ಕನ್ನಡಪ್ರಭ ವಾರ್ತೆ ಇಂಡಿ
ಅರ್ಥಿಕವಾಗಿ ಸದೃಢವಾಗಿರುವ, ಯುದ್ಧ ರಹಿತ, ಗಲಭೆ ರಹಿತ ದೇಶಗಳಿಗೆ ಮಾತ್ರ ನಿಂಬೆ ರಪ್ತು ಮಾಡಿ ಎಂದು ಬೆಂಗಳೂರಿನ ರಪ್ತು ಸಲಹೆಗಾರ ಡಾ.ನಾಗವೇಣಿ ಸಿ.ಆರ್. ಹೇಳಿದರು.ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮ ಬೆಂಗಳೂರು ಇವರ ಸಹಯೋಗದಲ್ಲಿ ನಡೆದ ಇಂಡಿ ನಿಂಬೆ ರಫ್ತು ಪ್ರಕ್ರಿಯೆ ಕುರಿತು ಅರಿವು ಮೂಡಿಸುವ ಕಾರ್ಯಾಗಾರದಲ್ಲಿ ಮಾತನಾಡಿದರು.
ನಿಂಬೆ ರಫ್ತು ಮಾಡುವ ರೈತ ಅಥವಾ ರೈತ ಸಂಘಟನೆಗಳು ಸಂಸ್ಥೆ ಸ್ಥಾಪಿಸಿ ಅದರ ಆಧಾರ್ ಕಾರ್ಡ್, ಪಾನ್ ಕಾರ್ಡ್, ಜಿಎಸ್ ಟಿ ನಂಬರ್, ಬ್ಯಾಂಕ್ ಖಾತೆ ನೀಡಿ ಆಮದು ಮತ್ತು ರಫ್ತು ಕೊಡಬೇಕು. ರಜಿಸ್ಟ್ರೇಷನ್ ಮಾಡಿ ಸರ್ಟಿಫಿಕೇಟ್ ಪಡೆಯಬೇಕು. ಆಮದು ರಪ್ತು ಬ್ಯಾಂಕ ಖಾತೆ ಮಾಡಿ ಇಸಿಜಿಸಿ ಇನ್ಶೂರೆನ್ಸ್ ಮತ್ತು ಎಚ್.ಎಸ್. ಕೋಡ್ ತೆಗೆದು ರಫ್ತು ಮಾಡಬಹುದು. ಇದಕ್ಕೆ ಅಪೆಡಾ ಸಂಸ್ಥೆ ಇಲ್ಲವೆ ಕರ್ನಾಟಕ ಕೃಷಿ ವಾಣಿಜ್ಯ ಅಭಿವೃದ್ಧಿ ನಿಗಮ ಸಂಪೂರ್ಣ ಸಹಕರಿಸುತ್ತದೆ. ನಮ್ಮಲ್ಲಿ ನಿಂಬೆ ಬೆಳೆಗೆ ಬಹಳ ಬೇಡಿಕೆ ಇದ್ದಾಗ ರಫ್ತು ಮಾಡಲು ಬರಲ್ಲ. ಇಂಡಿಯ ನಿಂಬೆಯನ್ನು ಜಗತ್ತಿನೆಡೆಗೆ ಕಳುಹಿಸಬಹುದು ಎಂದು ಹೇಳಿದರು.ನಿಂಬೆ ಗುಣಮಟ್ಟದಿಂದ ಕೂಡಿರಬೇಕು, ಇಂಡಿಯ ನಿಂಬೆಗೆ ೨೫ ದೇಶಗಳಲ್ಲಿ ಸಾಕಷ್ಟು ಬೇಡಿಕೆ ಇದೆ. ನಿಂಬೆ ಉಪ್ಪಿನಕಾಯಿ, ನಿಂಬೆ ಪೌಡರ್ ಸೇರಿ ಇನ್ನಿತರ ನಿಂಬೆ ಉಪುತ್ಪನ್ನ ತಯಾರಿಸಿ ರಫ್ತು ಮಾಡಬಹುದು ಎಂದರು.
ಇಂಡಿಯ ಕೃಷಿ ತಜ್ಞ ಡಾ. ಪ್ರೇಮಚಂದ್ರ ಮಾತನಾಡಿ, ನಿಂಬೆಗೆ ಬೆಳವಣಿಗೆ ಹಂತದಲ್ಲಿ ಕ್ಲೋರೊಪಿರಿಪಾಸ್, ಡೈಮಿಥೋಟ್, ಕಾರ್ಬೆಂಡಜಿನ್, ಸ್ಟೆಪ್ಟೋಮಾಯಿಸಿನ್ ಔಷಧ ಕೊಡಬಾರದು. ಕೊಟ್ಟರೆ ಗುಣಮಟ್ಟದ ನಿಂಬೆ ಬರುವುದಿಲ್ಲ.ವಿದೇಶದಲ್ಲಿ ಬೇಡಿಕೆ ಇರಲ್ಲ ಎಂದು ತಿಳಿಸಿದರು.
ಸಂಸ್ಥಾಪಕರು ಮತ್ತು ನಿರ್ದೇಶಕರು ಲಿಂಗರಾಜ ಮನಗೂಳಿ, ಡಾ.ಕಾರಂತ, ವಿಜಯಪುರ ಕೃಷಿ ವಿತರಣೆ ಕೇಂದ್ರ ಸಹ ವಿಸ್ತತರಣಾ ನಿರ್ದೇಶಕ ಡಾ.ಆರ್. ಜೊಳ್ಳಿ, ಇಂಡಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಶಿವಶಂಕರ ಮೂರ್ತಿ, ತೋಟಗಾರಿಕೆ ಉಪನಿರ್ದೇಶಕ ಡಾ.ಸಿದ್ದಲಿಂಗೇಶ್ವರ, ಕರ್ನಾಟಕ ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ರಾಹುಲ್ಕುಮಾರ ಭಾವಿದೊಡ್ಡಿ, ಡಾ.ವೀಣಾ, ತೋಟಗಾರಿಕೆಯ ಸತೀಶ ಬಡಿಗೇರ ಮಾತನಾಡಿದರು.ಡಾ.ಕಿರಣಕುಮಾರ ಗೋರಬಾಳ, ಡಾ.ಶ್ರೀಪಾದ ವಿಶ್ವೇಶ್ವರ, ರಾಮಕೃಷ್ಣ ಮತ್ತಿತರಿದ್ದರು.