ಸರ್ಕಾರಿ ಸೌಲಭ್ಯ ಬಳಸಿ ಪ್ರಗತಿ ಸಾಧಿಸಿ: ಜಯಪ್ಪ

| Published : May 27 2025, 12:36 AM IST / Updated: May 27 2025, 12:37 AM IST

ಸರ್ಕಾರಿ ಸೌಲಭ್ಯ ಬಳಸಿ ಪ್ರಗತಿ ಸಾಧಿಸಿ: ಜಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ದೋಣಿಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪುನಶ್ಚೇತನ ಶಿಬಿರ ಮತ್ತು 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ ಗ್ರಾಮದ ಶಾಲಾ ಆವರಣದಲ್ಲಿ ನಡೆಯಿತು.

- ದೋಣಿಹಳ್ಳಿಯಲ್ಲಿ ಸರ್ಕಾರಿ ಶಾಲಾ ಪ್ರಾರಂಭೋತ್ಸವ, ಪುನಶ್ಚೇತನಾ ಶಿಬಿರ

- - -

ಚನ್ನಗಿರಿ: ತಾಲೂಕಿನ ದೋಣಿಹಳ್ಳಿ ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪುನಶ್ಚೇತನ ಶಿಬಿರ ಮತ್ತು 2025-26ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಸೋಮವಾರ ಗ್ರಾಮದ ಶಾಲಾ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಜಯಪ್ಪ ಮಾತನಾಡಿ, ಗ್ರಾಮಸ್ಥರ ಸಹಕಾರ ಇಲ್ಲದಿದ್ದರೆ ಸರ್ಕಾರಿ ಶಾಲೆಗಳು ಪುನಶ್ಚೇತನಗೊಳ್ಳಲು ಸಾಧ್ಯವಿಲ್ಲ. ಇದೇ ಶಾಲೆಯಲ್ಲಿಯೇ ಓದಿದ ಹಳೆಯ ವಿದ್ಯಾರ್ಥಿಗಳು ಸಂಘವನ್ನು ರಚಿಸಿಕೊಂಡು ಆರು ವಿದ್ಯಾರ್ಥಿಗಳಿದ್ದ ಶಾಲೆಗೆ 32 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಸಿದ್ದಾರೆ. ಆ ಮೂಲಕ ಶಾಲೆಗೆ ಶಕ್ತಿ ತುಂಬಿದ್ದಾರೆ ಎಂದರು.

ಸರ್ಕಾರವು ಶಾಲೆಗಳ ಮತ್ತು ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ವಿದ್ಯಾರ್ಥಿಗಳು ಬಳಸಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕು ಎಂದರು.

ಹಳೇ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಜಗದೀಶ್ ಮಾತನಾಡಿ, ಸರ್ಕಾರಿ ಶಾಲೆಗಳೆಂದರೆ ತಾತ್ಸಾರ ಭಾವನೆಗಳು ಬೇಡ. ಮೇಧಾವಿಗಳಾದಂತವರೆಲ್ಲ ಸರ್ಕಾರಿ ಶಾಲೆಗಳಲ್ಲಿ ಕಲಿತವರೇ ಆಗಿದ್ದಾರೆ. ತಮ್ಮ ಗ್ರಾಮದ ಶಾಲೆ ಉಳಿದು ಬೆಳೆಯ ಬೇಕಾದರೆ ಗ್ರಾಮದ ಎಲ್ಲ ಜನರ ಸಹಕಾರ ಮುಖ್ಯವಾಗಿ ಬೇಕಾಗಿದೆ ಎಂದು ಹೇಳಿದರು.

ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಈ ಶಾಲೆಯಲ್ಲಿ ಆಂಗ್ಲ ಮಾಧ್ಯಮದವನ್ನು ಆರಂಭಿಸಲಾಗಿದೆ. ಶಾಲೆಯಲ್ಲಿ ಇಂದಿನಿಂದಲೇ ಮಕ್ಕಳ ಶಿಕ್ಷಣಕ್ಕೆ ಪೂರಕವಾಗುವಂತಹ ಸ್ಪೋಕನ್ ಇಂಗ್ಲಿಷ್, ಅಬಾಕಸ್ ಕ್ರಿಯಾಶೀಲತೆ ಇಂತಹ ಹಲವು ವಿಷಯಗಳನ್ನು ಕುರಿತಂತೆ ಬಸವ ಚೇತನಾ ಎಜುಕೇಷನಲ್ ಕೇರ್ ಮತ್ತು ಆಸರೆ ಎಜುಕೇಷನಲ್ ಅಂಡ್ ಚಾರಿಟಬಲ್ ಟ್ರಸ್ಟಿನ ವತಿಯಿಂದ ಮೇ 28ರವರೆಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಪುನಶ್ಚೇತನ ಶಿಬಿರ ನಡೆಸಲಿದ್ದಾರೆ ಎಂದರು.

ಶಿಬಿರದ ಉದ್ಘಾಟನೆಯನ್ನು ಗ್ರಾಪಂ ಸದಸ್ಯ ಸುನೀಲ್ ಕುಮಾರ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ಸುರೇಶ್, ಎಸ್.ಡಿ.ಎಂ.ಸಿ ಅಧ್ಯಕ್ಷ ಶಶಿಧರ್, ಶಿಕ್ಷಕರು ಹಾಜರಿದ್ದರು.

- - -

-26ಕೆಸಿಎನ್‌ಜಿ3: