ಬಿ ಖಾತೆ: ಸಮಿತಿ ವರದಿ ಬಂದ ಬಳಿಕ ಕ್ರಮ

| Published : Dec 14 2023, 01:30 AM IST

ಸಾರಾಂಶ

ಬಿ ಖಾತೆ: ಸಮಿತಿ ವರದಿ ಬಂದ ಬಳಿಕ ಕ್ರಮಕುಂದುಕೊರತೆ ಸಭೆಯಲ್ಲಿ ಜಿಪಂ ಸಿಇಒ ಪದ್ಮ ಬಸವಂತಪ್ಪ ಭರವಸೆ

ಕುಂದುಕೊರತೆ ಸಭೆಯಲ್ಲಿ ಜಿಪಂ ಸಿಇಒ ಪದ್ಮ ಬಸವಂತಪ್ಪ ಭರವಸೆ

ಕೋಲಾರ

ಕನ್ನಡಪ್ರಭ ವಾರ್ತೆ ಕೆಜಿಎಫ್

ಜಿಪಂ ಸಿಇಓ ಪದ್ಮ ಬಸವಂತಪ್ಪ ಅಧ್ಯಕ್ಷತೆಯಲ್ಲಿ ಬೇತಮಂಗಲ ಹೋಬಳಿಯ ೭ ಗ್ರಾಪಂ ವ್ಯಾಪ್ತಿಯ ನಾಗರಿಕರ ಕುಂದುಕೊರತೆ ಸಭೆ ಬೇತಮಂಗಲದ ಕಲ್ಯಾಣ ಮಂದಿರದಲ್ಲಿ ನಡೆಯಿತು.

ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ, ಸಭೆಗೆ ಸಾರ್ವಜನಿಕರಿಗಿಂತ ಹೆಚ್ಚಾಗಿ ಗ್ರಾಪಂ ಅಧ್ಯಕ್ಷರು, ಸದಸ್ಯರು ಮುಂದಾಗಿದ್ದು ವಿಶೇಷವಾಗಿತ್ತು. ಬೇತಮಂಗಲ ಗ್ರಾಪಂ ಅಧ್ಯಕ್ಷ ವೀನುಕಾರ್ಥಿಕ್ ಹಾಗೂ ಸದಸ್ಯ ಗಣೇಶ್ ಮಾತನಾಡಿ, ಬೇತಮಂಗಲ ಗ್ರಾಮದಲ್ಲಿನ ಕಸವನ್ನು ವಿಲೇವಾರಿ ಮಾಡಲು ಜಮೀನು ನೀಡುವಂತೆ ಕೋರಿದರು.

ಜಲಜೀವನ್‌ ಕಾಮಗಾರಿ ಸ್ಥಗಿತ

ಕಮಸಂದ್ರ ಗ್ರಾಪಂ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ನಾಗರಾಜ್ ಉಪಾಧ್ಯಕ್ಷ ದಾಮೋದರರೆಡ್ಡಿ, ಕಮ್ಮಸಂದ್ರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ನಾಗಶೆಟ್ಟಿಹಳ್ಳಿ ಗ್ರಾಮವನ್ನು ಜನಜೀವನ್ ಯೋಜನೆಯಡಿ ಕಾಮಗಾರಿ ಪ್ರಾರಂಭ ಮಾಡಿ ಒಂದು ವರ್ಷ ಕಳೆದರು ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ ಮತ್ತು ಮೃತ ಶವಗಳನ್ನು ಹೂಳಲು ಸ್ಮಶಾನಗಳಿಲ್ಲ ಸರ್ಕಾರಿ ಜಮೀನು ಗುರುತಿಸಿಕೊಡುವಂತೆ ಮನವಿ ಮಾಡಿದರು.

ಪಾರಂಡಹಳ್ಳಿ ಗ್ರಾಪಂ ಅಧ್ಯಕ್ಷರು ಪಾರಂಡಹಳ್ಳಿ ಗ್ರಾಮವು ನಗರ ಪ್ರದೇಶಕ್ಕೆ ಹೊಂದಿಕೊಂಡಿದ್ದು ಅತಿ ದೊಡ್ಡ ಪಂಚಾಯ್ತಿಯಾಗಿದ್ದರು ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಕಚೇರಿಗೆ ಸ್ಥಳವಿಲ್ಲದೆ ಸಮಸ್ಯೆಯಾಗುತ್ತಿದ್ದು ಕಚೇರಿ ನಿರ್ಮಾಣಕ್ಕೆ ಜಮೀನು ಗುರುತಿಸಿಕೊಡುವಂತೆ ಮನವಿ ಸಲ್ಲಿಸಿದರು.

ಬಿ ಖಾತೆ: ವರದಿ ಬಳಿಕ ಕ್ರಮಚುನಾಯಿತ ಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ಬಂದಂತಹ ದೂರುಗಳನ್ನು ಸ್ವೀಕರಿಸಿ ಮಾತನಾಡಿದ ಸಿಇಒ ಪದ್ಮಬಸವಂತಪ್ಪ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಇಲಾಖೆಯ ಅನುಮತಿ ಪಡೆಯದೆ ಲೇಔಟ್‌ಗಳ ನಿರ್ಮಾಣ ಮಾಡಿರುವುದರಲ್ಲಿ ನಿರ್ಮಿಸಲಾಗಿರುವ ಮನೆಗಳಿಗೆ ಬಿ ಖಾತೆಗಳನ್ನು ನೀಡಲಾಗಿರುವುದನ್ನು ರದ್ದುಪಡಿಸಬೇಕೆಂದು ಮನವಿ ಸಲ್ಲಿಸಿದ್ದಾರೆ. ಇದರ ಬಗ್ಗೆ ತೀರ್ಮಾನ ಕೈಗೊಳ್ಳಲು ಸಮಿತಿ ರಚಿಸಲಾಗಿದ್ದು ವರದಿ ಬಂದ ನಂತರ ಕ್ರಮಕೈಗೊಳ್ಳಲಾಗುವುದು ಎಂದರು.

ಕಾಲಮಿತಿಯೊಳಗೆ ಪರಿಹಾರ

ಸಭೆಯಲ್ಲಿ ಮನೆಗಳು ಇಲ್ಲ ಸರ್ಕಾರಿ ಜಮೀನು ಒತ್ತುವರಿ ಸ್ಮಶಾನವಿಲ್ಲವೆಂದು ದೂರುಗಳು ಬಂದಿದ್ದು ಹಿಂದೆ ಗ್ರಾಮಗಳಲ್ಲಿನ ಜನಸಂಖ್ಯೆಗೆ ಅನುಗುಣವಾಗಿ ಎಲ್ಲವು ಲಭ್ಯವಿತ್ತು. ಆದರೆ ಕಾಲನಂತರ ಗ್ರಾಮಗಳು ಅಭಿವೃದ್ಧಿ ಹೊಂದಿದ ಹಿನ್ನಲೆಯಲ್ಲಿ ಕೆಲವು ಸಮಸ್ಯೆಗಳು ಕಾಡುತ್ತಿದ್ದು ಹಂತ ಹಂತವಾಗಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು, ಇಂದಿನ ಸಭೆಯಲ್ಲಿ ಬಂದಿರುವ ದೂರುಗಳನ್ನು ಕಾಲಮಿತಿಯೊಳಗೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಇಒ ಮಂಜುನಾಥ ಹರ್ತಿ, ಅಭಿವೃದ್ಧಿ ಅಧಿಕಾರಿಗಳಾದ ಏಜಾಜ ಪಾಷ, ಶ್ರೀನಿವಾಸ್, ಚಂದ್ರಕಲಾ ಇದ್ದರು.