ಹೋಗುತ್ತಿದ್ದಾಗ ಎಡಳ್ಳಿ ದೊಡ್ಡಿ ಗ್ರಾಮದ ಸಮೀಪ ಜೋಳದ ಕಡ್ಡಿಗೆ ಬೆಂಕಿ ಹತ್ತಿಕೊಂಡಿದೆ.